Thursday, June 22, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -101


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅನಾದಿರ್ಭೂರ್ಭುವೋ ಲಕ್ಷ್ಮೀಃ ಸುವಿರೋ ರುಚಿರಾಂಗದಃ |
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ || 101 ||

೯೪೩) ಅನಾದಿಃ

ಭಗವಂತ ಆದಿ-ಅಂತ ಇಲ್ಲದವನು, ಆತನ ಸೃಷ್ಟಿ ಅನಾದಿನಿತ್ಯ.

೯೪೪) ರ್ಭೂರ್ಭುವೋ ಲಕ್ಷ್ಮೀಃ

ಈ ನಾಮವನ್ನು ಅನೇಕ ರೀತಿಯಲ್ಲಿ ಒಡೆದು ಬೇರೆ ಬೇರೆ ಅರ್ಥವನ್ನು ಕಾಣಬಹುದು. ಭೂಃ, ಭುವಃ, ಲಕ್ಷ್ಮೀಃ, ಭೂರ್ಭುವಃ, ಭುವೋ ಲಕ್ಷ್ಮೀಃ, ಭೂರ್ಭುವೋ ಲಕ್ಷ್ಮೀಃ ಇತ್ಯಾದಿ. ಭೂಃ ಎಂದರೆ ಸದಾ ಭವತಿ, ಎಂದೆಂದೂ ಆನಂದಮಯನಾಗಿರುವ ಪರಿಪೂರ್ಣ ಸ್ವರೂಪ; ಭುವಃ ಎಂದರೆ ಜಗತ್ತಿನಲ್ಲಿರುವ ಸರ್ವ ಉನ್ನತಿಕೆಯ ಉನ್ನತಿಯಲ್ಲಿರುವವನು, ಅದಕ್ಕಿಂತ ಮೇಲಿರುವ ಇನ್ನೊಂದು ವಸ್ತುವಿಲ್ಲ; ಲಕ್ಷ್ಮೀಃ ಎಂದರೆ ಸರ್ವ ಲಕ್ಷಣಗಳ ಸಾಕಾರ ಮೂರ್ತಿ. ರ್ಭೂರ್ಭುವೋ ಲಕ್ಷ್ಮೀಃ ಎಂದರೆ ಭೂಃ, ಭುವಃ ಸುವಃ -ಈ ಮೂರು ಲೋಕಗಳ ಸಂಪತ್ತಿನ ಒಡೆಯ.

೯೪೫) ಸವೀರಃ

ಪ್ರತಿಯೊಬ್ಬರೊಳಗಿದ್ದು, ಒಬ್ಬೊಬ್ಬರಲ್ಲಿ ಅವರವರ ಚೇತನದ ಸ್ಥಿತಿ-ಗತಿಗೆ ತಕ್ಕಂತೆ ಪ್ರೇರಣೆಯನ್ನು ಕೊಟ್ಟು ಆನಂದವನ್ನು ಕೊಡುವವನು ಸವೀರಃ. ಇಂತಹ ಸುಖ ಕಾರ್ಯಕ್ಕೆ ಅಡ್ಡಗಾಲಾಗಿ ಬರುವ ದುಷ್ಟ ಶಕ್ತಿಯನ್ನು ದಮನಮಾಡುವ ವೀರ ಭಗವಂತ ಸವೀರಃ. ಮಹಾ ವೀರರಾದ ಗರುಡ(ವಿ) ಮತ್ತು ಪ್ರಾಣ(ಈರ) ದೇವರಿಂದ ಸದಾ ಸುತ್ತುವರಿದಿರುವ ಭಗವಂತ ಸವೀರಃ.

೯೪೫) ರುಚಿರಾಂಗದಃ
ಸುಂದರವಾದ ತೊಳ್ಭಂದಿ ತೊಟ್ಟವನು. ಸದಾ ಬೆಳಕನ್ನು ಕೊಡುವ ಜ್ಞಾನಾನಂದಮಯವಾದ ಆಭರಣ ತೊಟ್ಟ ಭಗವಂತ ರುಚಿರಾಂಗದಃ. ಹೀಗೆ ಆನಂದಮಯವಾದ ಸ್ವರೂಪಭೂತವಾದ ಅಂಗವುಳ್ಳ ಭಗವಂತ ನಮಗೆ ಮೋಕ್ಷದಲ್ಲಿ ಸ್ವರೂಪಭೂತ ಶರೀರವನ್ನು ಕರುಣಿಸುವ ಕರುಣಾಮೂರ್ತಿ.

೯೪೭) ಜನನಃ

ಜನಯತೀತಿ ಜನನಃ; ಇಡೀ ಜಗತ್ತಿನ ಸೃಷ್ಟಿಗೆ ಕಾರಣನಾದ ಭಗವಂತ ಜನನಃ. ಅದೇ ರೀತಿ ಆತ ನಜನಯತಿ ಕೂಡಾ ಹೌದು. ಅಂದರೆ ನಮಗೆ ಹುಟ್ಟು ಇಲ್ಲದ ಮೋಕ್ಷ ಸ್ಥಿತಿಯನ್ನು ದಯಪಾಲಿಸುವವನು.

೯೪೯) ಜನಜನ್ಮಾದಿಃ

ಜೀವದ ಹುಟ್ಟಿಗೆ ಮೂಲ ಕಾರಣ ಭಗವಂತ-ಜನಜನ್ಮಾದಿಃ. ಪ್ರತಿಯೊಂದು ಜೀವಕ್ಕೆ ಒಂದು ಜನ್ಮವಿದೆ. ಈ ಜನ್ಮಕ್ಕೆ ಆದಿ ಕಾರಣ ಭಗವಂತ. ಜೀವದ ಹುಟ್ಟನ್ನು ಸ್ವೀಕಾರ ಮಾಡಿ ಮುಂದೆ ಹುಟ್ಟಿಲ್ಲದ ಮೋಕ್ಷವನ್ನು ಕರುಣಿಸುವ ಭಗವಂತ ಜನಜನ್ಮಾದಿಃ.

೯೪೯) ಭೀಮಃ

ತಪ್ಪು ಮಾಡಿದವರಿಗೆ ಭಯಂಕರ ಹಾಗು ಸಜ್ಜನರಿಗೆ ಅಭಯಂಕರನಾದ ಭಗವಂತ  ಭೀಮಃ.

೯೫೦) ಭೀಮಪರಾಕ್ರಮಃ

ಭಗವಂತನ ಪೌರುಷಕ್ಕೆ ಸಾಟಿ ಇಲ್ಲ. ಭಯ ಬರಿಸುವ ಪೌರುಷವುಳ್ಳ, ಸಜ್ಜನರಿಗೆ ಅಭಯಪ್ರದನಾದ ಭಗವಂತ ಭೀಮಪರಾಕ್ರಮಃ.

ಮುಂದುವರೆಯುವುದು....✍️💐

No comments:

Post a Comment