Tuesday, May 30, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -80


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅಮಾನೀ ಮಾನದೋ ಮಾನ್ಯೋ ಲೋಕಸ್ವಾಮೀ ತ್ರಿಲೋಕಧೃಕ್ |
ಸುಮೇಧಾ ಮೇಧಜೋ ಧನ್ಯಃ ಸತ್ಯಮೇಧಾ ಧರಾಧರಃ || 80 ||

೭೫೨)ಅಮಾನೀ

ಅ+ಮಾನೀ; ಅಂದರೆ ಮಾನ ಇಲ್ಲದವನು! ಇಲ್ಲಿ ಮಾನ ಎಂದರೆ ಅಭಿಮಾನ; 'ನನ್ನದು' ಎನ್ನುವ ಕ್ಷುದ್ರ ಮನೋವೃತ್ತಿ. ಇಂದ್ರಾದಿ ದೇವತೆಗಳಿಗೂ ಕೂಡಾ ಅಭಿಮಾನವಿದೆ, ಆದರೆ ಭಗವಂತನಿಗೆ ಇಂತಹ ಯಾವುದೇ ಅಭಿಮಾನವಿಲ್ಲ. ಇನ್ನು 'ಮಾನ' ಎಂದರೆ ನಾಶ, ಅಳತೆ, ಎನ್ನುವ ಅರ್ಥ ಕೂಡಾ ಇದೆ. ಅಳತೆಗೆ ಸಿಗದ, ನಾಶವಿಲ್ಲದ, ಯಾವುದೇ ಅಭಿಮಾನವಿಲ್ಲದ  ಅನಂತ ತತ್ವ ಭಗವಂತ ಅಮಾನೀ.

೭೫೩) ಮಾನದಃ

ನಮಗೆ ಅಭಿಮಾನವನ್ನು ಕೊಡುವವನು ಹಾಗೂ ನಮ್ಮ ಅಭಿಮಾನವನ್ನು ಕಳಚುವವನು. ನಮ್ಮ ಅಹಂಕಾರ ನಾಶಮಾಡುವ ಭಗವಂತ ಮಾನದಃ.

೭೫೪) ಮಾನ್ಯಃ

ಎಲ್ಲರಿಂದಲೂ ಪೂಜ್ಯನಾದ ಭಗವಂತ ಮಾನ್ಯಃ. ಭಗವಂತನನ್ನು ದ್ವೇಷಿಸುವವರು ಅಂತತಃ ಆತನನ್ನು ಹೆಚ್ಚು ನೆನೆಯುತ್ತಾರೆ! ಕಂಸನಿಗೆ ಕನಸಿನಲ್ಲಿ, ಎಚ್ಚರದಲ್ಲಿ, ನಿದ್ದೆಯಲ್ಲಿ, ಎಲ್ಲೆಲ್ಲೂ ಕೃಷ್ಣನೇ ಕಾಣುತ್ತಿದ್ದನಂತೆ. ನಾಸ್ತಿಕರು ದೇವರನ್ನು ದ್ವೇಷಿಸುವ ಭ್ರಮೆಯಲ್ಲಿ ಯಾವಾಗಲೂ ದೇವರ ಬಗ್ಗೆಯೇ ಚಿಂತಿಸುತ್ತಾರೆ. ಕೆಲವರಿಗೆ ಉಪಾಸನೆ ಮಾಡಲು, ಕೆಲವರಿಗೆ ನಿರಾಕರಣೆ ಮಾಡಲು, ಕೆಲವರಿಗೆ ಪ್ರೀತಿಮಾಡಲು, ಇನ್ನು ಕೆಲವರಿಗೆ ದ್ವೇಷಿಸಲು, ಹೀಗೆ ಎಲ್ಲರಿಗೂ ಭಗವಂತ ಮಾನ್ಯ.

೭೫೫) ಲೋಕಸ್ವಾಮೀ

ಈ ನಾಮಕ್ಕೆ ವಿಶೇಷ ವಿಶ್ಲೇಷಣೆಯ ಅಗತ್ಯವಿಲ್ಲ, ಕೇಳಿದಾಕ್ಷಣ ಅದರ ಅರ್ಥ ಹೊಳೆಯುತ್ತದೆ. ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಕೂಡಾ ನಾನು-ನನ್ನಿಂದ ಎನ್ನುವ ಭ್ರಮೆಯಲ್ಲಿರುತ್ತಾರೆ. ಆದರೆ ಎಲ್ಲವನ್ನೂ ಮಾಡಿಸುವ ಪರಶಕ್ತಿಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಈ ಲೋಕಕ್ಕೆ ಭಗವಂತನೊಬ್ಬನೇ ನಿಜವಾದ ಸ್ವಾಮಿ. ನಾನು-ನನ್ನದು ಎನ್ನುವುದು ಕೇವಲ ತಿಳಿಗೇಡಿತನ. ಇದನ್ನೇ ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ:

ತತ್ರೈವಂ ಸತಿ ಕರ್ತಾರಮಾತ್ಮಾನಂ ಕೇವಲಂ ತು ಯಃ |
ಪಶ್ಯತ್ಯಕೃತಬುದ್ಧಿತ್ವಾನ್ನ ಸ ಪಶ್ಯತಿ ದುರ್ಮತಿಃ ||

“ಏನೂ ಮಾಡದ ತನ್ನನ್ನು ಮಾಡುವವನು ಎಂದು (ತಾನೊಬ್ಬನೇ ಎಲ್ಲವನ್ನು ಮಾಡಿದವನು ಎಂದು) ತಿಳಿದವನು ಬುದ್ಧಿಗೇಡಿ. ಅಂತಹ ತಿಳಿಗೇಡಿಗಳಿಗೆ  ಏನೂ ತಿಳಿದಿಲ್ಲ”. ಆದ್ದರಿಂದ ಭಗವಂತನನ್ನು ಬಿಟ್ಟರೆ ಬೇರೆ ಯಾರೂ ಸ್ವಾಮಿ ಶಬ್ಧಕ್ಕೆ ಅರ್ಹರಲ್ಲ.

ಲೋಕ ಎಂದರೆ ಜ್ಞಾನಿ ಎನ್ನುವ ವಿಶೇಷ ಅರ್ಥವಿದೆ. ಭಗವಂತ ಎಲ್ಲರಿಗೂ ಸ್ವಾಮಿಯಾದರೂ ಕೂಡಾ ಜ್ಞಾನಿಗಳಿಗೆ ವಿಶೇಷ ಸ್ವಾಮಿ. ಏಕೆಂದರೆ ಇರುವಿಕೆ ಮುಖ್ಯವಲ್ಲ, ಇರವಿನ ಅರಿವು ಮುಖ್ಯ. ಆದ್ದರಿಂದ ಭಗವಂತ 'ಲೋಕಸ್ವಾಮಿ' ಎಂದು ತಿಳಿದ ಜ್ಞಾನಿಗಳಿಗೆ ಆತ ನಿಜವಾದ ಸ್ವಾಮಿ. ಉಳಿದವರು ಅರಿವಿಲ್ಲದೆ ಅವನನ್ನು ಕಳೆದುಕೊಳ್ಳುತ್ತಾರೆ.

೭೫೬) ತ್ರಿಲೋಕಧೃಕ್

ಮೂರು ಲೋಕವನ್ನು ಧರಿಸಿದ ಭಗವಂತ ತ್ರಿಲೋಕಧೃಕ್. ಪ್ರಾಚೀನರು ಬ್ರಹ್ಮಾಂಡವನ್ನು ಹದಿನಾಲ್ಕು ವಿಭಾಗವಾಗಿ ವಿಂಗಡಿಸಿದ್ದರು . ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ, ಭೂಲೋಕ, ಭುವರ್ಲೋಕ, ಸುವರ್ಲೋಕ, ತಪೋಲೋಕ, ಮಹಾಲೋಕ, ಜನರ್ಲೋಕ ಮತ್ತು ಸತ್ಯಲೋಕ. ಈ ಹದಿನಾಲ್ಕು ಲೋಕಗಳನ್ನೊಳಗೊಂಡ ಮೂರು ಪ್ರಮುಖ ಲೋಕಗಳೇ ತ್ರಿಲೋಕಗಳು. 'ಭೂಲೋಕ' ಹಾಗೂ ಅದರ 'ಮೇಲೆ ಏಳು' ಹಾಗು 'ಕೆಳಗಿನ ಆರು' ಲೋಕಗಳನ್ನು ಮೂರು ಲೋಕಗಳನ್ನಾಗಿ ಭೂಃ, ಭುವಃ, ಸ್ವಃ ಎಂದು ಕರೆಯುತ್ತಾರೆ. 'ಭೂಃ' ನಾವು ವಾಸವಾಗಿರುವ ಸ್ಥೂಲಲೋಕ. ಇತರ ಎರಡು ಲೋಕಗಳು ಸೂಕ್ಷ್ಮ ಲೋಕಗಳು. ಈ ಮೂರೂ ಲೋಕಗಳನ್ನು ಧರಿಸಿರುವ ಭಗವಂತ ತ್ರಿಲೋಕಧೃಕ್.

೭೫೭) ಸುಮೇಧಾಃ

'ಮೇಧಾ' ಎಂದರೆ ವಿಷಯಗಳನ್ನು ಮರೆಯದೆ ನೆನಪಿಟ್ಟುಕೊಳ್ಳುವ ಶಕ್ತಿ. ಕೇವಲ ಒಂದು ಜನ್ಮದ ವಿಷಯವಲ್ಲದೆ, ಜನ್ಮಜನ್ಮಾಂತರದ ವಿಷಯವನ್ನು ಕೂಡಾ ಸ್ಮರಣೆ ಮಾಡಿಕೊಳ್ಳುವ ಶಕ್ತಿ ಮೇಧಾವಿಗಳಿಗಿರುತ್ತದೆ.  ಭಗವಂತ ಎಂದೂ ಮರೆಯದ ಅರಿವಿನ ಕಡಲು. ಅನಂತ ಕಾಲದ ಸಂಪೂರ್ಣ ಸ್ಮರಣಶಕ್ತಿಯುಳ್ಳ ಭಗವಂತ ಸುಮೇಧಾಃ.

೭೫೮) ಮೇಧಜಃ

'ಮೇಧ' ಎಂದರೆ ಭಗವಂತನನ್ನು ಕುರಿತು ಮಾಡುವ ಯಜ್ಞ. (ಉದಾ: ಅಶ್ವಮೇಧ). ಯಜ್ಞಗಳಿಂದ ವ್ಯಕ್ತನಾಗುವ ಭಗವಂತ ಮೇಧಜಃ.

೭೫೯) ಧನ್ಯಃ

'ಧನ' ಎಂದರೆ ಸಂಪತ್ತು. ದುಡ್ಡು ನಿಜವಾದ ಧನವಲ್ಲ! ಯಾವುದನ್ನು ಹಂಚಿದಾಗ ಖರ್ಚಾಗುವುದಿಲ್ಲವೋ ಅದು ನಿಜವಾದ 'ಧನ' (ಉದಾ: ಗುಣ, ಜ್ಞಾನ). ನಿರಪೇಕ್ಷನೂ ಗುಣಪೂರ್ಣನೂ ಆದ ಭಗವಂತ ಧನ್ಯಃ.

೭೬೦) ಸತ್ಯಮೇಧಾಃ

ತಪ್ಪು ತಿಳುವಳಿಕೆಗಳಿಲ್ಲದ ಯಥಾರ್ಥವಾದ ಅರಿವಿನ ಮೂರ್ತಿ  ಭಗವಂತ ಸತ್ಯಮೇಧಾಃ.

೭೬೧) ಧರಾಧರಃ

ಈ ಧರಿತ್ರಿಯನ್ನು ಹೊತ್ತ ಶೇಷಶಾಯಿ ಭಗವಂತ ಧರಾಧರಃ.

ಮುಂದುವರೆಯುವುದು...✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -79


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ |
ವೀರಹಾ ವಿಷಮಃ ಶೂನ್ಯೋ ಘೃತಾಶೀರಚಲಶ್ಚಲಃ || 79 ||

೭೪೨) ಸುವರ್ಣವರ್ಣಃ

ಭಗವಂತ ಚಿನ್ನದ ಬಣ್ಣದವನು. ನಾವು ಭಗವಂತನನ್ನು ಕಾಣಬೇಕಾದರೆ ಮೊದಲು ನಮ್ಮ ಮನಸ್ಸನ್ನು ತಟಸ್ಥಗೊಳಿಸಬೇಕು. ಆಗ ನಮ್ಮ ಆತ್ಮ ಕೆಲಸ ಆರಂಭಿಸುತ್ತದೆ.  ಇದು ಸಮಾಧಿ ಸ್ಥಿತಿ. ಈ ಸ್ಥಿತಿಯಲ್ಲಿ ಆತ್ಮ ಸ್ವರೂಪದಿಂದ ಧ್ಯಾನ  ಮಾಡಿದಾಗ ಉದಿಸುವ ಸೂರ್ಯನಂತೆ ಕಂಗೊಳಿಸುವ ಭಗವಂತನ ದರ್ಶನವಾಗುತ್ತದೆ.      

೭೪೩) ಹೇಮಾಂಗಃ

ಭಗವಂತನ ಅಂಗಾಂಗವೂ ಚಿನ್ನದಂತೆ ಕಂಗೊಳಿಸುತ್ತಿರುತ್ತದೆ. ಆತ ಚಿನ್ನದಂತ ಮೈಯವನು.

೭೪೪) ವರಾಂಗಃ

ಭಗವಂತನ ಅಂಗಗಳು ಚಿನ್ನದಂತೆ ಕಂಗೊಳಿಸುತ್ತಿರುತ್ತದೆ. ಆದರೆ ಇದು ಯಾವುದೋ ಆಭರಣದ ಬಣ್ಣವಲ್ಲ. ಅದು ವರಾಂಗ. 'ವಾ' ಅಂದರೆ ಜ್ಞಾನ 'ರಂ' ಅಂದರೆ ಆನಂದ. ಜ್ಞಾನಾನಂದಮಯವಾದ ಅಂಗಗಳುಳ್ಳ ಭಗವಂತ ವರಾಂಗಃ.

೭೪೫) ಚಂದನಾಂಗದೀ

ಚಂದನ ಬಳಿದು ಅಂಗದ (ತೋಳ್ಬಳೆ) ತೊಟ್ಟವನು, ಸರ್ವಾಭರಣ ಸುಂದರ ಮೂರ್ತಿ.

೭೪೬) ವೀರಹಾ

ವೀರ+ಹಾ; ಅಂದರೆ ವೀರರ ಸಂಹಾರ ಮಾಡುವವನು! ಈ ನಾಮ 'ಜನಾರ್ದನ' ಎನ್ನುವ ನಾಮದಂತೆ. ಅಲ್ಲಿ 'ಜನ' ಎಂದರೆ 'ದುರ್ಜನ' ಇಲ್ಲಿ ವೀರ ಎಂದರೆ 'ತನ್ನ ಪರಾಕ್ರಮವನ್ನು ದುರ್ಬಲ ಜನರ ಮೇಲೆ ದಬ್ಭಾಳಿಕೆಯಾಗಿ ಉಪಯೋಗಿಸುವವರು'. ವಿ+ಈರ, ಅಂದರೆ ಈರನಿಗೆ(ಪ್ರಾಣನಿಗೆ) ವಿರುದ್ಧವಾಗಿ ನಿಲ್ಲುವ ಲೋಕಕಂಟಕರು. ಇಂತಹ ಸಮಾಜಕಂಟಕರನ್ನು ಸಂಹಾರ ಮಾಡುವ ಭಗವಂತ ವೀರಹಾ.

೭೪೭) ವಿಷಮಃ (ಅವಿಷಮಃ)

ಭಗವಂತ ವಿಷಮಃ, ಏಕೆಂದರೆ ಆತ ಯಾರಿಗೂ ಏಕ ರೂಪದಲ್ಲಿ ಏನನ್ನೂ ಕೊಡುವುದಿಲ್ಲ. ಆಯಾ ಜೀವಧರ್ಮಕ್ಕನುಗುಣವಾಗಿ ಭಗವಂತ ಸೃಷ್ಟಿ ನಿರ್ಮಾಣ ಮಾಡಿದ್ದಾನೆ. ಆದರೆ ಆತ ಅವಿಷಮಃ, ಏಕೆಂದರೆ ಆತನಿಗೆ ಯಾರ ಮೇಲೂ ದ್ವೇಷವಿಲ್ಲ; ಎಲ್ಲರೂ ಆತನಿಗೆ ಒಂದೇ.

೭೪೯) ಶೂನ್ಯಃ

ಕ್ಷ+ಊನ+ಯಾ-ಶೂನ್ಯ;  ಕ್ಷ+ಊನ-ಶೂನ ಅಂದರೆ 'ಆನಂದಹೀನ'; 'ಯಾ' ಎಂದರೆ ನಿಯಂತ್ರಿಸುವವ. ಆನಂದದಿಂದ ಊನವಾಗಿರುವ ಜೀವರನ್ನು ಜ್ಞಾನ ಕೊಟ್ಟು ನಿಯಂತ್ರಿಸುವ ಭಗವಂತ ಶೂನ್ಯಃ.  ನಾವು  ಆನಂದದಿಂದ ಊನವಾಗಿರಲು ಕಾರಣ ನಮ್ಮ ಅಜ್ಞಾನ. ಮನುಷ್ಯ ಸಾಮಾನ್ಯವಾಗಿ ಇನ್ನೊಬ್ಬರಿಂದ ನನಗೆ ಸುಖ ಸಿಗಬಹುದು ಎಂದು ಬಯಸುತ್ತಾನೆ. ಆದರೆ ಇದೇ ಮೂಲ ದುಃಖಕ್ಕೆ ಕಾರಣ. ತನ್ನೊಳಗೆ ನಿಜವಾದ ಸುಖ ಅಡಗಿದೆ ಎಂದು ತಿಳಿಯದೆ ಸುಖವನ್ನು ಅರಸುತ್ತ ಎಲ್ಲೆಲ್ಲೋ ಹೋಗುವುದು, ಬೇರೆಡೆಯಲ್ಲಿ ಸುಖವಿದೆ ಎನ್ನುವ ಭ್ರಮೆಯಿಂದಲೇ ದುಃಖಪಡುವುದು. ಇಂತಹ ಶೂನರಿಗೆ ಜ್ಞಾನವನ್ನು ಕೊಟ್ಟು ಉದ್ಧಾರ ಮಾಡುವ ಭಗವಂತ ಶೂನ್ಯಃ.

೭೪೯) ಘೃತಾಶೀಃ

ಆಸೆಗಳೇ ಇಲ್ಲದೆ ಬೆಳಗುವ ಇಚ್ಛಾರೂಪಿ ಭಗವಂತ ಘೃತಾಶೀಃ. ಆತ ತುಪ್ಪ ತಿನ್ನುವವನು ಎನ್ನುವ ಮೇಲ್ನೋಟದ ಅರ್ಥವನ್ನು ಈ ನಾಮ ಕೊಡುತ್ತದೆ. ಅಂದರೆ ಭಗವಂತ ಭಕ್ತಿಯಿಂದ ಕೊಡುವ ಯಾವುದೇ ಹವಿಸ್ಸನ್ನು ಸ್ವೀಕರಿಸುತ್ತಾನೆ ಎಂದರ್ಥ. ಹೋಮ ಮಾಡುವಾಗ ನಮ್ಮ ಪಿಂಡಾಂಡದ ೩೬೯ ಆಸ್ತಿಗಳನ್ನು, ಕಾಲ ಚಕ್ರದ ೩೬೦ ದಿನಗಳನ್ನು ಬಿಂಬಿಸುವ ೩೬೯ ಇಟ್ಟಿಗೆಯಿಂದ ಹೋಮ ಕುಂಡ ನಿರ್ಮಾಣ ಮಾಡಿ, ಅದರಲ್ಲಿ ಅಗ್ನಿಯನ್ನು ಆಹ್ವಾನ ಮಾಡಿ, ಗರ್ಭದಾನ, ಜನನ, ನಾಮಕರಣ ಅನ್ನಪ್ರಾಶನ ಉಪನಯನ ಇತ್ಯಾದಿ ಶೋಡಷ ಸಂಸ್ಕಾರವನ್ನು ಅಗ್ನಿಗೆ ಮಾಡುತ್ತಾರೆ. ಉರಿಯುವ ಅಗ್ನಿ ಜೀವ ಚೈತನ್ಯದ ಸ್ವರೂಪ. ಇಂತಹ ಅಗ್ನಿಯಲ್ಲಿ ಕಣ್ಣು ಬಾಯಿಯ ಪರಿಕಲ್ಪನೆ ಮಾಡಿ, ಮೊದಲು ಅಗ್ನಿ-ಸೋಮರ ಪ್ರತಿರೂಪವಾಗಿ ಚಕ್ಷುರ್ಹೋಮ (ಕಣ್ಣಿಗೆ ತುಪ್ಪದ ಅರ್ಪಣೆ) ಮಾಡಿ ಆನಂತರ ಬಾಯಿಗೆ ತುಪ್ಪವನ್ನು ಅರ್ಪಿಸುತ್ತಾರೆ. ಇದು ಅಗ್ನಿ ಮತ್ತು ಸೋಮರ ಅಂತರ್ಗತನಾಗಿ ಜಗತ್ತನ್ನು ನಡೆಸುವ, ಅಗ್ನಿ  ಮುಖೇನ ತುಪ್ಪವನ್ನು  ಆಹುತಿಯಾಗಿ ಸ್ವೀಕರಿಸುವ  ಭಗವಂತನ ಪರಿಕಲ್ಪನೆ.

೭೫೦) ಅಚಲಃ

ಸರ್ವವ್ಯಾಪ್ತನಾದ ಭಗವಂತ ಅಚಲಃ

೭೫೧) ಚಲಃ

ಎಲ್ಲಾ ಕಡೆಯೂ ಚಲಿಸುವವನು! [ಈ ರೀತಿಯ ವರ್ಣನೆ ಭಗವಂತನಿಗಲ್ಲದೆ ಇನ್ಯಾವುದೇ ವಸ್ತುವಿಗೆ ಮಾಡಲು ಸಾಧ್ಯವಿಲ್ಲ.  It moves (ಚಲಃ) ; it moves not (ಅಚಲಃ)]

ಮುಂದುವರೆಯುವುದು...✍️💐

Sunday, May 28, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -78


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಏಕೋ ನೈಕಃ ಸವಃ ಕಃ ಕಿಂ ಯತ್ತದ್ಪದಮನುತ್ತಮಮ್ |
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ || 78 ||

೭೩೦) ಏಕಃ

ಯಾರು  ಸರ್ವಕರ್ತನೋ, ಯಾರಿಂದ ಈ ಜಗತ್ತು ಸೃಷ್ಟಿಯಾಗಿದೆಯೋ ಅವನೇ ದೇವರು. ಆತನ ರೂಪ ಹಲವು, ನಾಮ ಹಲವು, ಆದರೆ ದೇವರು ಒಬ್ಬನೆ. ದೇವರು ಒಂದೊಂದು ಮತಕ್ಕೆ, ಒಂದೊಂದು ಬಾಷೆಗೆ,ಒಂದೊಂದು ಜನಾಂಗಕ್ಕೆ, ಒಂದೊಂದು ಜಾತಿಗೆ,ಒಂದೊಂದು ದೇಶಕ್ಕೆ, ಒಬ್ಬೊಬ್ಬ ಅಲ್ಲ. ಆತ ಒಬ್ಬನೆ; ಆತ ಏಕಃ.

೭೩೧) ನೈಕಃ

ಭಗವಂತ ಒಬ್ಬಂಟಿಯಲ್ಲ! ಬಿಂಬರೂಪನಾಗಿ ಅನಂತಜೀವರಲ್ಲಿ ನೆಲಸಿ ಒಬ್ಬನೇ ಅನೇಕವಾಗಿದ್ದಾನೆ!

೭೩೨) ಸವಃ

ಎಲ್ಲಾ ಯಜ್ಞಗಳಿಂದ(ಮಾನಸ, ಧ್ಯಾನ, ಪೂಜೆ, ಪ್ರಾರ್ಥನೆ, ದೈನಂದಿನ ಕರ್ಮ ಇತ್ಯಾದಿ) ಆರಾಧಿಸಲ್ಪಡುವ, ಜ್ಞಾನ ಸ್ವರೂಪ ಭಗವಂತ ಸವಃ.

೭೩೩) ಕಃ

ಕಃ ಅಂದರೆ 'ಯಾರು' ('Who' is the name of God); ಆನಂದ ಸ್ವರೂಪ ಭಗವಂತ ಕಃ.

೭೩೪) ಕಿಮ್

ಏನು ಎಂತು ಎಂದು ಎಲ್ಲರೂ ತಿಳಿಯಲು ಬಯಸುವ ವಸ್ತು; ಕಂ ಅಂದರೆ ಆನಂದ, ಕಿಮ್ ಎಂದರೆ ಅತಿಶಯ ಅಥವಾ ಅನಂತ ಆನಂದ ಸ್ವರೂಪ.

೭೩೫) ಯತ್

ಎಲ್ಲಾ  ಕಡೆ ತುಂಬಿರುವ, ಎಲ್ಲವನ್ನೂ ಬಲ್ಲ ಭಗವಂತ ಯತ್.

೭೩೬) ತತ್

ನಮ್ಮ ಒಳಗೆ, ನಮ್ಮ ಹೊರಗೆ ತುಂಬಿರುವ, ಕಾಲತಃ, ದೇಶತಃ, ಗುಣತಃ ಅನಂತವಾಗಿ ವ್ಯಾಪ್ತನಾದ ಭಗವಂತ ತತ್.

೭೩೭) ಪದಮನುತ್ತಮಮ್ (ಪದಮ್+ಅನುತ್ತಮಮ್)

ಎಲ್ಲರೂ ಕೊನೆಗೆ ಹೋಗಿ ಸೇರಬೇಕಾದ ಕೊನೆಯ ತಾಣ(Last destination of every soul); ಇದಕ್ಕಿಂತ ಉತ್ತಮ ಸ್ಥಾನ ಇನ್ನೊಂದಿಲ್ಲ(ಹಿರಿಯ ಗಮ್ಯ ಸ್ಥಾನ).

೭೩೮) ಲೋಕಬಂಧುಃ

ಭಗವಂತ ಜೀವ ಜಾತದ ಬಂಧು;ನಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾದ ಜಗತ್ತಿನ ಹಿರಿಯ; ಎಲ್ಲರಿಗೂ ಅತ್ಯಂತ ಹತ್ತಿರದ ಗೆಳೆಯ. ನಿಜವಾದ ಗೆಳೆಯರು ಎಂದೂ ತಪ್ಪನ್ನು ಹುಡುಕುವುದಿಲ್ಲ, ದೋಷಗಳನ್ನು ಎತ್ತಿಹಿಡಿಯುವುದಿಲ್ಲ. ಗೆಳೆತನದಲ್ಲಿ ಸ್ವಾರ್ಥವಿರುವುದಿಲ್ಲ. ನಿಸ್ವಾರ್ಥವಾಗಿ, ಕಾರಣವಿಲ್ಲದೆ ಒಬ್ಬರಿಗೊಬ್ಬರು ಸ್ಪಂದಿಸುವವರು 'ಸ್ನೇಹಿತರು'. ಇಂತಹ ನಿಸ್ವಾರ್ಥ ಬಾಂಧವ್ಯ ಗಂಡ-ಹೆಂಡಿರ ನಡುವೆ, ತಂದೆ-ತಾಯಿ-ಮಕ್ಕಳ ನಡುವೆ ಇರುವುದಿಲ್ಲ. ಭಗವಂತ ಒಬ್ಬ ಆತ್ಮೀಯ ಗೆಳೆಯನಂತೆ. ನಮ್ಮ ಸರ್ವದೋಷಗಳನ್ನು ಕಡೆಗಣಿಸಿ ಸ್ವೀಕರಿಸುವ ಕರುಣಾಸಿಂಧು. ತಪ್ಪುಗಳನ್ನು ಕ್ಷಮಿಸಿ ನಮ್ಮನ್ನು ಮೇಲೆತ್ತುವ, ಜಗತ್ತನ್ನು ಉದ್ಧರಿಸುವ ಲೋಕಬಂಧುಃ.

೭೩೯) ಲೋಕನಾಥಃ

ಎಲ್ಲರನ್ನೂ ಪ್ರೀತಿಸಿ ಸಲಹುವ ಲೋಕದ ಸ್ವಾಮಿ.

೭೪೦) ಮಾಧವಃ
'ಮಾ' ಎಂದರೆ 'ಇಲ್ಲ' ; 'ಧವ' ಎಂದರೆ ನಿಯಂತ್ರಿಸತಕ್ಕ ಯಜಮಾನ. ಭಗವಂತನನ್ನು ನಿಯಂತ್ರಿಸುವ ಇನ್ನೊಬ್ಬ ಯಜಮಾನ ಅಥವಾ ಸ್ವಾಮಿ ಯಾರೂ ಇಲ್ಲ.

೭೪೧) ಭಕ್ತವತ್ಸಲಃ

ಭಕ್ತಿಗೆ ಕರಗುವ ಭಗವಂತ ಭಕ್ತವತ್ಸಲಃ. ಭಕ್ತಿ ಎಂದರೆ ಸಮರ್ಪಣಾಭಾವ. 'ನಾನು ಏನೂ ಅಲ್ಲ, ನನ್ನನ್ನು ನಿನ್ನ ಪಾದದಲ್ಲಿ ಅರ್ಪಿಸಿಕೊಂಡಿದ್ದೇನೆ, ನನ್ನ ರಕ್ಷಣೆಯ ಭಾರ ನಿನ್ನದು' ಎನ್ನುವ ಅರ್ಪಣಾ ಭಾವ. ಸ್ವಾರ್ಥ ರಹಿತವಾಗಿ ಭಗವಂತನನ್ನು ಪ್ರೀತಿಸುವುದೇ ಭಕ್ತಿ. ಒಬ್ಬ ಸ್ನೇಹಿತ ಇನ್ನೊಬ್ಬ ಸ್ನೇಹಿತನನ್ನು ಹೇಗೆ ನಿಸ್ವಾರ್ಥವಾಗಿ ಪ್ರೀತಿಸುತ್ತಾನೋ ಹಾಗೇ ನಾವು ಭಗವಂತನನ್ನು ಪ್ರೀತಿಸಬೇಕು. ಯಾವ ಕಾರಣಕ್ಕೂ ಸ್ವಾರ್ಥಕ್ಕೆ ಎಡೆ ಇರಬಾರದು. ಭಗವಂತನೆಂದರೆ ಭಯಾನಕ ವಸ್ತು ಎಂದು ಭಯದಿಂದ ಪೂಜಿಸದೇ, ಪ್ರಹಲ್ಲಾದನಂತೆ ಪ್ರೀತಿಯಿಂದ ಮಾಡುವ ಭಕ್ತಿಗೆ ಕರಗುವ ಭಗವಂತ ಭಕ್ತವತ್ಸಲಃ.

ಮುಂದುವರೆಯುವುದು...✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -77


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ವಿಶ್ವಮೂರ್ತಿರ್ಮಹಾಮೂರ್ತಿಃ ದೀಪ್ತಮೂರ್ತಿರಮೂರ್ತಿಮಾನ್ |
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ  || 77 ||

೭೨೨) ವಿಶ್ವಮೂರ್ತಿಃ

ಭಗವಂತ ವಿಶ್ವಮೂರ್ತಿ, ವಿಶ್ವದ ಎಲ್ಲಾ ವಸ್ತುಗಳಲ್ಲೂ ಆತನ ಸನ್ನಿಧಾನವಿದೆ. ನಾವು ಮಾಡುವ ಪ್ರತಿಮೆಗಿಂತ ಹಿರಿಮೆಯುಳ್ಳ ಪ್ರತಿಮೆ ಭಗವಂತನೇ ಮಾಡುವ ಪ್ರತಿಮೆ. ಉದಾಹರಣೆಗೆ ನೇಪಾಳದ ಘಂಡಕಿ ನದಿಯಲ್ಲಿ ಸಿಗುವ ಶಾಲಿಗ್ರಾಮ, ನರ್ಮದಾ ನದಿಯಲ್ಲಿ ಸಿಗುವ ಶಿವಲಿಂಗ ಇತ್ಯಾದಿ. ಇಷ್ಟೇ ಅಲ್ಲದೆ ಬೆಟ್ಟಗಳು, ನದಿಗಳೂ  ಕೂಡಾ ಆತನ ಪ್ರತೀಕ. ಬದರಿಯ ನರ-ನಾರಾಯಣ ಪರ್ವತ, ಹಿಮಾಲಯದ ಕೈಲಾಸ ಪರ್ವತ, ಗಂಗಾತೀರ್ಥ  ಇತ್ಯಾದಿ.  ಅಗ್ನಿಯಲ್ಲಿ ಅಗ್ನಿನಾರಾಯಣ, ಸೂರ್ಯನಲ್ಲಿ ಸೂರ್ಯನಾರಾಯಣ, ಮರದಲ್ಲಿ(ಅಶ್ವತ್ಥ), ಗೋವುಗಳಲ್ಲಿ ಹೀಗೆ ಸಮಸ್ಥ ವಿಶ್ವವೇ ಆತನ ಪ್ರತೀಕ.

೭೨೩) ಮಹಾಮೂರ್ತಿಃ

ಇಡೀ ಬ್ರಹ್ಮಾಂಡವೇ ಪ್ರತೀಕವಾಗಿರುವ, ಸರ್ವವ್ಯಾಪಿ ರೂಪವುಳ್ಳ ಭಗವಂತ ಮಹಾಮೂರ್ತಿಃ.

೭೨೪) ದೀಪ್ತಮೂರ್ತಿಃ

ಎಲ್ಲಾ ಕಡೆಯೂ ಬೆಳಕಿನ ಪುಂಜವಾಗಿರುವ, ಪ್ರಕಾಶ ಸ್ವರೂಪ ಭಗವಂತ ದೀಪ್ತಮೂರ್ತಿಃ.

೭೨೫) ಅಮೂರ್ತಿಮಾನ್

ಭಗವಂತ ಜ್ಞಾನಾನಂದ ಸ್ವರೂಪಿ, ಆತನಿಗೆ ಪಾಂಚಭೌತಿಕವಾದ ರೂಪವಿಲ್ಲ. ಆದ್ದರಿಂದ ಆತ ಅಮೂರ್ತಿಮಾನ್.

೭೨೬) ಅನೇಕಮೂರ್ತಿಃ

ಭಗವಂತ ಒಂದೊಂದು ಕಡೆ ಒಂದೊಂದು ರೂಪದಲ್ಲಿ ತುಂಬಿದ್ದಾನೆ. ಪಂಚಕೋಶಗಳಲ್ಲಿ, ಕರ್ಮೆಂದ್ರಿಯಗಳಲ್ಲಿ, ಜ್ಞಾನೇಂದ್ರಿಯಗಳಲ್ಲಿ, ಪಂಚಭೂತಗಳಲ್ಲಿ, ಹೀಗೆ ಅನೇಕ ರೂಪದಲ್ಲಿ ನಮ್ಮ ಒಳಗೂ ಹೊರಗೂ ತುಂಬಿರುವ ಭಗವಂತ ಅನೇಕಮೂರ್ತಿಃ.

೭೨೭) ಅವ್ಯಕ್ತಃ

ಭಗವಂತ ಸರ್ವವ್ಯಾಪಿಯಾದರೂ ಸಹ ಆತ ವ್ಯಕ್ತನಾಗಿ ಕಾಣಿಸಿಕೊಳ್ಳದ ಅವ್ಯಕ್ತ ಮೂರ್ತಿ.

೭೨೮) ಶತಮೂರ್ತಿಃ

ಅನಂತ ರೂಪಿ ಭಗವಂತ ಶತಮೂರ್ತಿಃ. ಆತನ ಒಂದೊಂದು ಅವತಾರದಲ್ಲೂ ನೂರಾರು ರೂಪಗಳು. ಇದನ್ನು ಕೃಷ್ಣ ಅಷ್ಟೋತ್ತರ ಶತನಾಮದಲ್ಲಿ, ನರಸಿಂಹ ಅಷ್ಟೋತ್ತರ ಶತನಾಮದಲ್ಲಿ ಹಾಗು ರಾಮ ಅಷ್ಟೋತ್ತರ ಶತನಾಮದಲ್ಲಿ ಕಾಣಬಹುದು.ನಾರಾಯಣ ಅಷ್ಟೋತ್ತರದಲ್ಲಿ ಆತನ ೧೦೮ ರೂಪಗಳ ವರ್ಣನೆಯಿದೆ; ಸಹಸ್ರನಾಮದಲ್ಲಿ  ಆತನ ಸಹಸ್ರ ರೂಪಗಳು, ಹೀಗೆ ನೂರಾರು ರೂಪಗಳುಳ್ಳ ಭಗವಂತ ಶತಮೂರ್ತಿಃ.

೭೨೯) ಶತಾನನಃ

ಭಗವಂತ ಅನಂತ ಮುಖದವನು. ಚತುರ್ಮುಖ ಬ್ರಹ್ಮ(ಶತಾನಂದ) ಮೊಟ್ಟಮೊದಲು ಸೃಷ್ಟಿಯ ಆದಿಯಲ್ಲಿ ಕಂಡ ವಿಶ್ವರೂಪ. ‘ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್' ಎಂದು ಭಗವಂತನನ್ನು ಪುರುಷಸೂಕ್ತದಲ್ಲಿ ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಎಂದರೆ ಸಹಸ್ರ-ಸಹಸ್ರ ಶಿರಸ್ಸನ್ನು ಹೊಂದಿರುವವನು ಎಂದರ್ಥ.

ಮುಂದುವರೆಯುವುದು...✍️💐

Friday, May 26, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -76


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋsನಲಃ |
ದರ್ಪಹಾ ದರ್ಪದೋ ದೃಪ್ತೋ ದುರ್ಧರೋsಥಾsಪರಾಜಿತಃ || 76 ||

೭೧೩) ಭೂತಾವಾಸಃ

ಎಲ್ಲಾ ಭೂತಗಳ ಒಳಗೆ ಆವಾಸ ಮಾಡುವ ಭಗವಂತ ಭೂತಾವಾಸಃ. ಚೇತನಾಚೇತನ, ಚರಾಚರಾತ್ಮಕ, ಸಮಸ್ತ ಪ್ರಾಣಿಗಳ ಒಳಗೆ, ಪಂಚಭೂತಗಳಲ್ಲಿ ನೆಲೆಸಿರುವ ಭಗವಂತ ಭೂತಾವಾಸಃ.

೭೧೪) ವಾಸುದೇವಃ

ನಮ್ಮ ಜೀವನದಲ್ಲಿ ಎಚ್ಚರ-ಕನಸು-ನಿದ್ದೆ  ಈ ಮೂರು ಹಂತಗಳು ಯಾವಾಗಲೂ ಇರುತ್ತವೆ. ಈ ಹಂತಗಳಿಗೆ ಭಗವಂತನ ಅರಿವೂ ಬೇಡ, ಕುಂಡಲಿನಿ ಜಾಗೃತವಾಗುವುದು ಬೇಡ. ಈ ಹಂತಗಳನ್ನು ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧರೂಪಿ ಭಗವಂತ ನಿಯಂತ್ರಿಸುತ್ತಾನೆ. ಈ ಮೂರು ಹಂತಗಳ ಆಚೆಗಿನ ಸ್ಥಿತಿ 'ತುರಿಯ'. ಈ ಸ್ಥಿತಿಯನ್ನು ತಲುಪಬೇಕಾದರೆ ಕುಂಡಲಿನಿ ಜಾಗೃತವಾಗಬೇಕು. ಈ ಸ್ಥಿತಿಯನ್ನು ನಿಯಂತ್ರಿಸುವ ಭಗವಂತನ ರೂಪ ವಾಸುದೇವ ರೂಪ. ಜ್ಞಾನಾನಂದದ ಸ್ಫುರಣದೊಂದಿಗೆ, ಅಂತರಂಗದ ಜಾಗೃತಾವಸ್ಥೆಯಲ್ಲಿ, ಅಂತರಾತ್ಮನನ್ನು ಕಾಣುವ ಅನುಭೂತಿಗೊಳಪಡಿಸುವ ಭಗವಂತ ವಾಸುದೇವಃ.

೭೧೫) ಸರ್ವಾಸುನಿಲಯಃ

ಪ್ರತಿಯೊಂದು ಜೀವದೊಳಗೆ,ಪ್ರತಿಯೊಂದು ಇಂದ್ರಿಯದಲ್ಲಿ ನೆಲೆಸಿರುವ, ಸರ್ವ ಪ್ರಾಣಿಗಳಿಗಾಸರೆಯಾದ ಭಗವಂತ ಸರ್ವಾಸುನಿಲಯಃ.

೭೧೬) ಅನಲಃ

ಮಿತಿಯಿಲ್ಲದ ಶಕ್ತಿ ಸಂಪನ್ನ, ಅಗ್ನಿಯ ಅಂತರ್ಯಾಮಿ ಭಗವಂತ ಅನಲಃ.

೭೧೭) ದರ್ಪಹಾ

ದರ್ಪ+ಹಾ; ದರ್ಪವನ್ನು ದಮನಿಸುವ(ನಾಶಮಾಡುವ) ಭಗವಂತ ದರ್ಪಹಾ. ಸಾಮಾನ್ಯವಾಗಿ ಮನುಷ್ಯನಿಗೆ ಅನುಕೂಲ, ಅಧಿಕಾರ ಸಿಕ್ಕಾಗ ಅದರಿಂದ ಅಹಂಕಾರ ಬರುತ್ತದೆ. ಶ್ರೀಮಂತಿಕೆಯ ಮದ, ಯೌವನದ ಮದ, ಅಧಿಕಾರದ ಮದ, ವಿದ್ಯೆಯ ಮದ, ಹೀಗೆ ಅನೇಕ ಕಾರಣದಿಂದಾಗಿ ತಾನು ದೊಡ್ಡ ವ್ಯಕ್ತಿ ಎನ್ನುವ ದರ್ಪ ನಮ್ಮಲ್ಲಿ ಮನೆಮಾಡುತ್ತದೆ. ಇದರ ಪರಿಣಾಮ ನಾವು ಇನ್ನೊಬ್ಬರನ್ನು ಕೀಳಾಗಿ ಕಾಣುತ್ತೇವೆ. ಕೆಲವೊಮ್ಮೆ ಒಳ್ಳೆಯವರೂ ಕೂಡಾ ಇಂತಹ ದರ್ಪಕ್ಕೆ ಬಲಿಬೀಳುತ್ತಾರೆ. ಇಂತಹ ಸಂದರ್ಭದಲ್ಲಿ ಭಗವಂತ ನಮ್ಮ ದರ್ಪ ಹರಣ ಮಾಡುತ್ತಾನೆ. ವಿಷ್ಣು ಪುರಾಣದಲ್ಲಿ ಹೇಳುವಂತೆ "ಯಸ್ಯ ಅನುಗ್ರಹಂ ಇಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ" ಶ್ರೀಮಂತಿಕೆಯಿಂದ ಭಗವಂತನನ್ನು ಮರೆಯುವ ಸಂದರ್ಭ ಬಂದಾಗ ಅಂತವರನ್ನು ದಿವಾಳಿ ಮಾಡಿ ಉದ್ಧರಿಸುವ ಭಗವಂತ ದರ್ಪಹಾ.

ಇದನ್ನೇ ಭಾಗವತದಲ್ಲಿ ಹೀಗೆ ಹೇಳಿದ್ದಾರೆ:

ಯಸ್ಯಾನುಗ್ರಹಮಿಚ್ಛಾಮಿ ಹರಿಷ್ಯೇ ತದ್ ಧನಂ ಶನೈಃ |
ತತೋsಧನಂ ತ್ಯಜಂತ್ಯಸ್ಯ ಸ್ವಜನಾ ದುಃಖದುಃಖಿನಮ್ ||

ಭಗವಂತನ ಮೊದಲ ಪರೀಕ್ಷೆ ಭಕ್ತನ ಕಿಸೆ ಖಾಲಿ ಮಾಡುವುದು. ಕ್ರಮೇಣ ಕೈಯಲ್ಲಿದ್ದ ದುಡ್ಡೆಲ್ಲ ಕರಗಿತು ಎನ್ನುವಾಗ ಬಂಧು-ಬಾಂಧವರು ದೂರ ಸರಿಯುತ್ತಾರೆ. ದುಡ್ಡಿದ್ದಷ್ಟು ಕಾಲ ಬೆನ್ನ ಹಿಂದೆ ಜನ ತಿರುಗಾಡುತ್ತಾರೆ. ಗೌರವ ಸ್ಥಾನಮಾನ ಸಿಗುತ್ತದೆ. ಇದರಿಂದ ಅಹಂಕಾರ ಬಲಿಯುತ್ತದೆ. ದೇವರ ಸ್ಮರಣೆ ಮರೆಯಾಗುತ್ತದೆ. ದುಡ್ಡಿಲ್ಲದಾಗ, ಎಲ್ಲಾ ಜನ ಕೈಬಿಟ್ಟಾಗ ಭಗವಂತ ಕೈಹಿಡಿಯುತ್ತಾನೆ!

   
೭೧೮) ದರ್ಪದಃ

ನಮ್ಮ ದರ್ಪ ಹರಣ ಮಾಡುವ ಭಗವಂತ, ನಮಗೆ ದರ್ಪದ ಅಗತ್ಯವಿದ್ದಾಗ ಅದನ್ನು ಕೊಡುವವನೂ ಅವನೇ ! ದುಷ್ಟರ ವಿರುದ್ಧ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಕೆಚ್ಚನ್ನು ಕೊಡುವ ಭಗವಂತ ದರ್ಪದಃ. ಆತ ಸೌಜನ್ಯ ಅನ್ಯಾಯಕ್ಕೆ ಶರಣಾಗುವ ಸ್ಥಿತಿಬಂದಾಗ ನಮಗೆ ದರ್ಪವನ್ನು ಕೊಟ್ಟು ಸಲಹುತ್ತಾನೆ.

೭೧೯) ದೃಪ್ತಃ

ಯಾರಿಗೂ ಮಣಿಯದ ನಿತ್ಯತೃಪ್ತ ಭಗವಂತ, ದುಷ್ಟರಲ್ಲಿದ್ದು ದರ್ಪ ತೋರಿಸುವ ದೃಪ್ತಃ.

೭೨೦) ದುರ್ಧರಃ

ಭಗವಂತ ಸುಲಭದಲ್ಲಿ ಧ್ಯಾನಕ್ಕೆ ಸಿಗದವನು. ಆತ 'ಏನು'  'ಎಂತು' ಎಂದು ತಿಳಿಯುವುದು ಕಷ್ಟ. ಆತನನ್ನು ತಿಳಿಯಲು ಅನೇಕ ಜನ್ಮದ ಸಾಧನೆ ಬೇಕು.

೭೨೧) ಅಪರಾಜಿತಃ

ಎಂದೂ ಸೋಲರಿಯದ ಭಗವಂತ ಅಪರಾಜಿತಃ.

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -75


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸದ್ಗತಿಃ ಸತ್ಕ್ರತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ |
ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಸ್ಸುಯಾಮುನಃ || 75 ||

೭೦೪) ಸದ್ಗತಿಃ

ಭಗವಂತನ ಗುಣಗಾನ ಮಾಡುತ್ತಾ ನಾಮ ಜಪ ಮಾಡುತ್ತಾ ಕುಳಿತರೆ ನಮ್ಮ ದೈನಂದಿನ ಚಟುವಟಿಕೆಯನ್ನು ಯಾರು ಮಾಡುತ್ತಾರೆ? ಈ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ. ನಾವು ಮಾಡುವ ನಮ್ಮ ದೈನಂದಿನ ಕೆಲಸ ಕಾರ್ಯವನ್ನು ಭಗವದರ್ಪಣೆಯಾಗಿ ಮಾಡುವುದೇ ಮಹಾ ಹವನ. ಇದು ಸಜ್ಜನರಿಗೆ ಗಮ್ಯನಾದ ಭಗವಂತನನ್ನು ಸೇರಲು ಇರುವ ಅತ್ಯಂತ  ಸರಳ ವಿಧಾನ. ಹೀಗೆ ಸಜ್ಜನರಿಗೆ, ಜ್ಞಾನಿಗಳಿಗೆ, ಸಾತ್ವಿಕರಿಗೆ ಗಮ್ಯನಾದ ಭಗವಂತ ಸದ್ಗತಿಃ.

೭೦೫) ಸತ್ಕೃತಿಃ

ನಮ್ಮಿಂದ ಸಮೀಚೀನವಾದ ಕ್ರಿಯೆಯನ್ನು ಮಾಡಿಸಿ, ನಮ್ಮ ಜ್ಞಾನವನ್ನು ವೃದ್ಧಿ ಮಾಡಿಸುವ ಭಗವಂತ ಸತ್ಕೃತಿಃ.

೭೦೬) ಸತ್ತಾ

'ಸತ್ತಾ' ಅಂದರೆ 'ಇರುವಿಕೆ'.  ಈ ಜಗತ್ತಿನಲ್ಲಿ ಇರುವ ಏಕಮಾತ್ರ 'ನಿರ್ದೋಷತ್ವವಾದ ಇರುವಿಕೆ' ಕೇವಲ ಭಗವಂತ. ಯಾವ ದೋಷವೂ ಇಲ್ಲದ ಪರಿಶುದ್ಧ ಇರುವಿಕೆಯ ಭಗವಂತ ಸತ್ತಾ.

೭೦೬) ಸದ್ಭೂತಿಃ

ಸಜ್ಜನರಿಗೆ ಭೂತಿಯನ್ನು ಕೊಡುವ ಭಗವಂತ, ಜ್ಞಾನಿಗಳಿಗೆ ಉನ್ನತಿಯನ್ನು ಕೊಟ್ಟು ಎತ್ತರಕ್ಕೇರಿಸುವ ಸದ್ಭೂತಿಃ.

೭೦೮) ಸತ್ಪರಾಯಣಃ

ಸಜ್ಜನರು ಹೋಗಿ ಸೇರಬೇಕಾದ ಕೊನೆಯ ನಿಲುದಾಣ. ಅಲ್ಲಿಂದ ಮುಂದೆ  ಪ್ರಯಾಣವಿಲ್ಲ. ನಮ್ಮ ಪಯಣದ ಕೊನೆಯ ನಿಲ್ದಾಣ ಭಗವಂತ ಸತ್ಪರಾಯಣಃ

೭೦೯) ಶೂರಸೇನ

ಶೂರರಾದ ಸೈನಿಕರ ಪಡೆಯುಳ್ಳವನು  ಶೂರಸೇನ. ಭಗವಂತನ ಸೇನೆ ದೇವತೆಗಳ ಸೇನೆ. ಭಗವಂತ ದೇವತೆಗಳ ಜೊತೆಗಿರುವ ತನಕ ಅವರಿಗೆ ಎಂದೂ ಸೋಲಿಲ್ಲ. ಆದರೆ ಅಹಂಕಾರದಿಂದ ದೇವರಿಂದ ದೂರ ಸರಿದವರಿಗೆ ಎಂದೂ ಜಯವಿಲ್ಲ!

೭೧೦) ಯದುಶ್ರೇಷ್ಠಃ

ಯದುವಂಶದಲ್ಲಿ ಶ್ರೇಷ್ಟನಾಗಿ ಹುಟ್ಟಿಬಂದ, ಎಲ್ಲರಿಗಿಂತ ಹಿರಿಯ ಭಗವಂತ ಯದುಶ್ರೇಷ್ಠಃ

೭೧೧) ಸನ್ನಿವಾಸಃ

ಸಜ್ಜನರಿಗೆ ಸದಾ ನೆಲೆಯಾದ ಭಗವಂತ ಸದಾ ಅವರಲ್ಲಿ ನಿವಾಸ ಮಾಡುವ ಸನ್ನಿವಾಸಃ.

೭೧೨) ಸುಯಾಮುನಃ

ಯಮುನೆಯ ನೀರನ್ನು ನಿರ್ದೋಷಗೊಳಿಸಿದ ಭಗವಂತ ಸುಯಾಮುನಃ. ಯಮುನೆಯ ನೀರು ಕಾಲಿಯನ ವಿಷದಿಂದ ಕೆಟ್ಟು ಹೋದಾಗ, ಆ ಕಾಲಿಯನ ತಲೆಯಮೇಲೆ ನಿಂತು ನಲಿದಾಡಿ ಯಮುನೆಯನ್ನು ಸ್ವಚ್ಚಗೊಳಿಸಿ ಹೊಸ ಚೈತನ್ಯವನ್ನು ಕೊಟ್ಟ ಭಗವಂತ ಸುಯಾಮುನಃ
ನಮ್ಮ ಒಳ ಪ್ರಪಂಚದಲ್ಲೂ ಯಮುನೆಯೊಬ್ಬಳಿದ್ದಾಳೆ. ಇದು ನಮ್ಮೊಳಗಿರುವ ಶಕ್ತಿ ಕೇಂದ್ರಗಳಿಗೆ ಸಂಬಂಧಪಟ್ಟ ವಿಷಯ. ನಮ್ಮ ಮೂಲಾಧಾರದ ಎಡಭಾಗಕ್ಕೆ 'ಇಡಾ' ಹಾಗು ಬಲ ಭಾಗಕ್ಕೆ 'ಪಿಂಗಳ' ಎನ್ನುವ ಎರಡು ನಾಡಿಗಳು ಹಾವಿನಂತೆ ಸುಷಮ್ನಾ ನಾಡಿಯನ್ನು ಹೆಣೆದುಕೊಂಡು ಊರ್ಧ್ವಮುಖವಾಗಿ ಆಜ್ಞಾ ಚಕ್ರದಲ್ಲಿ ಸಂಗಮಿಸುತ್ತವೆ. ಈ ನಾಡಿಗಳನ್ನು ಗಂಗಾ(ಇಡಾ), ಯಮುನಾ(ಪಿಂಗಳ) ಹಾಗು ಸರಸ್ವತಿ(ಸುಷಾಮ್ನಾ) ಎಂದು ಕರೆಯುತ್ತಾರೆ. ಕುಂಡಲಿನಿ ನಿಯಂತ್ರಣ ತಿಳಿಯದವರಿಗೆ ಕುಂಡಲಿನಿ ಜಾಗೃತವಾದರೆ ಹುಚ್ಚುಹಿಡಿಯಬಹುದು! ಇಂತಹ ಸಂದರ್ಭದಲ್ಲಿ ಜಾಗೃತಗೊಂಡ ಕುಂಡಲಿನಿಯ ತಲೆಯಮೇಲೆ ನಿಂತು ನಾಟ್ಯವಾಡಿ ನಮಗೆ ಶಕ್ತಿಯ ಆನಂದವನ್ನು ಕೊಡುವ ಭಗವಂತ ಸುಯಾಮುನಃ.

ಮುಂದುವರೆಯುವುದು...✍️💐

Wednesday, May 24, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -74


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಮನೋಜವಸ್ತಿರ್ಥಕರೋ ವಸುರೇತಾ ವಸುಪ್ರದಃ |
ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ || 74 ||

೬೯೫) ಮನೋಜವಃ

ಎಲ್ಲಕ್ಕಿಂತ ವೇಗವಾಗಿ ಹೋಗುವ ವಸ್ತು ಮನಸ್ಸು. ಆದರೆ ಭಗವಂತನ ವೇಗ ಮನಸ್ಸಿನ ವೇಗಕ್ಕಿಂತ ಮಿಗಿಲು. ಇಂತಹ ಭಗವಂತನನ್ನು ತಲುಪಬೇಕಾದರೆ ನಾವು ನಮ್ಮ ಅಹಂಕಾರವನ್ನು ಸಂಪೂರ್ಣವಾಗಿ ಕಳಚಿ ಆತನಲ್ಲಿ ಶರಣಾಗಬೇಕು. ಆಗ ಮಾತ್ರ ನಮ್ಮ ಮನಸ್ಸು ಆತನನ್ನು ಮುಟ್ಟಬಲ್ಲದು.

೬೯೬) ತೀರ್ಥಕರಃ

ಭಗವಂತನ ಕಡೆಗೆ ಹೋಗಬೇಕಾದರೆ ಹಂತ-ಹಂತವಾಗಿ ಹೋಗಬೇಕು. ಮೊದಲು ನಮ್ಮ ಮನಸ್ಸು ಒಳ್ಳೆಯ ವಿಚಾರದ ಕಡೆ ಹರಿಯಬೇಕು. ಮನಸ್ಸಿನಲ್ಲಿ ಬೇಡವಾದ ಪ್ರಾಪಂಚಿಕ ವಿಷಯ ತುಂಬಿಕೊಂಡರೆ ನಾವು ಭಗವಂತನತ್ತ ಪ್ರಯಾಣಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಭಗವಂತ ದೇವಸ್ಥಾನ ಹಾಗೂ ಪುಣ್ಯತೀರ್ಥಗಳ ಸೃಷ್ಟಿ ಮಾಡಿದ. ಗಂಗೆ ಕಾವೇರಿಯಂತಹ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ನಮ್ಮ ಮನಸ್ಸಿನ ಕಲ್ಮಶ ಹೊರಟು ಹೋಗಿ ಮನಸ್ಸು ಭಗವಂತನೆಡೆಗೆ ಹರಿಯುತ್ತದೆ. ಶಾಸ್ತ್ರಗಳನ್ನೂ ಕೂಡಾ ತೀರ್ಥ ಎಂದು ಕರೆಯುತ್ತಾರೆ. ಸ್ವಚ್ಚ ಮನಸ್ಸಿನಿಂದ ಓದಲು ಶಾಸ್ತ್ರಗಳ ನಿರ್ಮಾಣ ಕೂಡಾ ಭಗವಂತನ ಸೃಷ್ಟಿ. ಇದರಿಂದ ಮನಸ್ಸಿಗೆ ವೇಗ ಸಿಗುತ್ತದೆ. ಹೀಗೆ ಪವಿತ್ರ ತೀರ್ಥಗಳ, ಶಾಸ್ತ್ರಗಳ ಸೃಷ್ಟಿ ಮಾಡಿದ ಭಗವಂತ ತೀರ್ಥಕರಃ

೬೯೭) ವಸುರೇತಾಃ

'ವಸುಗಳು' ಎಂದರೆ ದೇವತೆಗಳು. ಎಲ್ಲಾ ದೇವತೆಗಳ ಸೃಷ್ಟಿಗೆ ಕಾರಣಪುರುಷನಾದ ಭಗವಂತ ವಸುರೇತಾಃ.

೬೯೮) ವಸುಪ್ರದಃ

ಮೋಕ್ಷವೆಂಬ ಸಿರಿಯನ್ನೀಯುವವ. ನಾವು ದಾರಿತಪ್ಪಿದಾಗ ಎಲ್ಲವನ್ನೂ ಕಸಿದುಕೊಳ್ಳುವವನು. (ಏಕೆಂದರೆ ದೇವರ ಸಾಮ್ರಾಜ್ಯದಲ್ಲಿ ತಪ್ಪಿಗೆ ಸಜೆ ತಪ್ಪಿದ್ದಲ್ಲ).

೬೯೯) ವಸುಪ್ರದಃ

ಈ ನಾಮ ಒಂದೇ ಕಡೆ ಎರಡು ಸಾರಿ ಬಂದಿದೆ. ವ +ಸು+ಪ್ರದ; ಇಲ್ಲಿ 'ವ' ಅಂದರೆ ಜ್ಞಾನ, 'ಸು' ಎಂದರೆ ಸುಖ ಅಥವಾ ಆನಂದ. ಆದ್ದರಿಂದ ನಮ್ಮೊಳಗಿನಿಂದ ಅರಿವಿನ ಆನಂದವನ್ನು ಅರಳಿಸುವ ಭಗವಂತ ವಸುಪ್ರದಃ. ಒಮ್ಮೆ ನಮ್ಮ ಅಂತರಂಗದ ಅರಿವು ತೆರೆದುಕೊಂಡಾಗ, ಹೊರಗಿನ ಯಾವ ಸಲಕರಣೆಯೂ ಬೇಡ, ಯಾವುದರ ನೆರವೂ ಬೇಡ, ಯಾವ ಪುಸ್ತಕವೂ ಬೇಡ, ಯಾವ ಓದೂ ಬೇಡ. ಮನಸ್ಸಿನ ಈ ಸ್ಥಿತಿಯಲ್ಲಿ ನಮಗೆ ಅಧ್ಯಾತ್ಮದ ಮೇಲೆ ಅಧಿಕಾರ ಬರುತ್ತದೆ. ಇದು ನಮ್ಮ ಹೃದಯ ಮಾತನಾಡುವ ಅದ್ಬುತ  ಸ್ಥಿತಿ. ಇಂತಹ ಸ್ಥಿಯಲ್ಲಿ ನಮಗೆ ಅಧ್ಯಾತ್ಮದ ಬಗ್ಗೆ ಬರೆಯುವ ಹಾಗೂ ಮಾತನಾಡುವ ಶಕ್ತಿ ಬರುತ್ತದೆ. ಹೀಗೆ ನಮಗೆ ನಮ್ಮ ಹೃದಯದಿಂದ ಅರಿವು ಆನಂದವಾಗಿ ಚಿಮ್ಮುವ  ಸ್ಥಿತಿಯನ್ನು ಕೊಡುವ ಭಗವಂತ ವಸುಪ್ರದಃ.

೭೦೦) ವಾಸುದೇವಃ

ವಾಸು+ದೇವ, ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಹದಿನೈದು ಬೇಲಿಗಳನ್ನು ದಾಟಿ, ಸಮಾಧಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೆವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ; ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ(ಅನ್ನಮಯ ಕೋಶ, ಪ್ರಾಣಮಯ ಕೋಶ , ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ)  ಪರದೆಯಲ್ಲಿದ್ದಾಗ ವಾಸುವಾಗಿ; ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ.

೭೦೧) ವಸುಃ

ಭಗವಂತ ಸರ್ವೋತ್ಕೃಷ್ಟವಾದ ಜ್ಞಾನಾನಂದ ಸ್ವರೂಪ. ನಮಗಿರುವ ಆನಂದ ಒಂದು ಸೂಕ್ಷ್ಮ ಬಿಂದು ಹಾಗೂ ಅದು ದುಃಖದ ಜೊತೆಗಿರುವ ಆನಂದ, ಆದರೆ ಭಗವಂತ ಎಂದೂ ದುಃಖಸ್ಪರ್ಶವಿಲ್ಲದ, ಎಂದೂ ಅಳಿವಿರದ, ಅನಂತ ಜ್ಞಾನಾನಂದ ಸ್ವರೂಪ.

೭೦೨) ವಸುಮನಾಃ

ಜ್ಞಾನಾನಂದ ಸ್ವರೂಪಭೂತವಾದ ಮನಸ್ಸುಳ್ಳ ಭಗವಂತ ವಸುಮನಾಃ.

೭೦೩) ಹವಿಃ

'ಹವನ' ಎಂದರೆ ಆಹುತಿ; ಯಾರಿಗೋಸ್ಕರ ನಾವು ಆಹುತಿ ಕೊಡುತ್ತೆವೋ ಆತ ಹವಿಃ. ನಾವು ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇವೆ. ನಮ್ಮ ಮನಸ್ಸನ್ನು ಕ್ರಿಯೆಯಲ್ಲಿ ತೊಡಗಿಸಿದರೆ ಅದು ಧ್ಯಾನ, ದೈಹಿಕ ಇಂದ್ರಿಯಗಳನ್ನು ಕ್ರಿಯೆಯಲ್ಲಿ ತೊಡಗಿಸಿದರೆ ಅದು ಕರ್ಮ. ನಾವು ನಮ್ಮ ಮನಸ್ಸನ್ನು ಹಾಗು ಕರ್ಮವನ್ನು ಭಗವಂತನತ್ತ ಹರಿದು ಬಿಡಬೇಕು, ಅದೇ ನಿಜವಾದ ಹವನ. "ನಿನ್ನ ಮನಸ್ಸು ಭಗವಂತನನ್ನೇ ನೆನೆಯಲಿ, ಭಗವಂತನ ನಾಮಗಳ ಗುಣಾನುಸಂಧಾನದಲ್ಲಿ ಮೈಮರೆಯಲಿ, ನಿನ್ನ ಸಮಸ್ತ ಇಂದ್ರಿಯಗಳು ಭಗವಂತನ ಅರ್ಪಣರೂಪವಾದ ಕರ್ಮದಲ್ಲಿ ತೊಡಗಲಿ ಆಗ ಭಗವಂತ ಹವಿಯಾಗಿ ನಿನ್ನ ರಕ್ಷಣೆ ಮಾಡುತ್ತಾನೆ".

ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -73


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ |
ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ || 73 ||

೬೮೪) ಸ್ತವ್ಯಃ

ಎಲ್ಲಾ ಸ್ತೋತ್ರಗಳಿಂದ ಸ್ತುತಿಸಲ್ಪಡಬೇಕಾದವನು ಸ್ತವ್ಯಃ.

೬೮೫) ಸ್ತವಪ್ರಿಯಃ

ನಾವು ಭಕ್ತಿಯಿಂದ ಸ್ತೋತ್ರ ಮಾಡಿದರೆ ಅದನ್ನು ಪ್ರೀತಿಸುವವನು.

೬೮೬) ಸ್ತೋತ್ರಮ್

ಸ್ತುತಿಗಳಲ್ಲಿ ವಾಚ್ಯನಾಗಿ ನೆಲೆಸಿದವನು.

೬೮೭) ಸ್ತುತಿಃ

ಸ್ತವನ ಕ್ರಿಯೆಯಲ್ಲಿ ಇರುವವನು.

೬೮೮) ಸ್ತೋತಾ

ಸ್ತುತಿಸುವವನೂಳಗಿರುವವನು.

೬೮೯) ರಣಪ್ರಿಯಃ

ಗುಣಗಾನ ಮಾಡುವ ವೇದ ಶಬ್ಧವನ್ನು ಮೆಚ್ಚುವವನು. ದುಷ್ಟರ ಜೊತೆಗೆ ಕದನ ಕುತೂಹಲಿ.

೬೯೦) ಪೂರ್ಣಃ

ನಾವು ಶಾಂತಿ ಮಂತ್ರಗಳಲ್ಲಿ ಈ ರೀತಿ ಹೇಳುತ್ತೇವೆ:
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ |
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ ||
ಓಂ ಶಾಂತಿಃ ಶಾಂತಿಃ ಶಾಂತಿಃ

ಅಂದರೆ "ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದ ಪೂರ್ಣ ಉಂಟಾಗುತ್ತದೆ, ಪೂರ್ಣದಿಂದ ಪೂರ್ಣವನ್ನು ತೆಗೆದು ಹಾಕಿದರೆ ಪೂರ್ಣವೇ ಉಳಿಯುತ್ತದೆ" ಎಂದರ್ಥ.  ಭಗವಂತ ನಮ್ಮೊಳಗೂ ಇದ್ದಾನೆ ಹೊರಗೂ ಇದ್ದಾನೆ, ಆತ ಒಳಗೂ ಪೂರ್ಣ, ಹೊರಗೂ ಪೂರ್ಣ. ಆತ ಅವತಾರದಲ್ಲೂ ಪೂರ್ಣ, ಅವತಾರದ ನಂತರವೂ ಪೂರ್ಣ. ಆತ ಹಣತೆಯಂತೆ. ಒಂದು ಹಣತೆಯಿಂದ ಇನ್ನೊಂದು, ಇನ್ನೊಂದರಿಂದ ಮತ್ತೊಂದು ಹೀಗೆ ಸಹಸ್ರಾರು ಹಣತೆಗಳನ್ನು ಹಚ್ಚಿದರೂ, ಮೂಲ ಹಣತೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ಸರ್ವ ಶಬ್ಧವಾಚ್ಯ  ಭಗವಂತ ಪೂರ್ಣಃ. 

೬೯೧) ಪೂರಯಿತಾ

ನಮಗೆ ಯಥಾರ್ಥ ಜ್ಞಾನ ಕೊಟ್ಟು ಮೊಕ್ಷದತ್ತ ಕೊಂಡೊಯ್ಯುವ ಭಗವಂತ ಪೂರಯಿತಾ. ಭಗವಂತ ಸೂರ್ಯನಾದರೆ ನಾವು ಮಿಂಚು ಹುಳದಂತೆ, ಆತ ಕಡಲಾದರೆ ನಾವು ಕೊಡದಂತೆ. ಕಡಲಿನಿಂದ ನಾವು ನಮ್ಮ ನಮ್ಮ ಕೊಡವನ್ನು ತುಂಬಿಸಿಕೊಳ್ಳಬೇಕು, ಅವರವರ ಯೋಗ್ಯತೆಗೆ ತಕ್ಕಂತೆ ಇದನ್ನು ಮಾಡಿಸುವವನೂ ಅವನೇ.

೬೯೨) ಪುಣ್ಯಃ

ಪುಣ್ಯ ಎಂದರೆ ಪವಿತ್ರ ಅಥವಾ ಪಾವನ. ಭಗವಂತನ ಜ್ಞಾನ ನಮ್ಮನ್ನು, ನಮ್ಮ ಮನಸ್ಸನ್ನು ಪಾವನ ಗೊಳಿಸುವ ಏಕೈಕ ಸಾಧನ. ಮಾನಸಿಕವಾಗಿ ಗೊಂದಲ, ದುಃಖ, ನಿರಾಶೆಗೊಳಗಾದ ಮನಸ್ಸನ್ನು  ಭಗವಂತನತ್ತ ಹರಿಸಿದಾಗ ಮನಸ್ಸು ನೆಮ್ಮದಿಯಿಂದಿರುತ್ತದೆ. ಇದೇ ಪುಣ್ಯ ಅಥವಾ ಪಾವಿತ್ರ್ಯ. ಲೋಕೋತ್ತರವಾದ ಸುಂದರ ಭಗವಂತನ ಚಿಂತನೆಯಿಂದ ಮನಸ್ಸು ಹೂವಿನಂತೆ ಅರಳುತ್ತದೆ. ಬಾಡುವುದಿಲ್ಲ, ಮುದುಡುವುದಿಲ್ಲ. ಹೀಗೆ ಪವಿತ್ರನೂ ಪರಮ ಸುಂದರನೂ ಆದ ಭಗವಂತ ಪುಣ್ಯಃ.

೬೯೩) ಪುಣ್ಯಕೀರ್ತಿಃ

ಕೀರ್ತನ ಮಾತ್ರದಿಂದ ಎಲ್ಲಾ ಪಾಪಗಳನ್ನು ಕಳೆಯುವ ಭಗವಂತ ಪುಣ್ಯಕೀರ್ತಿಃ. ಅವನ ಗುಣಗಾನ ನಮ್ಮ ಬದುಕನ್ನು ಪಾವನಗೊಳಿಸುತ್ತದೆ. ಭಗವನ್ನಾಮ ನಮ್ಮನ್ನು ಉದ್ಧಾರ ಮಾಡುತ್ತದೆ.

೬೯೪) ಅನಾಮಯಃ

'ಆಮಯ' ಎಂದರೆ ದೋಷಗಳು. ಬೆಂಕಿಯ ಜೊತೆಗೆ ಹೊಗೆ ಇರುವಂತೆ ನಮ್ಮಲ್ಲಿ ದೋಷಗಳು ಇದ್ದೇ ಇರುತ್ತವೆ. ಆದರೆ ಭಗವಂತನಿಗೆ ಯಾವುದೇ ದೋಷದ ಲೇಪವಿಲ್ಲ. ಆತ ಪೂರ್ಣ ನಿರ್ದೋಷ. ಇಂತಹ ಭಗವಂತ ಅನಾಮಯಃ

ಮುಂದುವರೆಯುವುದು...✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -72


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ |
ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿಃ || 72 ||

೬೭೬) ಮಹಾಕ್ರಮಃ.

ಕ್ರಮ ಎಂದರೆ 'ರೀತಿ' ; ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಆಕಸ್ಮಿಕವಲ್ಲ, ಅದು ಕ್ರಮಬದ್ಧವಾದ ಕ್ರಿಯೆ. ಎಲ್ಲವನ್ನೂ ಕರಾರುವಕ್ಕಾಗಿ ಗಣಿತಬದ್ಧವಾಗಿ ಮಾಡುವ ಭಗವಂತ ಮಹಾಕ್ರಮಃ.  ಅನಂತ ಕಾಲದಿಂದ ಈ ಪ್ರಪಂಚ ನೆಡೆದು ಬಂದಿದೆ, ಹಾಗೂ ಮುಂದುವರಿಯುತ್ತದೆ. ಈವರೆಗೆ ಅನಂತ ಪ್ರಪಂಚ ಸೃಷ್ಟಿಯಾಗಿದೆ ಹಾಗೂ ಇನ್ನು ಮುಂದೆ ಕೂಡಾ ಅನಂತ ಪ್ರಪಂಚ ಸೃಷ್ಟಿಯಾಗಲಿದೆ. ಆದರೆ ಪ್ರತಿಯೊಂದು ಸೃಷ್ಟಿಯೂ ಕ್ರಮಬದ್ಧ. ಪ್ರತಿಯೊಂದಕ್ಕೂ ಒಂದು ಲೆಕ್ಕಾಚಾರವಿದೆ, ಅದರಂತೆಯೇ ನಡೆಯುತ್ತದೆ. ಆದ್ದರಿಂದ ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಪೂರ್ವನಿರ್ಧರಿತ.

೬೭೭) ಮಹಾಕರ್ಮಾ.

ಈ ವಿಶ್ವದಲ್ಲಿ ಮಹತ್ತಾದ ಕರ್ಮ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ.  ಇಂತಹ ಮಹಾ ಕರ್ಮವನ್ನು ನಿರ್ವಹಿಸುವ ಭಗವಂತ ಮಹಾಕರ್ಮಾ. ನಮ್ಮ ಕೈಯಲ್ಲಿ ಮಹತ್ತಾದ ಕರ್ಮವನ್ನು ಮಾಡಿಸುವವನೂ ಅವನೇ.

೬೭೮) ಮಹಾತೇಜಾಃ

ತೇಜಸ್ಸಿನಲ್ಲಿ ಬೆಳಕಿನ ಶಕ್ತಿಯಿದೆ, ಶಾಖ ಕೊಡುವ ಶಕ್ತಿಯಿದೆ  ಹಾಗೂ ಸುಡುವ ಶಕ್ತಿಯೂ ಇದೆ. ಇಷ್ಟೇ ಅಲ್ಲದೆ ತೇಜಸ್ಸಿನಲ್ಲಿ ಪಚನ ಶಕ್ತಿಯಿದೆ. ಜಗತ್ತಿನಲ್ಲಿ ನಡೆಯುವ ತೇಜಸ್ಸಿನ ಪ್ರತಿಯೊಂದು ಕ್ರಿಯೆಯ ಮೂಲ ಭಗವಂತ ಮಹಾತೇಜಾಃ. ಆತ ಎಲ್ಲವನ್ನೂ ಬೆಳಗಿಸುವ ಬೆಳಕು. ಗೀತೆಯಲ್ಲಿ ಹೇಳುವಂತೆ:

ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕ |
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ ||

ಅಂದರೆ "ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ"  ಹೀಗೆ ಬೆಳಕುಗಳಿಗೆ ಬೆಳಕು ನೀಡುವ ಮಹಾ ತೇಜಸ್ಸು ಭಗವಂತ ಮಹಾತೇಜಾಃ.

೬೭೯) ಮಹೋರಗಃ

ಉರಗ ಎಂದರೆ ಹೊಟ್ಟೆ ಹೊಸೆದುಕೊಂಡು ಹೋಗುವ ಪ್ರಾಣಿ; ಅದನ್ನು ಸರ್ಪ ಎನ್ನುತ್ತಾರೆ. ಹೆಡೆ ಇರುವ ಹಾವು 'ನಾಗರ'. ಭಗವಂತ ದೊಡ್ಡ ಉರಗದ ಮೇಲೆ ಮಲಗಿದ ಶೇಷಶಾಯಿ. ಶೇಷಶಾಯಿ ಎಂದರೇನು ಎನ್ನುವುದನ್ನು ನಾವು ನಮ್ಮೊಳಗಿರುವ ದೇವರನ್ನು ಕಾಣಲು ಪ್ರಯತ್ನಿಸಿದಾಗ ಮಾತ್ರ ತಿಳಿಯುತ್ತದೆ. ಈ ಹಿಂದೆ ಹೇಳಿದಂತೆ ನಮ್ಮ ದೇಹದೊಳಗೆ ಮೂಲಾಧಾರದಿಂದ ಸಹಸ್ರಾರದವರೆಗೆ ಬೇರೆ ಬೇರೆ ಶಕ್ತಿ ಕೇಂದ್ರಗಳಿವೆ. ಮೂಲಾಧಾರದಲ್ಲಿ ಮಡಿಕೆಹಾಕಿ ತಲೆಯನ್ನು ಕೆಳಗಿಟ್ಟು ಮಲಗಿದ ಉರಗದ ಸ್ಥಿತಿಯಲ್ಲಿ ಕುಂಡಲಿನಿ ಶಕ್ತಿ ಅಡಗಿದೆ. ಕೆಳಮುಖವಾಗಿರುವ ಈ ಶಕ್ತಿಕೇಂದ್ರದಿಂದ ಶಕ್ತಿ ಪಾತವಾಗುತ್ತದೆ. ಇಂತಹ ಹಾವನ್ನು ಕೆಣಕಿದರೆ ಮಾತ್ರ ಅದು ಹೆಡೆ ಎತ್ತುತ್ತದೆ; ಆಗ ಶಕ್ತಿ ಮೇಲ್ಮುಖವಾಗಿ ಸ್ವಾಧಿಷ್ಟಾನ-ಮಣಿಪುರ-ಅನಾಹತ-ವಿಶುದ್ಧಿ-ಆಜ್ಞಾ-ಸಹಸ್ರಾರ, ಹೀಗೆ ಹಂತ ಹಂತವಾಗಿ ಮೇಲೇರುತ್ತದೆ. ನಮ್ಮ ಆಜ್ಞಾ ಚಕ್ರವೇ ಕ್ಷೀರ ಸಾಗರ. ಇಂತಹ ಕ್ಷೀರ ಸಾಗರದಲ್ಲಿ ಸಹಸ್ರಾರದತ್ತ ಹೆಡೆಯತ್ತಿನಿಂತ ಶೇಷ ಶಕ್ತಿ ಹಾಗೂ ಅದರ ಮೇಲೆ ಮಲಗಿ ದರ್ಶನವನ್ನೀಯುವ ಅನಂತ ಪದ್ಮನಾಭ ಭಗವಂತ ಮಹೋರಗಃ.

೬೮೦) ಮಹಾಕ್ರತುಃ

'ಕ್ರತು' ಎಂದರೆ  ಒಂದು ಅರ್ಥದಲ್ಲಿ ಕರ್ಮ ಅಥವಾ ಕ್ರಿಯೆ; ಇನ್ನೊಂದು ಅರ್ಥ ಜ್ಞಾನ. ನಿಶ್ಚಯ ಅಥವಾ ಖಚಿತ ಜ್ಞಾನದಿಂದ ಕರ್ಮ(ಸೃಷ್ಟಿ-ಸ್ಥಿತಿ-ಸಂಹಾರ) ಮಾಡುವ ಭಗವಂತ ಮಹಾಕ್ರತುಃ. ಯಜ್ಞದಲ್ಲಿ ಮೂರುಹೊತ್ತು ಮಾಡತಕ್ಕ ಯಜ್ಞಕರ್ಮ ಕ್ರತು. ನಾವು ಮಾಡುವ ಯಜ್ಞ-ಯಾಗಾದಿಗಳು ಭಗವಂತನಲ್ಲಿ ಅರ್ಪಿತವಾದಾಗ ಅದು ಮಹಾಕ್ರತುವಾಗುತ್ತದೆ. ಹೀಗೆ ನಿಶ್ಚಯ ಜ್ಞಾನದಿಂದ ಮಾಡುವ ಯಜ್ಞವನ್ನು ಸ್ವೀಕರಿಸುವ ಭಗವಂತ ಮಹಾಕ್ರತುಃ.

೬೮೧) ಮಹಾಯಜ್ವಾ

'ಯಜ್ವಾ' ಎಂದರೆ ಯಜ್ಞ ಮಾಡಿಸುವ ಯಜಮಾನ. ಭಗವಂತ ಹಿರಿಯ ಯಾಜಕ. ಯಜಮಾನನೊಳಗೆ ನಿಂತು ಎಲ್ಲವನ್ನೂ ಮಾಡಿಸುವ ಆತ ಮಹಾಯಜ್ವಾ.

೬೮೨) ಮಹಾಯಜ್ಞ

ಯಾರಿಂದ ಯಜ್ಞ ಮಹತ್ತಾಗುತ್ತದೋ ಅವನು ಮಹಾಯಜ್ಞ. ಯಜ್ಞದಲ್ಲಿ ನೆಲೆಸಿ,ಯಜ್ಞಗಳಿಂದ ಆರಾಧ್ಯನಾದ ಭಗವಂತ ಮಹಾಯಜ್ಞ.

೬೮೩) ಮಹಾಹವಿಃ

ಯಜ್ಞದಲ್ಲಿ ಅರ್ಪಿಸುವ ಹವಿಸ್ಸನ್ನು ಸ್ವೀಕರಿಸುವ, ಯಾಗದಿಂದ ಆರಾಧಿಸಲ್ಪಡುವ, ದೇವತೆಗಳ ಒಡೆಯ, ಸರ್ವಶಬ್ದ ವಾಚ್ಯ ಭಗವಂತ ಮಹಾಹವಿಃ.

ಮುಂದುವರೆಯುವುದು...✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -71


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಬ್ರಹ್ಮಣ್ಯೋ ಬ್ರಹ್ಮಕೃದ್ ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ |
ಬ್ರಹ್ಮವಿದ್ ಬ್ರಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯ || 71 ||

೬೬೬) ಬ್ರಹ್ಮಣ್ಯಃ

ಚತುರ್ಮುಖ ಬ್ರಹ್ಮನಿಗೆ ಬಹಳ ಪ್ರಿಯವಾದವನು (ಹಿತನಾದವನು) ಬ್ರಹ್ಮಣ್ಯಃ, ಬ್ರಹ್ಮ ಎನ್ನುವುದಕ್ಕೆ 'ಜೀವರು', 'ವೇದ' ಎನ್ನುವ ಇತರ ವಿಶೇಷ ಅರ್ಥಗಳಿವೆ. ಸಮಸ್ತ ಜೀವಜಾತಕ್ಕೂ ಹಿತನಾಗಿ, ಸದಾ ಜೊತೆಗೆ ಇರತಕ್ಕ ಗೆಳೆಯ ಭಗವಂತ ಬ್ರಹ್ಮಣ್ಯಃ;  ಸಮಸ್ತ ವೇದಗಳಿಂದ ಪ್ರತಿಪಾಧ್ಯನಾದ ಭಗವಂತ ಬ್ರಹ್ಮಣ್ಯಃ.

೬೬೭) ಬ್ರಹ್ಮಕೃತ್

ಸೃಷ್ಟಿಯ ಆರಂಭದಲ್ಲಿ ಚತುರ್ಮುಖ ಬ್ರಹ್ಮನನ್ನು ಸೃಷ್ಟಿಸಿ ವೇದೋಪದೇಶ ಮಾಡಿದ ಭಗವಂತ, ಸಮಸ್ತ ಜೀವ ಜಾತಗಳಿಗೆ ಆಯಾ ಜೀವದ ಕರ್ಮಕ್ಕೆ ತಕ್ಕಂತೆ, ಸ್ವರೂಪಕ್ಕೆ ತಕ್ಕಂತೆ, ದೇಹವನ್ನು ಕೊಟ್ಟು ಬದುಕನ್ನು ಕೊಟ್ಟ ಬ್ರಹ್ಮಕೃತ್.

೬೬೮) ಬ್ರಹ್ಮಾ

ಸೃಷ್ಟಿಗೆ  ಕಾರಣನಾದ ಚತುರ್ಮುಖನೊಳಗಿದ್ದು ಸೃಷ್ಟಿಯ ಮಾಡುವ ಭಗವಂತ ಬ್ರಹ್ಮಾ (ಈ ನಾಮ ಪುರುಷ ರೂಪದಲ್ಲಿದೆ ಅಥವಾ ಪುಲ್ಲಿಂಗ)

೬೬೯) ಬ್ರಹ್ಮ

ಭಗವಂತ ಎಲ್ಲಕ್ಕಿಂತ ದೊಡ್ಡ ತತ್ವ (ಬ್ರಹ್ಮ-ನಪುಂಸಕ ಲಿಂಗ; ಇದು ಸಂಸ್ಕೃತದಲ್ಲಿರುವ ವಿಶೇಷ, ಗಂಡು-ಹೆಣ್ಣಿನ ದೌರ್ಬಲ್ಯದ ಲೇಪವಿಲ್ಲದೆ ನಮ್ಮನ್ನು ಪೂರ್ಣತೆಗೆ ಒಯ್ಯುವ ಎಲ್ಲಕ್ಕಿಂತ ದೊಡ್ಡ ತತ್ವ )

೬೭೦) ಬ್ರಹ್ಮವಿವರ್ಧನಃ

ಜೀವಜಾತದ ಭೌದ್ಧಿಕ ಬೆಳವಣಿಗೆಗೆ ಬೇಕಾದ ದೇಹವನ್ನು ಕೊಟ್ಟು ಬೆಳೆಸಿದ ಭಗವಂತ ಬ್ರಹ್ಮವಿವರ್ಧನಃ. ಎಲ್ಲಕ್ಕಿಂತ ದೊಡ್ಡ ಜೀವ ಚತುರ್ಮುಖ ಬ್ರಹ್ಮನನ್ನು ಸೃಷ್ಟಿಮಾಡಿ, ವೇದ ವಿಜ್ಞಾನವನ್ನು ಬೆಳೆಸಿ, ವಿಸ್ತಾರ ಮಾಡಿದ ಭಗವಂತ ಬ್ರಹ್ಮವಿವರ್ಧನಃ

೬೭೧) ಬ್ರಹ್ಮವಿತ್

ವೇದವನ್ನು ಪೂರ್ಣವಾಗಿ ತಿಳಿದವನು ಬ್ರಹ್ಮವಿತ್. ಭಾರತೀಯ ನಂಬಿಕೆಯ ಪ್ರಕಾರ ವೇದವನ್ನು ಯಾರೂ ನಿರ್ಮಾಣ ಮಾಡಿಲ್ಲ. ಹಾಗಿದ್ದರೆ ವೇದ ಹೇಗೆ ನಿರ್ಮಾಣ ಆಯಿತು ? ಪ್ರಾಚೀನರು ಹೇಳುವಂತೆ ವೇದ ನಮ್ಮ intellectual compilation ಅಲ್ಲ, ಅದು intuitional compilation.  ಅಂದರೆ ಜ್ಞಾನಿಗಳಿಗೆ ತನ್ನಷ್ಟಕ್ಕೆ ಹೊಳೆಯುತ್ತದೆ, ಅದರಂತೆ ಹೇಳುತ್ತಾರೆ. ಇದನ್ನೇ ಕುಮಾರವ್ಯಾಸ "ನಾನು ಕೇವಲ ಲಿಪಿಗಾರ, ಭಗವಂತ ಹೇಳಿದ್ದನ್ನು ನಾನು ಬರೆದೆ" ಎಂದಿದ್ದಾನೆ. ನ್ಯೂಟನ್  ಬೀಳುತ್ತಿರುವ ಹಣ್ಣನ್ನು ನೋಡಿ ಗುರುತ್ವಾಕರ್ಷಣ ಶಕ್ತಿಯನ್ನು ಕಂಡು ಹಿಡಿದಂತೆ. ಇದೆಲ್ಲವೂ intuitional flash.

ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:

ವೇದೈಸ್ಚ ಸರ್ವೈರಹಮೇವ ವೇದ್ಯೋ  ವೇದಾಂತಕೃದ್ ವೇದವಿದೇವ ಚಾಹಮ್ ||

ಅಂದರೆ " ವೇದಾಂತ ಸೂತ್ರಗಳನೊರೆದವನು, ವೇದಗಳ ಮರ್ಮವನ್ನರಿತವನು ನಾನೆ" ಆದ್ದರಿಂದ ವೇದವನ್ನು ಸಂಪೂರ್ಣ ತಿಳಿದವನು ಭಗವಂತನೊಬ್ಬನೆ. ಇಂತಹ ಭಗವಂತ ಬ್ರಹ್ಮವಿತ್.

೬೭೨) ಬ್ರಾಹ್ಮಣಃ

ನಮ್ಮಲ್ಲಿ ಜನಿವಾರ ಹಾಕಿದವರು ಬ್ರಾಹ್ಮಣರು. ಆದರೆ ನಿಜವಾದ ಬ್ರಾಹ್ಮಣ ಎಂದರೆ ವೇದವೇಧ್ಯ.  ವೇದವನ್ನು, ಭಗವಂತನನ್ನು ತಿಳಿದವ ಬ್ರಾಹ್ಮಣ. ಆದರೆ ಭಗವಂತನನ್ನು ಮತ್ತು ವೇದವನ್ನು ಪೂರ್ಣವಾಗಿ ತಿಳಿದವ ಭಗವಂತನೊಬ್ಬನೇ! ವೇದದ ಪೂರ್ಣ ಅರ್ಥ ಭಗವಂತನನ್ನು ಬಿಟ್ಟರೆ ಇನ್ಯಾರಿಗೂ   ತಿಳಿದಿಲ್ಲ. ಆದ್ದರಿಂದ ಭಗವಂತ ಬ್ರಾಹ್ಮಣಃ.

೬೭೩) ಬ್ರಹ್ಮೀ

ಬ್ರಹ್ಮ ಉಳ್ಳವನು ಬ್ರಹ್ಮೀ. ಎಲ್ಲಕ್ಕಿಂತ ಬೃಹತ್ ಆದ ಈ ವಿಶ್ವದ ಬ್ರಹ್ಮ ಭಗವಂತ ಬ್ರಹ್ಮೀ. ಈ ವಿಶ್ವವನ್ನು ನಿರ್ಮಿಸಿದ ಚತುರ್ಮುಖನ ತಂದೆ, ಇಡೀ ಜಗತ್ತಿನ ಎಲ್ಲಾ ರಹಸ್ಯಗಳನ್ನು ಸೆರೆಹಿಡಿದ ವೇದ ವಾಗ್ಮಯ ಭಗವಂತ ಬ್ರಹ್ಮೀ.

೬೭೪) ಬ್ರಹ್ಮಜ್ಞಃ

ಬ್ರಹ್ಮ (ವೇದ)ವನ್ನು ತಿಳಿದವ, ಇಡೀ ವಿಶ್ವವನ್ನು, ಜೀವಜಾತವನ್ನು ತಿಳಿದ ಭಗವಂತ ಬ್ರಹ್ಮಜ್ಞಃ.

೬೭೫) ಬ್ರಾಹ್ಮಣಪ್ರಿಯಃ.

ಬ್ರಹ್ಮಜ್ಞಾನಿಗಳಿಗೆ ಪ್ರಿಯನಾದವ ಹಾಗೂ ಬ್ರಹ್ಮಜ್ಞಾನಿಗಳನ್ನು ಪ್ರೀತಿಸುವ ಭಗವಂತ ಬ್ರಾಹ್ಮಣಪ್ರಿಯಃ.

ಮುಂದುವರೆಯುವುದು...✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -70


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ |
ಅನಿರ್ದೇಶ್ಯವಪುರ್ವಿಷ್ಣುಃರ್ವೀರೋsನಂತೋ ಧನಂಜಯಃ || 70 ||

೬೬೬) ಕಾಮದೇವಃ

ಈ ನಾಮದ ಮೇಲ್ನೋಟದ ಅರ್ಥ ಎಲ್ಲರಿಗೂ ಚಿರಪರಿಚಿತ. ಮನುಷ್ಯನ ಬದುಕಿನಲ್ಲಿ ಬಯಕೆ ಹಾಗು ಅರಿವು ಚೈತನ್ಯದ ಮೂಲಭೂತ ಧರ್ಮ. 'ಕಾಮ' ಸಂಸ್ಕೃತದಲ್ಲಿ ಸೌಂದರ್ಯದ ಸಂಕೇತ. ಅಂದರೆ ಸುಂದರವಾದದ್ದನ್ನು ಬಯಸುವುದು 'ಕಾಮ'. 'ಸುಂದರ' ಅಂದರೆ ಪ್ರೀಯವಾದದ್ದು. ಸುಂದರವಾದದ್ದನ್ನು, ಅಥವಾ ಪ್ರಿಯವಾದದ್ದನ್ನು ಬಯಸುವುದು ಕಾಮ. ಸೌಂದರ್ಯ ವಸ್ತುವಿನಲ್ಲಿಲ್ಲ, ನಾವು ನೋಡುವ ದೃಷ್ಟಿಯಲ್ಲಿದೆ. ನಮಗೆ ಯಾವುದು ಇಷ್ಟವೋ ಅದು ನಮಗೆ ಸುಂದರವಾಗಿ ಕಾಣುತ್ತದೆ. ಹೀಗೆ ಇರುವ ಕಾಮವನ್ನು ಈಡೇರಿಸುವ ಕಾಮದೇವ (ಮನ್ಮಥ) ನಮ್ಮೊಳಗಿದ್ದು ವಿವಿಧ ರೂಪದ ಬಯಕೆಗಳನ್ನು ಪ್ರಚೋದಿಸಿ, ಕಾಮನೆಗಳನ್ನು ಈಡೇರಿಸಿ, ಆನಂದವನ್ನು ಕೊಟ್ಟು ವಿಹರಿಸುವವ. ಮನ್ಮಥ ವಿಷ್ಣುವಿನ ಮಗ; ಅವನೇ ಶಿವನ ಮಗ ಸ್ಕಂದ (ಷಣ್ಮುಖ), ಅವನೇ ಬ್ರಹ್ಮನ ಮಗ ಸನತ್ಕುಮಾರ. ನಮಗೆ ಕಾಮನೆಗಳನ್ನು ನೀಡುವ ಹಾಗೂ ಅದನ್ನು ನಿಯಂತ್ರಿಸುವ ಮನ್ಮಥ-ಸನತ್ಕುಮಾರ-ಷಣ್ಮುಖನೊಳಗಿರುವ, ಸರ್ವ ಕಾಮಗಳನ್ನು ಗೆದ್ದ ಭಗವಂತ ಕಾಮದೇವಃ.

೬೫೭) ಕಾಮಪಾಲಃ

ನಮ್ಮ ಎಲ್ಲಾ ಬಯಕೆಗಳನ್ನು ರಕ್ಷಣೆ ಮಾಡುವವನು ಭಗವಂತ. ನಮ್ಮ ಬಯಕೆ ನಮ್ಮ ಅಧೀನ ಅಲ್ಲ. ಧರ್ಮಕಾರ್ಯ ಮಾಡಬೇಕು ಎನ್ನುವ ಕಾಮ ಇಲ್ಲದಿದ್ದರೆ ಧರ್ಮವಿಲ್ಲ! ಹಣವನ್ನು ಧರ್ಮ ಕಾರ್ಯಕ್ಕೆ ವಿನಿಯೋಗಿಸಬೇಕು ಎನ್ನುವ ಕಾಮನೆ ಇಲ್ಲದಿದ್ದರೆ 'ಅರ್ಥಕ್ಕೆ' ಬೆಲೆಯಿಲ್ಲ. ಕಾಮ ಇಲ್ಲದಿದ್ದರೆ ಎಲ್ಲವೂ ಅಸಾಧ್ಯ. ಬಯಕೆಯೇ ಇಲ್ಲದ ಬದುಕಿಲ್ಲ. ಬಯಕೆ ಕೆಟ್ಟದ್ದಲ್ಲ ಆದರೆ ಕುಸ್ಸಿತವಾದ ಬಯಕೆ ಕೆಟ್ಟದ್ದು. ನಮಗೆ ಒಳ್ಳೆಯ ಬಯಕೆಯನ್ನು ಕೊಟ್ಟು ಅದನ್ನು ಪೂರೈಸಿ ಉದ್ಧರಿಸುವ ಭಗವಂತ ಕಾಮಪಾಲಃ.

೬೫೮) ಕಾಮೀ

ಕಾಮೀ ಅಂದರೆ ಕಾಮ ಉಳ್ಳವನು ಎಂದರ್ಥವಲ್ಲ. ಕಾಮದ ಒಡೆಯ ಕಾಮೀ. ಜಗತ್ತಿನಲ್ಲಿ ಕಾಮನೆಗಳನ್ನು ಪ್ರೇರೇಪಿಸುವ ಮನ್ಮಥನ ಅಪ್ಪ ಭಗವಂತ ಕಾಮೀ.

೬೫೯) ಕಾಂತಃ

ರತಿ-ಮನ್ಮಥರಿಗೆ ರೂಪಕೊಟ್ಟ ಭಗವಂತ ಎಲ್ಲರೂ ಬಯಸುವಂತಹ  ಪರಮಸುಂದರ ಮೂರ್ತಿ. ಅತ್ಯಂತ  ಸುಂದರ ಮಾಂಗಲಿಕ ರೂಪ ಆತನದ್ದು. ಇಲ್ಲಿ ಸೌಂದರ್ಯ ಎಂದರೆ ಬಾಹ್ಯ ಸೌಂದರ್ಯವಲ್ಲ, ಪಂಚಭೂತಗಳಿಂದಾದ ಸೌಂದರ್ಯವಲ್ಲ, ಜ್ಞಾನಾನಂದಗಳಿಂದ ತುಂಬಿದ  ಪರಿಪೂರ್ಣ ಸೌಂದರ್ಯ.ಇಂತಹ ಸುಂದರ ಮೂರ್ತಿ ಭಗವಂತ ಕಾಂತಃ.

೬೬೦) ಕೃತಾಗಮಃ

ಮೊಟ್ಟ ಮೊದಲು ಜ್ಞಾನವನ್ನು, ವೇದವನ್ನು, ಚತುರ್ಮುಖನಿಗೆ ಉಪದೇಶ ಮಾಡಿ ಜಗತ್ತಿಗೆ ಆಗಮನದ ರೂಪದಲ್ಲಿ ಕೊಟ್ಟವ ಭಗವಂತ. ಆತ ಆಗಮಗಳಿಂದ ಕೃತನಾದವನು. ಸಮಸ್ತ ಆಗಮಗಳಿಂದಲೇ ತಿಳಿಯಬೇಕಾದವನು. ಭೂಮಿಗೆ ಇಳಿದು ಬಂದು, ವೇದ-ಪುರಾಣವನ್ನು ರಚಿಸಿ ಕೊಟ್ಟು, ಶ್ರುತಿ-ಸ್ತುತಿಗಳನ್ನು ನೀಡಿದ ಭಗವಂತ ಕೃತಾಗಮಃ.

೬೬೧) ಅನಿರ್ದೇಶ್ಯವಪು

ಇಂಥದ್ದೇ ಎಂದು ನಿರೂಪಿಸಲು ಆಗದ ಆಚಿಂತ್ಯ ರೂಪನು. 'ನಿರ್ದೇಶ' ಎಂದರೆ ಇದು ಇಂಥದ್ದೇ ಎಂದು ಮನಸ್ಸು ಗ್ರಹಿಸುವ ರೂಪ. ಕೃಷ್ಣನನ್ನು, ರಾಮನನ್ನು, ವ್ಯಾಸರನ್ನು ಕಂಡವರಿದ್ದಾರೆ, ಆದರೆ ಅದು ಕಂಡು ಗ್ರಹಿಸುವ ರೂಪವಲ್ಲ. ಯಾವುದನ್ನು ನಿರೂಪಿಸಲಾಗದೆ ಮಾತು ಮೂಕವಾಗುತ್ತದೋ, ಮನಸ್ಸು ಸ್ವಚ್ಚವಾಗುತ್ತದೋ, ಅಂತಹ ಆನಂದಮಯ ರೂಪ ಎಂದು ಉಪನಿಷತ್ತು ಹೇಳುತ್ತದೆ. ಹೀಗೆ ಮನಸ್ಸಿನ ಚಿಂತನೆಗೆ ಮೀರಿದ ರೂಪವುಳ್ಳ  ಭಗವಂತ  ಅನಿರ್ದೇಶ್ಯವಪು.

೬೬೨) ವಿಷ್ಣುಃ

ಎಲ್ಲಾ ಕಡೆಯೂ, ಎಲ್ಲರ ಒಳಗೂ-ಹೊರಗೂ ತುಂಬಿರುವ, ಮಾತು ಮನಸ್ಸಿಗೆ ಮೀರಿದ ಅನಂತ ಶಕ್ತಿ ಭಗವಂತ ವಿಷ್ಣುಃ.

೬೬೩) ವೀರಃ

ಎಲ್ಲವನ್ನೂ ನಿಗ್ರಹಿಸಬಲ್ಲ ಪೌರುಷಶಾಲಿ. 'ವಿ' ಅಂದರೆ ಪಕ್ಷಿ (ಗರುಡ), 'ಈರ' ಅಂದರೆ ಪ್ರಾಣದೇವರು. ಗರುಡ-ಪ್ರಾಣರನ್ನು ನಿಯಂತ್ರಿಸುವ ಪರಾಶಕ್ತಿ ಭಗವಂತ ವೀರ.

೬೬೪) ಅನಂತಃ

ಅಳತೆಗೆ ಸಿಗದ ಅನಂತ ಶಕ್ತಿ. ಆತ ಕಾಲತಃ, ದೇಶತಃ, ಗುಣತಃ ಅನಂತ.

೬೬೫) ಧನಂಜಯಃ

ಅರ್ಜುನನಲ್ಲಿ ಸನ್ನಿಹಿತನಾಗಿ ಅವನನ್ನು ಧನಂಜಯನಾಗಿ ಮಾಡಿದ ಭಗವಂತ ಧನಂಜಯಃ.  ಜಗತ್ತಿನಲ್ಲಿರುವ ಎಲ್ಲಾ ಸಂಪತ್ತು ಆತನ ಸೊತ್ತು. ಆದ್ದರಿಂದ 'ನನ್ನದು' ಎನ್ನುವ ಅಹಂಕಾರ ಬಿಟ್ಟು ಆ ಧನಂಜಯನಲ್ಲಿ ಶರಣಾಗಬೇಕು.

ಮುಂದುವರೆಯುವುದು....✍️💐

ಶ್ರೀ ಮಹಾವಿಷ್ಣು ಸಹಸ್ರನಾಮ

ಸರ್ವಶ್ರೇಷ್ಠವಾದ ಶ್ರೀ ಮಹಾವಿಷ್ಣು ಸಹಸ್ರನಾಮ ಪಠಿಸಿದರೆ ಜೀವನದಲ್ಲಿ ಈ 12 ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.!

ಸರ್ವಶ್ರೇಷ್ಠವಾದ ಶ್ರೀ ವಿಷ್ಣು ಸಹಸ್ರನಾಮ:-

 1). ವಿಷ್ಣು ಸ್ವತಃ ತನ್ನ ಹೆಸರಿನ ಅತೀಂದ್ರಿಯ ಧ್ವನಿಯಲ್ಲಿ ಸಂಪೂರ್ಣವಾಗಿ ಅಸ್ತಿತ್ವದಲ್ಲಿರುತ್ತಾನೆ. ಹಾಗಾಗಿ ವಿಷ್ಣುಸಹಸ್ರನಾಮವನ್ನು ಹೆಚ್ಚು ಹೆಚ್ಚು ಕಾಲ ಪಠಣಮಾಡಿದರೆ ಒಳ್ಳೆಯದು. 

2). ವಿಷ್ಣು ಸಹಸ್ರನಾಮದಲ್ಲಿ ಎಲ್ಲ ವೈದಿಕ ಮಂತ್ರಗಳನ್ನು ಸೇರಿಸಲಾಗುತ್ತದೆ. ಆದ್ದರಿಂದ ಈ ಮಂತ್ರವನ್ನು ಪಠಿಸುವ ಮೂಲಕ ಹೇಳುವವರಿಗೆ ಅಷ್ಟೇ ಅಲ್ಲ ಕೇಳುವವರು ಕೂಡ ಪ್ರಯೋಜನ ಪಡೆಯುತ್ತೀರಿ 

3). ವಿಷ್ಣುಸಹಸ್ರನಾಮ ಪಾರಾಯಣಕ್ಕೂ ಭೇದವೇನೂ ಇರುವದಿಲ್ಲ. ಹಾಗೆ ಪಠಣಕ್ಕಾಗಿ ಯಾವುದೇ ಕಠಿಣ ಮತ್ತು ವೇಗದ ನಿಯಮಗಳಿಲ್ಲ. ಯಾವುದೇ ಸಂದರ್ಭಗಳಲ್ಲಿ, ಯಾವುದೇ ಸಮಯದಲ್ಲಿ ನೀವು ಎಲ್ಲಿಯಾದರೂ ಪಠಿಸಬಹುದು. 

4). ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಿಮ್ಮ ಹಿಂದಿನ ಜನ್ಮದ ಕರ್ಮದ ಪ್ರತಿಕ್ರಿಯೆಗಳಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ. 

5). ವಿಷ್ಣು ಸಹಸ್ರನಾಮ ಪಠಿಸುವ ಭಕ್ತರಿಗೆ ಎಂದೂ ಭಯವಿಲ್ಲ. ಇದರಿಂದ ವಿಶೇಷ ಕಾಂತಿ, ವರ್ಚಸ್ಸು, ಆತ್ಮವಿಶ್ವಾಸ, ಮನೋಬಲ, ದೇಹಬಲ ಇಂದ್ರಿಯಬಲ ಹೆಚ್ಚಾಗಿ ಉತ್ತಮ ಆರೋಗ್ಯವನ್ನು ಪಡೆಯಬಹುದು.

6). ವಿಷ್ಣುಸಹಸ್ರನಾಮವನ್ನು ಪ್ರತಿನಿತ್ಯ ಪಾರಾಯಣ ಮಾಡಿದರೆ ಜೀವನದಲ್ಲಿ ಬರುವ ಸಂಕಷ್ಟಗಳು ಪರಿಹಾರವಾಗುತ್ತವೆ.

7). ಶುದ್ಧಮನದಿಂದ ವಿಷ್ಣು ಸಹಸ್ರನಾಮವನ್ನು ಪಠಿಸಿದರೆ ಆಧ್ಯಾತ್ಮಿಕ, ಆಧಿದೈವಿಕ ಹಾಗೂ ಆಧಿಭೌತಿಕ ಪೀಡೆಗಳಿಗೆ ಪರಿಹಾರ ದೊರೆಯುತ್ತದೆ. 

8). ವಿಷ್ಣುಸಹಸ್ರನಾಮ ಅಂದರೆ ಮಹಾವಿಷ್ಣುವಿನ ಸಹಸ್ರನಾಮ ಪಠನ ಇದರಲ್ಲಿ ಅಲೌಕಿಕ ಶಕ್ತಿ ಇರುವುದನ್ನು ಅನೇಕ ಸಾಧಕರು ಕಂಡಿದ್ದಾರೆ, ಅನುಭವಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣದಿಂದ ಕ್ಯಾನ್ಸೆರ್ ನಂತಹ ಭಯಂಕರ ಖಾಯಿಲೆಯಿಂದ ಹಿಡಿದು ಇನ್ನು ಇತರೆ ಕಾಯಿಲೆಗಳು ಕೂಡ ವಾಸಿಯಾಗುತ್ತವೆ.

 9). ಮನೆಯಲ್ಲಿ ಸಾಮೂಹಿಕ ಪಾರಾಯಣ ಪಠಿಸಿದರೆ ಮನೆಯ ವಾತವರಣವೇ ಬದಲಾಗುತ್ತದೆ. ಮನೆಯವ ಮೈಯಲ್ಲಿ ಮನಸ್ಸಲ್ಲಿ ಆಧ್ಯಾತ್ಮದ ಶಕ್ತಿಸಂಚಾರವಾದಂತಹ ಅನುಭವವಾಗುತ್ತದೆ. ಸಾಮೂಹಿಕ ಪಾರಾಯಣದಲ್ಲಿ ಅಂಥ ಒಂದು ವಿಶೇಷ ಶಕ್ತಿ ಇದೆ.

10). ವಿಷ್ಣು ಸಹಸ್ರನಾಮಕ್ಕೆ ಗಂಡಸು-ಹೆಂಗಸು-ಶೂದ್ರ-ಬ್ರಾಹ್ಮಣ ಎನ್ನುವ ಭೇದವಿಲ್ಲ. ಅದು ಎಲ್ಲಾ ವರ್ಣಾಶ್ರಮದವರಿಗೆ ಭಗವಂತ ನೀಡಿದ ಪಂಚಮ ವೇದ ಇದಾಗಿದೆ. ಹಾಗಾಗಿ ಈ ಸ್ತೋತ್ರವನ್ನು ಎಲ್ಲ ವರ್ಗದವರು ಮತ್ತು ಎಲ್ಲವಯಸ್ಸಿನವರು ಪಠಿಸಬಹುದಾಗಿದೆ. 

11). ಧಾರ್ಮಿಕ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿ ನಾವಾಗಿಯೇ ಪರಣ ಮಾಡಿ ಬರಬಹುದು . ಸಮಯ ವಿಲ್ಲದವರು ತಮ್ಮ ತಮ್ಮ ಮನೆಯಲ್ಲಿಯೇ ನಿತ್ಯ ಪಠಣ ಮಾಡಿದರೆ ನಮಗೂ ಹಾಗು ನಮ್ಮ ಸುತ್ತ ಮುತ್ತಲಿನ ಪರಿಸರಕ್ಕೂ ವಿಶೇಷ ಶಕ್ತಿ ಪ್ರಾಪ್ತಿಯಾಗುವುದು. 

12). ಪ್ರಾಕೃತಿಕ ಸಮತೋಲನಕ್ಕಾಗಿ, ಗ್ರಾಮದ ಶಾಂತಿಗಾಗಿ,ಕುಟುಂಬ ರಕ್ಷಣೆಗಾಗಿ, ನಮ್ಮೆಲ್ಲರ ಉನ್ನತಿಗಾಗಿ.

ಮನುಷ್ಯನ ಆಯಸ್ಸು ನೂರು ವರ್ಷ… ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ.

ಶ್ರೀ ಮಹಾವಿಷ್ಣು ಸಹಸ್ರ ನಾಮ ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. 

ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. 

ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ.
ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು(ಸಾಕ್ಷಾತ್ ಶ್ರೀಹರಿ) ನಮಗೆ ಕರುಣಿಸಿದ್ದಾರೆ.

ಸಂಗ್ರಹ

ಶಿವಾಪ೯ಣಮಸ್ತು...

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -68


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ |
ಅನಿರುದ್ಧೋsಪ್ರತಿರಥಃ ಪದ್ಯ್ಯುಮ್ನೋsಮಿತವಿಕ್ರಮಃ || 68 ||

೬೩೮) ಅರ್ಚಿಷ್ಮಾನ್

ಜಗತ್ತಿನಲ್ಲಿ ಯಾವ ಯಾವ ಬೆಳಕುಗಳಿವೆಯೋ ಅದರ ಮೂಲ ಭಗವಂತ ಅರ್ಚಿಷ್ಮಾನ್. ಆತ ಬೆಳಕಿನ ಜ್ವಾಲೆಗಳಿಂದ ಸುತ್ತುವರಿದವನು.

೬೩೯) ಅರ್ಚಿತಃ

ಎಲ್ಲರಿಂದ ಪೂಜಿಸಲ್ಪಡುವವನು.

೬೪೦) ಕುಂಭಃ

ಕುಂಭ ಎಂದರೆ ಮಡಕೆ. ಸ್ವತ್ತನ್ನು ಮುಚ್ಚಿಡುವ ಪಾತ್ರೆ. ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನೊಳಗೆ ಮುಚ್ಚಿಡುವ ಕುಂಭಃ. ಕುಂಭ ಎನ್ನುವುದಕ್ಕೆ ಭೂಮಿ ಎನ್ನುವ ವಿಶೇಷ ಅರ್ಥ ಕೂಡಾ ಇದೆ. ಭೂಮಿಯನ್ನು ನಿರ್ಮಿಸಿ ಬೆಳಗುವ ಭಗವಂತ ಕುಂಭಃ.

೬೪೧) ವಿಶುದ್ಧಾತ್ಮಾ

ಭಗವಂತ ಮತ್ಸ್ಯ, ಕೂರ್ಮ, ವರಾಹ ರೂಪದಲ್ಲಿ ಭೂಮಿಗಿಳಿದು ಬಂದರೂ ಕೂಡಾ, ಎಲ್ಲಾ ರೂಪದಲ್ಲೂ ಆತ ಪರಿಶುದ್ಧ ಸ್ವರೂಪ. ಎಲ್ಲಾ ಜೀವರೊಳಗಿರುವ ಭಗವಂತನಿಗೆ ಯಾವ ರೂಪದಲ್ಲೂ ಕೊಳೆಯ ಸ್ಪರ್ಶವಿಲ್ಲ.

೬೪೨) ವಿಶೋಧನಃ

ವಿಶೋಧನಃ ಎಂದರೆ ಪರಿಶುದ್ಧಗೊಳಿಸುವವನು. ನಮ್ಮ ಮನಸ್ಸಿನ ತುಂಬಾ ಭಗವಂತನನ್ನು ತುಂಬಿಕೊಂಡಾಗ ನಾವು ಶುದ್ಧರಾಗುತ್ತೇವೆ. ಸ್ನಾನ ಮಾಡುವುದರಿಂದಾಗಲಿ, ಒದ್ದೆ ಬಟ್ಟೆಯಿಂದಾಗಲಿ ಮೈಲಿಗೆ ಹೋಗುವುದಿಲ್ಲ, ವಿಶೋಧನನಾದ ಭಗವಂತನನ್ನು ಸದಾ ನೆನೆಯುವುದರಿಂದ ನಾವು ಪಾವನರಾಗುತ್ತೇವೆ.

೬೪೩) ಅನಿರುದ್ಧಃ

ಅನಿರುದ್ಧಃ ಎಂದರೆ ತಡೆಯಿಲ್ಲದವನು. ಭಗವಂತ ಇಲ್ಲದ ತಾಣವಿಲ್ಲ. ಎಲ್ಲಿಯೂ ಕೂಡಾ ತಡೆ ಇಲ್ಲದೆ ಇರುವ ಅವನಿಗೆ ಪ್ರವೇಶವಿಲ್ಲದ ತಾಣವಿಲ್ಲ. ಆದರೆ ಭಕ್ತವತ್ಸಲನಾದ ಭಗವಂತನನ್ನು 'ಅನಿಗಳು' (ಪ್ರಾಣ ತತ್ವವನ್ನು ಉಪಾಸನೆ ಮಾಡುವ ಸಾಧಕರು) ತಡೆ ಹಿಡಿಯಬಲ್ಲರು.ಆತ ಭಕ್ತರಾಧೀನ.

೬೪೪) ಅಪ್ರತಿರಥಃ

ಭಗವಂತನನ್ನು ಎದುರಿಸುವ ಇನ್ನೊಂದು ಶಕ್ತಿಯಿಲ್ಲ. ಆತ ಅಪ್ರತಿರಥಃ.

೬೪೫) ಪ್ರದ್ಯುಮ್ನಃ.

'ದ್ಯುಮ್ನ' ಎಂದರೆ ಬೆಳಕು/ಜ್ಞಾನ/ಸಂಪತ್ತು.  ಪ್ರದ್ಯುಮ್ನಃ ಎಂದರೆ ಎಲ್ಲಾ ಸಂಪತ್ತುಗಳ ಸ್ವಾಮಿ, ಸರ್ವಜ್ಞ, ಸರ್ವೇಶ್ವರ, ಜ್ಯೋತಿರ್ಮಯನಾದ ಭಗವಂತ.

೬೪೬) ಅಮಿತವಿಕ್ರಮಃ.

ಭಗವಂತ ಎಣೆಯಿರದ ಪೌರುಷದವನು, ಅವನ ವಿಕ್ರಮ ಅಮಿತ. ನಾಶವಿಲ್ಲದ,  ಅಳತೆಗೆ ಎಟುಕದ, ನಶ್ವರವಲ್ಲದ, ಅನಂತವಾದ ಪೌರುಷದ ಖನಿಯಾದ ಭಗವಂತ ಅಮಿತವಿಕ್ರಮಃ.

.ಮುಂದುವರೆಯುವುದು....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -69


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ |
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ || 69 ||

೬೪೭) ಕಾಲನೇಮಿನಿಹಾ

ಕಾಲನೇಮಿ ಎನ್ನುವವನು ಒಬ್ಬ ಅಸುರ. ಆತನೇ ಕಂಸನಾಗಿ ಹುಟ್ಟಿದ್ದು. ತಾವು ಬಯಸಿದಂತೆ ಕಾಲವನ್ನು ಬಳಸುವ ಲೋಕ ಕಂಟಕರನ್ನು ಸಂಹಾರ ಮಾಡುವುದಕ್ಕೋಸ್ಕರ ಭೂಮಿಗಿಳಿದು ಬರುವ ಭಗವಂತ ಕಾಲನೇಮಿನಿಹಾ. ಕಾಲವನ್ನು ನಿಯಂತ್ರಿಸುವ ಬ್ರಹ್ಮನನ್ನೂ ಒಂದು ದಿನ ಸಂಹಾರ ಮಾಡುವ (ಮಹಾಪ್ರಳಯದಲ್ಲಿ) ಭಗವಂತ ಕಾಲನೇಮಿನಿಹಾ.

೬೪೮) ವೀರಃ.

ಪರಾಕ್ರಮಶಾಲಿ.

೬೪೯) ಶೌರಿಃ.

ಶೂರರಿಗೆಲ್ಲ ಈಶ್ವರ. ಅನ್ಯಾಯದ ವಿರುದ್ಧ ಹೋರಾಡುವ ಎಲ್ಲಾ ಶೂರರೊಳಗಿದ್ದು ದುಷ್ಟ ಸಂಹಾರ ಮಾಡುವ ಭಗವಂತ ಶೌರಿಃ. ಶೂರಸೇನನ(ವಾಸುದೇವನ ತಂದೆ) ವಂಶದಲ್ಲಿ ಹುಟ್ಟಿಬಂದ ಅವತಾರಪುರುಷ ಭಗವಂತ ಶೌರಿಃ.

೬೫೦) ಶೂರಜನೇಶ್ವರಃ

ಶೂರರಿಗೆಲ್ಲ ಒಡೆಯ.

೬೫೧) ತ್ರಿಲೋಕಾತ್ಮಾ

ಮೂರು ಲೋಕಗಳ ಎಲ್ಲಾ ಜೀವರೊಳಗಿರುವ ಅಂತರ್ಯಾಮಿ. ಮೂರು ಲೋಕದಲ್ಲಿ ನಿಂತು ಎಲ್ಲವನ್ನೂ ಮಾಡುವ ಭಗವಂತ ತ್ರಿಲೋಕಾತ್ಮಾ.

೬೫೨) ತ್ರಿಲೋಕೇಶಃ

ಮೂರು ಲೋಕಗಳ ಸ್ವಾಮಿ.

೬೫೩) ಕೇಶವಃ

ಕೇಶದಿಂದ ಆವಿರ್ಭಾವ ಹೊಂದಿ ಅವತಾರವೆತ್ತಿದ ಗುಂಗುರು ಕೂದಲಿನ ಚೆಲುವ(ಕೃಷ್ಣ). ಸೂರ್ಯನ ಕಿರಣಗಳಲ್ಲಿ ನಿಂತು ಇಡೀ ಜಗತ್ತಿಗೆ ಶಕ್ತಿ ಪ್ರಧಾನ ಮಾಡುವ ಭಗವಂತ ಕೇಶವಃ.
ಕಹ+ಈಶ, ಕಹ ಅಂದರೆ ಬ್ರಹ್ಮಶಕ್ತಿ, ಈಶ ಎಂದರೆ ಶಿವಶಕ್ತಿ. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ. ಬೆಳಕಾಗಿ, ಮಳೆಯಾಗಿ, ಸೂರ್ಯಕಿರಣದೊಳಗೆ ಸನ್ನಿಹಿತನಾದ ಭಗವಂತ ಕೇಶವಃ.

೬೫೪) ಕೇಶಿಹಾ

ಕೇಶಿ ಎನ್ನುವ ಅಸುರನನ್ನು ಸಂಹಾರ ಮಾಡಿದವನು, ಪ್ರಳಯ ಕಾಲದಲ್ಲಿ ಸೂರ್ಯನನ್ನು, ಪ್ರಾಣತತ್ವವನ್ನೂ  ಸಂಹರಿಸುವವನು.

ಸೂರ್ಯನನ್ನು  ಮುಳುಗುವಾಗ, ಮೂಡುವಾಗ ಮತ್ತು ಗ್ರಹಣಕಾಲದಲ್ಲಿ ನೇರವಾಗಿ ನೋಡಬಾರದು, ನೀರಿನಲ್ಲಿ  ಸೂರ್ಯನ ಪ್ರತಿಬಿಂಬವನ್ನು ನೋಡುವುದು ಕಣ್ಣಿಗೆ ಹಾನಿಕರ. ಏಕೆಂದರೆ ಆ ಕಿರಣಗಳಲ್ಲಿ ದುಷ್ಟ ಶಕ್ತಿಗಳಿರುತ್ತವೆ ಇಂತಹ ದುಷ್ಟಶಕ್ತಿಗಳನ್ನು ಸಂಹಾರ ಮಾಡುವ ಭಗವಂತ ಕೇಶಿಹಾ.

ಬೆಳಿಗ್ಗೆ ಸೂರ್ಯೋದಯವಾದಮೇಲೂ ಮಲಗಿ ನಿದ್ದೆ ಮಾಡುವಂತೆ ಮಾಡುವ ಅಸುರಶಕ್ತಿಯನ್ನು (ಮಂದೇಹನನ್ನು) ನಾಶಮಾಡುವ ಭಗವಂತ ಕೇಶಿಹಾ.

೬೫೫) ಹರಿಃ

ನಮ್ಮ ಎಲ್ಲಾ ಸಮಸ್ಯೆಗಳನ್ನು,ಸಂಸಾರ ಬಂಧನವನ್ನು ಪರಿಹರಿಸುವ, ಕೊನೆಗೆ ಸಮಸ್ತ ವಿಶ್ವವನ್ನು ಸಂಹರಿಸುವ ಭಗವಂತ ಹರಿಃ.

ಅನಂತ ರೂಪದಲ್ಲಿ ವಿಶ್ವದೊಳಗೆ ವಿಹರಿಸುವ, ಭಕ್ತಿಯಿಂದ ಅರ್ಪಿಸಿದ ಆಹುತಿಯನ್ನು ಸ್ವೀಕರಿಸುವ ಭಗವಂತ, ಹರಿದ್ವರ್ಣನಾಗಿ ಇಡೀ ಭೂಮಿಯಲ್ಲಿ ಸಸ್ಯ ಸಮೃದ್ಧಿ ಮಾಡಿದ ಹರಿಃ.

ಮುಂದುವರೆಯುವುದು.....✍️💐

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -67


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಃ ಸ್ಥಿರಃ |
ಭೂಷಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ || 67 ||

೬೨೯) ಉದೀರ್ಣಃ

ಉಪ - ಉಪರಿ  ಅಂದರೆ ಎತ್ತರದಲ್ಲಿರುವ ವಸ್ತು. ಓದಿನಲ್ಲಿ, ಅಧ್ಯಾಯನದಲ್ಲಿ ಎತ್ತರದಲ್ಲಿರುವವರು ಉಪಾಧ್ಯಾಯರು, ಭೌದ್ಧಿಕವಾಗಿ ಎತ್ತರದಲ್ಲಿರುವವರು ಉದೀರ್ಣರು.  ಗುಣಪೂರ್ಣನಾದ ಭಗವಂತ ಉದೀರ್ಣಃ.

೬೩೦) ಸರ್ವತಶ್ಚಕ್ಷುಃ

ಚಕ್ಷು ಎಂದರೆ 'ಕಣ್ಣು'; ಎಲ್ಲೆಡೆ ಕಣ್ಣುಳ್ಳವನು ಹಾಗೂ ಎಲ್ಲೆಡೆ ಕಣ್ಣಿಟ್ಟವನು ಸರ್ವತಶ್ಚಕ್ಷುಃ.

೬೩೧) ಅನೀಶಃ

ತನಗೆ ಇನ್ನೊಬ್ಬ ಒಡೆಯನಿಲ್ಲದವನು ಅನೀಶಃ. ಭಗವಂತನಿಗಿಂತ ಎತ್ತರದಲ್ಲಿರುವವನು ಇನ್ನೊಬ್ಬನಿಲ್ಲ.

೬೩೨) ಶಾಶ್ವತಸ್ಥಿರಃ

ಯಾವತ್ತೂ ಒಂದೇ ರೀತಿ ಇರುವವನು; ಬದಲಾವಣೆ ಇಲ್ಲದೆ ಆಚಲನಾಗಿರುವ  ಭಗವಂತ ಶಾಶ್ವತಸ್ಥಿರಃ.

೬೩೩) ಭೂಶಯಃ

ಭೂಮಿಯಲ್ಲಿ ವ್ಯಾಪಿಸಿದವ, ನಾನಾ ರೀತಿಯ ಅವತಾರದಿಂದ ಭೂಮಿಯಲ್ಲಿ ಬಂದು ನೆಲೆಸಿದ ಭಗವಂತ ಭೂಶಯಃ.

೬೩೪) ಭೂಷಣಃ

ಎಲ್ಲಕ್ಕೂ ಚೆಲುವು ನೀಡುವ ಭಗವಂತ ಭೂಷಣಃ. ಅವನ ಅವತಾರ ಭೂಮಿಗೆ ಶೋಭೆ.

೬೩೫) ಭೂತಿಃ

ಉನ್ನತಿಯ ಸ್ವರೂಪ(ಸಾಕಾರ ಮೂರ್ತಿ)

೬೩೬) ವಿಶೋಕಃ

ಭಗವಂತನಿಗೆ ಎಂದೂ ದುಃಖವಿಲ್ಲ, ಅವತಾರದಲ್ಲಿ ಮಾತ್ರ ದುಃಖಪಟ್ಟವನಂತೆ ತೋರಿರುವುದನ್ನು ಕಾಣುತ್ತೇವೆ, ಆದರೆ ಇದು ಕೇವಲ ನಟನೆ ಅಷ್ಟೇ. ಮಾನವ ಅವತಾರದಲ್ಲಿದ್ದಾಗ ಮಾನವರಂತೆ ನಟಿಸಿ ಮಾನವನ ನಿಜವಾದ ಜೀವನ ಶೈಲಿಯನ್ನು ತೋರಿಸಿಕೊಡುವುದಕ್ಕಾಗಿ ಅಂತಹ ಶೋಕವನ್ನು ತೋರ್ಪಡಿಸಿದ್ದಾನೆಯೇ ಹೊರತು, ಅವನಿಗೆ ನಿಜವಾದ ಶೋಕವಿಲ್ಲ.

೬೩೭) ಶೋಕನಾಶನಃ

ದುಃಖವಿರದಂತೆ ಮಾಡುವವ.

ಮುಂದುವರೆಯುವುದು....✍️💐

Tuesday, May 16, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -66


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸ್ವಕ್ಷಃ ಸ್ವಂಗಃ ಶತಾನಂದೋ ನಂದಿರ್ಜೋತಿರ್ಗಣೇಶ್ವರಃ |
ವಿಜಿತಾತ್ಮಾsವಿಧೇಯಾತ್ಮಾ ಸತ್ಕೀರ್ತಿಶ್ಚಿನ್ನಸಂಶಯಃ || 66 ||

೬೨೦) ಸ್ವಕ್ಷಃ

ಸು+ಅಕ್ಷ; ದೋಷರಹಿತ ಸ್ವರೂಪಭೂತವಾದ ಕಣ್ಣುಳ್ಳವನು

೬೨೧) ಸ್ವಂಗಃ

ಸು+ಅಂಗಃ; ಭಗವಂತನ ಸಮಸ್ತ ಅಂಗಗಳೂ ಆನಂದಮಯ, ಜ್ಞಾನಮಯ ಹಾಗು ಸುಖ ಸ್ವರೂಪ.

೬೨೨) ಶತಾನಂದಃ.

ಶತ+ಆನಂದ; ಇಲ್ಲಿ ಶತ ಅಂದರೆ ನೂರಾರು ಅಥವಾ ಅನಂತ.  ಅನಂತ ಆನಂದರೂಪಿ ಭಗವಂತ ಶತಾನಂದಃ.

೬೨೩) ನಂದಿಃ.

ಪೂರ್ಣಾನಂದ ಸ್ವರೂಪ.

೬೨೪) ಜ್ಯೋತಿರ್ಗಣೇಶ್ವರಃ

ಎಲ್ಲಾ ಬೆಳಕುಗಳ ಒಡೆಯ; ಜ್ಞಾನಾನಂದಮಯವಾದ ಬೆಳಕನ್ನು ಕೊಟ್ಟು ನಮ್ಮನ್ನು ಅಜ್ಞಾನ ಪ್ರಪಂಚದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಭಗವಂತ ಜ್ಯೋತಿರ್ಗಣೇಶ್ವರಃ.

೬೨೫) ವಿಜಿತಾತ್ಮಾ

ಮನಸ್ಸನ್ನು ಗೆದ್ದವನು, ಅಂದರೆ ಸಾದಕ ಯಾರ ಕೃಪೆಯಿಂದ ತನ್ನ ಮನಸ್ಸನ್ನು ಗೆಲ್ಲಬಲ್ಲನೊ ಅವನು ವಿಜಿತಾತ್ಮಾ. 'ಆತ್ಮ' ಎಂದರೆ ಜೀವಗಳು;  ಎಲ್ಲಾ ಜೀವರನ್ನು ಗೆದ್ದ ಭಗವಂತ, ಯಾರನ್ನು ಸ್ವೀಕಾರ ಮಾಡುತ್ತಾನೋ ಅವನ ಮನಸ್ಸು ಮಾತ್ರ ಭಗವಂತನೆಡೆಗೆ ಹರಿಯುತ್ತದೆ.

೬೨೬) ಅವಿಧೇಯಾತ್ಮಾ (ವಿಧೇಯಾತ್ಮಾ)

ಎರಡು ರೂಪದಲ್ಲಿ ಈ ನಾಮವನ್ನು ನೋಡಬಹುದು. ಅವಿಧೇಯಾತ್ಮಾ ಅಂದರೆ ಇನ್ನೊಬ್ಬರಿಗೆ ಅಧೀನವಿಲ್ಲದ ಸ್ವತಂತ್ರ ಸ್ವರೂಪ. ಆದರೆ ಇಂತಹ ಭಗವಂತ ವಿಧೇಯಾತ್ಮಾ! ಏಕೆಂದರೆ ಅವನನ್ನು ಯಾರು ಭಕ್ತಿಯಿಂದ ಒಲಿಸಿಕೊಳ್ಳುತ್ತರೋ ಅವರಿಗೆ ಆತ ಅಧೀನ (ಭಕ್ತಪರಾಧೀನ).

೬೨೭) ಸತ್ಕೀರ್ತಿಃ

ನಿರ್ದಿಷ್ಟವಾದ, ದೋಷರಹಿತವಾದ ಸ್ವರೂಪ ಎಂದು ಜ್ಞಾನಿಗಳು ಯಾರನ್ನು ಗುಣಗಾನ ಮಾಡುತ್ತಾರೋ  ಅವನು ಸತ್ಕೀರ್ತಿಃ.

೬೨೮) ಛಿನ್ನಸಂಶಯಃ.

ಪ್ರತಿಯೊಂದು ವಸ್ತುವಿನ ಸಮಗ್ರ ಹಾಗೂ ಸಾಕ್ಷಾತ್ ಜ್ಞಾನವುಳ್ಳ ಭಗವಂತನಿಗೆ ಸಂಶಯವೇ ಇಲ್ಲ.  ನಮ್ಮ ಸಂಶಯವನ್ನು ನಾಶಮಾಡುವ ಭಗವಂತ ಛಿನ್ನಸಂಶಯಃ.

ಮುಂದುವರೆಯುವುದು...

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -65


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಶ್ರೀದಃ ಶ್ರೀಶಃ ಶ್ರೀನಿವಾಸಃ ಶ್ರೀನಿಧಿಃ ಶ್ರೀವಿಭಾವನಃ |
ಶ್ರೀಧರಃ ಶ್ರೀಕರಃ ಶ್ರೇಯಃ ಶ್ರೀಮಾನ್ ಲೋಕತ್ರಯಾಶ್ರಯಃ || 65 ||

೬೧೦) ಶ್ರೀದಃ

ಸಿರಿಯನ್ನೀಯುವವನು.

೬೧೧) ಶ್ರೀಶಃ

ಸರ್ವ ಸಿರಿಯ ಸರ್ವ ವೇದದ ಅಧಿಪತಿ

೬೧೨) ಶ್ರೀನಿವಾಸಃ

ವೇದದಲ್ಲಿ ಸನ್ನಿಹಿತನಾದ, ಲಕ್ಷ್ಮಿಯ ಅಂತರ್ಗತ ಭಗವಂತ.

೬೧೩) ಶ್ರೀನಿಧಿಃ

ನಮಗೆ ಅಮೂಲ್ಯವಾದ ಐದು ನಿಧಿಯನ್ನು (ಕಣ್ಣು, ಮೂಗು, ಬಾಯಿ, ಕಿವಿ, ಮನಸ್ಸು) ಕರುಣಿಸಿದ ಸಿರಿಯ ನೆಲೆ ಭಗವಂತ ಶ್ರೀನಿಧಿಃ.

೬೧೪) ಶ್ರೀವಿಭಾವನಃ

ಶ್ರಿದೇವಿಗೂ ಕಾರಣಪುರುಷ, ಜಗತ್ತಿಗೆ ಐದು ಬಗೆಯ ಶ್ರೀಯನ್ನು ಕೊಟ್ಟು ಉದ್ಧಾರ ಮಾಡಿದ ಭಗವಂತ ಶ್ರೀವಿಭಾವನಃ

೬೧೫) ಶ್ರೀಧರಃ

ಶ್ರೀಯನ್ನು ಧರಿಸಿದವನು.ಎದೆಯಲ್ಲಿ ಹಾಗು ತೊಡೆಯಲ್ಲಿ ಶ್ರಿಲಕ್ಷ್ಮಿಯನ್ನು ಧರಿಸಿದ ಭಗವಂತ ಸಮಸ್ಥ ವೇದವನ್ನು ಧಾರಣೆ ಮಾಡಿದ ಶ್ರೀಧರಃ.

೬೧೬) ಶ್ರೀಕರಃ

ನಮಗೆ ಇಂದ್ರಿಯವನ್ನು, ಜ್ಞಾನ ಸಂಪತ್ತನ್ನು ಕೊಟ್ಟ ಭಗವಂತ ಶ್ರೀಕರಃ.

೬೧೭) ಶ್ರೇಯಃ

ಭಗವಂತ ಶ್ರೇಯಸ್ಸಿನ ಸ್ವರೂಪ. ಜಗತ್ತಿನ ಪರಮಕಲ್ಯಾಣ ಮಂಗಳ ಸ್ವರೂಪ, ಎಲ್ಲಕ್ಕಿಂತ ಹಿರಿಯ ಹಿತಕಾರಿ ಭಗವಂತ ಶ್ರೇಯಃ.

೬೧೮) ಶ್ರೀಮಾನ್

ಸಿರಿವಂತ; ಅರಿವಿನ ನೆಲೆ.

೬೧೯) ಲೋಕತ್ರಯಾಶ್ರಯಃ

ಮೂರು ಲೋಕದ ಆಸರೆ; ಬ್ರಹ್ಮಾಂಡವನ್ನು ಧಾರಣೆ ಮಾಡಿದ ಶಕ್ತಿ.

ಮುಂದುವರೆಯುವುದು....

Monday, May 15, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -64


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅನಿವರ್ತೀ ನಿವೃತ್ತಾತ್ಮಾ ಸಂಕ್ಷೇಪ್ತಾ ಕ್ಷೇಮಕೃಚ್ಛಿವಃ |
ಶ್ರೀವತ್ಸವಕ್ಷಾಃ ಶ್ರೀನಿವಾಸಃ ಶ್ರೀಪತಿಃ ಶ್ರೀಮತಾಂ ವರಃ || 64 ||

೬೦೨) ಅನಿವರ್ತೀ

ಹಿಡಿದ ಕಾರ್ಯವನ್ನು ಎಂದೂ ಅಪೂರ್ಣ ಮಾಡದ, ಎಂದೂ ಮಾತಿಗೆ ತಪ್ಪದ ಭಗವಂತ ಅನಿವರ್ತೀ. ಜೀವರಲ್ಲಿ ನೆಲೆಸಿದ ಆತ ಮುಕ್ತರನ್ನು ಎಂದೂ ಸಂಸಾರಕ್ಕೆ ಮರಳಿಸುವುದಿಲ್ಲ.

೬೦೩) ನಿವೃತ್ತಾತ್ಮಾ

ಭಗವಂತನಿಗೆ ದೇವತೆಗಳ ಮೇಲೆ ಪ್ರೀತಿಯೂ ಇಲ್ಲ, ದೈತ್ಯರ ಮೇಲೆ ದ್ವೇಷವೂ ಇಲ್ಲ. ಆತನಿಗೆ ಯಾವುದರ ಮೇಲೂ ಮೋಹವಿಲ್ಲ. ಎಲ್ಲಿ ಧರ್ಮವಿದೆಯೋ ಅದನ್ನು ಪ್ರೀತಿಸುವ ಭಗವಂತ, ಎಲ್ಲಾ ಬಂಧಗಳಿಂದಾಚೆಗಿನ ತಟಸ್ಥ ಸ್ವರೂಪ.

೬೦೪) ಸಂಕ್ಷೇಪ್ತಾ

ವಿಶ್ವವನ್ನು ಪ್ರಳಯ ಕಾಲದಲ್ಲಿ ಸಂಕುಚಗೊಳಿಸುವವನು ಸಂಕ್ಷೇಪ್ತಾ. ಪ್ರಳಯ ಕಾಲದಲ್ಲಿ ಮಣ್ಣು ನೀರಿನಲ್ಲಿ, ನೀರು ಬೆಂಕಿಯಲ್ಲಿ, ಬೆಂಕಿ ಗಾಳಿಯಲ್ಲಿ, ಗಾಳಿ ಆಕಾಶದಲ್ಲಿ, ಆಕಾಶ ಆತ್ಮನಲ್ಲಿ ಸಂಕುಚಗೊಂಡು ಸೂಕ್ಷ್ಮ ಸ್ಥಿತಿಗೆ ಹೋಗುವುದು. ಹೀಗೇ ಸೃಷ್ಟಿ-ಸಂಹಾರ ಮಾಡುವ ಭಗವಂತ ಸಂಕ್ಷೇಪ್ತಾ.

೬೦೫) ಕ್ಷೇಮಕೃಚ್ಛಿವಃ

ಸಜ್ಜನರಿಗೆ ಕ್ಷೇಮವನ್ನೀಯುವ, ದುರ್ಜನರ ಕ್ಷೇಮವನ್ನು ಇಲ್ಲವಾಗಿಸುವ ಮಂಗಳ ಸ್ವರೂಪ ಭಗವಂತ  ಕ್ಷೇಮಕೃಚ್ಛಿವಃ. ನಮಗೆ ಜೀವನ ಕೊಟ್ಟು, ಕ್ಷೇಮ ಕೊಟ್ಟವ. ನಾವು ಏನನ್ನೂ ಪಡೆದಿದ್ದೇವೋ ಅದನ್ನು ಉಳಿಸಿಕೊಳ್ಳಲು ನೆರವನ್ನೀಯುವವ, ನಮ್ಮನ್ನು ಸಂಸಾರ ಬಂಧದಿಂದ ಬಿಡಿಸಿ ಅತಿದೊಡ್ಡ ಕ್ಷೇಮವಾದ ಮೋಕ್ಷವನ್ನು ಕರುಣಿಸುವ ಪರಮಮಂಗಳ ಜ್ಞಾನಾನಂದ ಬಲಸ್ವರೂಪಿ ಭಗವಂತ ಕ್ಷೇಮಕೃಚ್ಛಿವಃ.

೬೦೬) ಶ್ರೀವತ್ಸವಕ್ಷಾಃ

ಭಗವಂತನ ಬಲ ಎದೆಯಲ್ಲಿ ಶ್ರೀವತ್ಸ ಮಚ್ಚೆಯಿದೆ. ಇದು ಲಕ್ಷ್ಮಿ ಸ್ವರೂಪ. ಸದಾ ಲಕ್ಷ್ಮಿಯನ್ನು ಎದೆಯಲ್ಲಿ ಧರಿಸಿದ ಭಗವಂತ ಶ್ರೀವತ್ಸವಕ್ಷಾಃ.

೬೦೬) ಶ್ರೀವಾಸಃ

ಯಾರ ಎದೆಯಲ್ಲಿ ಲಕ್ಷ್ಮಿ ಲಕ್ಷಣವಾಗಿ ಕುಳಿತಿದ್ದಾಳೋ ಅವನು ಶ್ರೀವಾಸಃ

೬೦೭) ಶ್ರೀಪತಿಃ

ಲಕ್ಷ್ಮಿಯ ಪತಿ ಹಾಗು ಸಮಸ್ತ ವೇದಗಳ ಒಡೆಯ ಭಗವಂತ ಶ್ರೀಪತಿಃ.

೬೦೯) ಶ್ರೀಮತಾಂವರಃ

ಜಗತ್ತಿನಲ್ಲಿರುವ ಶ್ರೀಮಂತರಲ್ಲಿ ಸರ್ವ ಶ್ರೇಷ್ಠ ಶ್ರೀಮಂತ, ಸರ್ವಶ್ರೇಷ್ಠ  ಜ್ಞಾನಿ  ಶ್ರೀಮತಾಂವರಃ.

ಮುಂದುವರೆಯುವುದು....

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -63


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಶುಭಾಂಗಃ ಶಾಂತಿದಃ ಸ್ರಷ್ಟಾ ಕುಮುದಃ ಕುವಲೇಶಯಃ |
ಗೋಹಿತೋ ಗೋಪತಿರ್ಗೋಪ್ತಾ ವೃಷಭಾಕ್ಷೋ ವೃಷಪ್ರಿಯಃ || 63 ||

೫೯೨) ಶುಭಾಂಗಃ

ಮಂಗಳಕರವಾದ ಅಂಗಾಂಗಗಳುಳ್ಳವನು ಹಾಗೂ ಆನಂದಮಯವಾದ ಬೆಳಕಿನ ರೂಪ ಭಗವಂತ ಶುಭಾಂಗಃ. ಸಮಷ್ಟಿಯಾಗಿ ಆತನ ಇಡೀ ದೇಹ ಆನಂದಮಯವಾದ ಬೆಳಕಿನ ಮಾಂಗಲಿಕ ರೂಪ. ಆತ ನಮ್ಮೊಳಗಿರುವ ತನಕ ನಮ್ಮ ದೇಹ ಮಂಗಳ (ಶಿವ). ಆತ ಹೊರಟು ಹೋದ ಮೇಲೆ ಶವ! ಆತನ ಸನ್ನಿಧಾನವಿಲ್ಲದ ದೇಹ ಅಮಂಗಳ.

'ಶುಭಾಂಗ' ಇಲ್ಲಿ 'ಶು' ಎಂದರೆ ಸುಖಸ್ವರೂಪ, 'ಭ' ಎಂದರೆ ಬೆಳಕಿನಪುಂಜ. ಕತ್ತಲು ಹಾಗೂ ದುಃಖದ ಸ್ಪರ್ಶವೇ ಇಲ್ಲದ ಆನಂದಮಯ ಅವಯವಗಳುಳ್ಳ ಜ್ಯೋತಿರ್ಮಯ ಭಗವಂತ ಶುಭಾಂಗಃ.

೫೯೩) ಶಾಂತಿದಃ

ಮೋಕ್ಷವನ್ನು, ಅಜ್ಞಾನದ ಸ್ಪರ್ಶವಿಲ್ಲದ ಪರಿಪೂರ್ಣ ಆನಂದವನ್ನು ಕೊಟ್ಟು ನಮ್ಮನ್ನು ಸಂಸಾರ ಬಂಧದಿಂದ ಬಿಡಿಸುವ ಭಗವಂತ ಶಾಂತಿದಃ.

೫೯೪) ಸ್ರಷ್ಟಾ

ಸೂಕ್ಷ್ಮ ರೂಪಿ ಪರಮಾಣುಗಳ ಪುಂಜದಿಂದ ಸ್ಥೂಲ ರೂಪದ ಈ ಪ್ರಪಂಚವನ್ನು ಸೃಷ್ಟಿಸಿದ ಭಗವಂತ ಸ್ರಷ್ಟಾ.

೫೯೫) ಕುಮುದಃ

'ಮುದ' ಅಂದರೆ ಆನಂದ; 'ಕು' ಎಂದರೆ ಭೂಮಂಡಲ. ಭೂಮಿಗೆ ಆನಂದವನ್ನು ಕೊಡುವುದಕ್ಕೋಸ್ಕರ ಇಳಿದು ಬಂದ ಭಗವಂತ ಕುಮುದಃ.

೫೯೬) ಕುವಲೇಶಯಃ

'ಕು' ಎಂದರೆ ಭೂಮಿ, 'ವಲ' ಎಂದರೆ ಹರಿಯುವುದು. ಪಂಚಭೂತಗಳಲ್ಲಿ ಹರಿಯುವುದು ನೀರು, ಆದ್ದರಿಂದ 'ಕುವಲ' ಎಂದರೆ ನೀರು. ಕುವಲೇಶಯ ಎಂದರೆ ನೀರಿನಲ್ಲಿ ಮಲಗಿದವನು. ಇಲ್ಲಿ 'ನೀರು' ಎಂದರೆ ಸೂಕ್ಷ್ಮರೂಪಿ ಪ್ರಳಯ ಸಮುದ್ರ. ಇಂತಹ ಸೂಕ್ಷ್ಮ ಪ್ರಪಂಚದಲ್ಲಿ ಮಲಗಿದ ಭಗವಂತ ಕುವಲೇಶಯಃ.

೫೯೭) ಗೋಹಿತಃ

'ಗೋವು' ಎನ್ನುವ ಪದವನ್ನು ಹಿಂದೆ ಅನೇಕ ಬಾರಿ ವಿಶ್ಲೇಷಿಸಿದ್ದೇವೆ. ಎಲ್ಲಾ ಬಗೆಯಿಂದಲೂ ನಮಗೆ ಉಪಯೋಗಕ್ಕೆ ಬರುವ ವಸ್ತು  ಗೋವು. ಈ ಪದಕ್ಕೆ ಅನೇಕ ಅರ್ಥಗಳಿವೆ, ಸ್ವರ್ಗ, ಸೂರ್ಯ, ಹಸು, ಭೂಮಿ, ನೀರು, ಕಣ್ಣು, ಕೂದಲು, ವೇದ ಇತ್ಯಾದಿ. ನಮಗೆ ಮಾರ್ಗದರ್ಶನ ಮಾಡುವ ವೇದಗಳನ್ನು ನಮಗೆ ಕರುಣಿಸಿದ ವೇದ ವಾಗ್ಮಯ, ಭೂಮಿಗೆ ಹಿತಕಾರಿಯಾದ, ಗುಂಗುರು ಕೂದಲಿನ ಗೋವಳನಾಗಿ, ಎಲ್ಲರಿಗೂ ಹಿತವನ್ನುಂಟು ಮಾಡಿದ ಭಗವಂತ ಗೋಹಿತಃ.

೫೯೮) ಗೋಪತಿಃ

ಗೋವುಗಳ, ಭೂಮಿಯ, ವೇದದ ಹಾಗೂ ಸ್ವರ್ಗದ ಒಡೆಯ ಭಗವಂತ ಗೋಪತಿಃ.

೫೯೯) ಗೋಪ್ತಾ

ತನ್ನನ್ನು ತಾನು ಮುಚ್ಚಿಟ್ಟುಕೊಂಡು ಜಗತ್ತಿನ ರಕ್ಷಣೆ ಮಾಡುವ ಭಗವಂತ ಗೋಪ್ತಾ. ಎಲ್ಲೆಡೆ ಇದ್ದು ಎಲ್ಲರನ್ನೂ ಕಾಪಾಡುವ ಕರುಣಾಮೂರ್ತಿ.

೬೦೦) ವೃಷಭಾಕ್ಷಃ

ವೃಷಭ-ಅಕ್ಷ ಅಂದರೆ ಧರ್ಮದ ಮೇಲೆ ಕಣ್ಣಿಟ್ಟು ಅದರ ರಕ್ಷಣೆಗೋಸ್ಕರ ಪದೇ ಪದೇ ಭೂಮಿಗೆ ಅವತಾರ ರೂಪಿಯಾಗಿ ಇಳಿದು ಬರುವವ. ಭಗವಂತ ಸ್ವತಃ ಭೂಮಿಗಿಳಿದು ಬರಬಹುದು ಅಥವಾ ಮಹಾ ಪುರುಷರನ್ನು, ಸಾತ್ವಿಕರನ್ನು ಕಳುಹಿಸಬಹುದು. ಅವರೊಳಗೆ ವಿಶೇಷ ಸನ್ನಿಧಾನವನ್ನಿಟ್ಟು ಧರ್ಮ ರಕ್ಷಣೆ ಮಾಡುವ ಭಗವಂತ ವೃಷಭಾಕ್ಷಃ.

೬೦೧) ವೃಷಪ್ರಿಯಃ

ಧರ್ಮದ ನಡೆಯನ್ನು ಪ್ರೀತಿಸುವ ಭಗವಂತ ವೃಷಪ್ರಿಯಃ.

ಮುಂದುವರೆಯುವುದು...

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -62


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ತ್ರಿಸಾಮಾ ಸಾಮಗಃ ಸಾಮ ನಿರ್ವಾಣಂ ಭೇಷಜಂ ಭಿಷಕ್ |
ಸಂನ್ಯಾಸಕೃಚ್ಛಮಃ ಶಾಂತೋ ನಿಷ್ಠಾಃ ಶಾಂತಿಃ ಪರಾಯಣಮ್ || 62 ||

೫೮೦) ತ್ರಿಸಾಮಾ

ಈ ಹಿಂದೆ ಹೇಳಿದಂತೆ ಹಿಂದಿನ ಕಾಲದಲ್ಲಿ ಯಜ್ಞ ಮಾಡುವಾಗ ಮೂರು ಹೊತ್ತು ಆಹುತಿ ಕೊಡುತ್ತಿದ್ದರು. ಮೂರು ಹೊತ್ತು ದೇವರನ್ನು ಋಗ್ವೇದದ ಮಂತ್ರಗಳಿಂದ ಸ್ತೋತ್ರ ಮಾಡುತ್ತಿದ್ದರು, ಅದಕ್ಕೆ 'ಶಸ್ತ್ರ' ಎಂದು ಹೆಸರು. ಬೆಳಿಗ್ಗೆ  ಅಷ್ಟ ವಸುಗಳಿಗೆ ಸಂಬಂಧಪಟ್ಟ 'ವಾಸವಸಾಮ'; ಮಧ್ಯಾಹ್ನ   ಹನ್ನೊಂದು ರುದ್ರರಿಗೆ ಸಂಬಂಧಪಟ್ಟ 'ರೌದ್ರಸಾಮ'. ಸಂಜೆ  ಹನ್ನೆರಡು ಮಂದಿ ಆದಿತ್ಯರಿಗೆ ಸಂಬಂಧಪಟ್ಟ 'ಆದಿತ್ಯಸಾಮ'. ಹೀಗೆ ಮೂರು ಹೊತ್ತು ಮೂರು ವಿಧದ ಸಾಮದಿಂದ ಹೊಗಳಲ್ಪಡುವ  ಭಗವಂತ ತ್ರಿಸಾಮಾ.

ಮೂರು ಸ್ವಸ್ತುಗಳನ್ನು (ಸತ್ವ, ರಜಸ್ಸು, ತಮಸ್ಸು, ಅಥವಾ ಮಣ್ಣು, ನೀರು, ಬೆಂಕಿ) ಸಮೀಕರಿಸಿ ಸಮಸ್ತ ಪ್ರಪಂಚವನ್ನು ಸೃಷ್ಟಿ ಮಾಡಿದ ಭಗವಂತ ತ್ರಿಸಾಮ.

೫೮೧) ಸಾಮಗಃ

ಸಾಮವೇದದ ಮಂತ್ರವನ್ನು ಗಾನಬದ್ಧವಾಗಿ ಹಾಡುವವರು ಸಾಮಗರು. ಭಗವಂತ ಮೊದಲು ಹಯಗ್ರೀವ ರೂಪದಲ್ಲಿ ಸಮಸ್ತ ವೇದವನ್ನು ಉಚ್ಚಾರ ಮಾಡಿದವ. ಹೀಗೆ ಸಾಮವನ್ನು ಗಾನಮಾಡಿ ಆವಿಷ್ಕಾರ ಮಾಡಿದ ಭಗವಂತ ಸಾಮಗಃ.

೫೮೨) ಸಾಮ

ವೇದದಲ್ಲಿ ಸಾಮವೇದ ನನಗೆ ಬಲು ಇಷ್ಟ, ಅದಕ್ಕಾಗಿ ಅದರಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದೇನೆ ಎಂದು ಗೀತೆಯಲ್ಲಿ ಕೃಷ್ಣ ಹೇಳಿದ್ದಾನೆ:

ವೇದಾನಾಂ ಸಾಮವೇದೋSಸ್ಮಿ ದೇವಾನಾಮಸ್ಮಿ ವಾಸವಃ

ಇಲ್ಲಿ ಸಾಮ ಎಂದರೆ ಎಲ್ಲೆಡೆಯು ಸಮನಾಗಿದ್ದು ಎಂದರ್ಥ, ವೇದ ಎಂದರೆ ಜ್ಞಾನ ರೂಪನಾದ್ದರಿಂದ 'ಸಾಮವೇದ' ಎನ್ನಿಸಿ ಸಾಮವೇದದಲ್ಲಿದ್ದೇನೆ ಎಂದರ್ಥ. ವೇದಗಳೆಲ್ಲವೂ ಅಪೂರ್ವವಾಗಿದ್ದರೂ ಕೂಡಾ ಸಾಮವನ್ನು ಏಕೆ ವಿಶೇಷವಾಗಿ ಹೇಳಿದ್ದಾರೆ ಎನ್ನುವ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಕಾರಣವೇನೆಂದರೆ, ವೇದದಲ್ಲಿ ತಾರತಮ್ಯವಿಲ್ಲ ಆದರೆ ವೇದಾಭಿಮಾನಿಗಳಲ್ಲಿ ತಾರತಮ್ಯವಿದೆ! ಸಾಮ ವೇದದ ಅಭಿಮಾನಿ ಪ್ರಾಣದೇವರು. ಶಾಸ್ತ್ರಕಾರರು ಹೇಳುವಂತೆ ಸಾಮಗಾನವನ್ನು ಅತ್ಯಂತ ಮಧುರವಾಗಿ ಹಾಡುವವರು ಪ್ರಾಣದೇವರು. ಭಗವಂತನಿಗೆ ಅತಿ ಪ್ರಿಯನಾದ ಪ್ರಾಣ ದೇವರ ಹಾಡು 'ಸಾಮಗಾನ' ಭಗವಂತನಿಗೆ ಅತೀ ಇಷ್ಟ.

ಸಾಮದಲ್ಲಿ ಇನ್ನೊಂದು ವಿಶೇಷವಿದೆ. ಋಗ್ವೇದ ಮತ್ತು ಯಜುರ್ವೇದದಲ್ಲಿ  ಮಂತ್ರಗಳ ಹಾಗು ಶಬ್ಧಗಳ ಮುಖೇನ ಭಗವಂತನ ಸ್ತುತಿಯಾದರೆ, ಸಾಮವೇದದಲ್ಲಿ ಶಬ್ಧದ ಜೊತೆಗೆ ನಾದವನ್ನು ಭಗವಂತನಲ್ಲಿ ಸಮನ್ವಯಗೊಳಿಸುವ ಅಪೂರ್ವ ಗುಣಧರ್ಮವಿದೆ. ಶಬ್ದಗಳ ಹಿಂದಿನ ನಾದದಿಂದ ಭಗವಂತನನ್ನು ಕಾಣುವ ನಾದೋಪಾಸನೆ ಇರುವ ವೇದ ಸಾಮವೇದವಾದ್ದರಿಂದ ಭಗವಂತ ಸಾಮದಲ್ಲಿ ವಿಶೇಷವಾಗಿ ಸನ್ನಿಹಿತನಾಗಿದ್ದಾನೆ. ಆದ್ದರಿಂದ 'ಸಾಮ' ಭಗವಂತನ ಅನ್ವರ್ಥ ನಾಮ.

೫೮೩) ನಿರ್ಬಾಣಂ

ಪಾಂಚಭೌತಿಕ ಶರೀರವಿಲ್ಲದ ಜ್ಞಾನಾನಂದಮಯ ಸ್ವರೂಪ ಭಗವಂತ ನಿರ್ಬಾಣಂ.

೫೮೪) ಭೇಷಜಮ್
ಸಂಸಾರವೆಂಬ ರೋಗಕ್ಕೆ ಏಕಮಾತ್ರ ಮದ್ದು ಭಗವಂತ  ಭೇಷಜಮ್.

೫೮೫) ಭಿಷಕ್

ಸರ್ವ ರೋಗಗಳಿಗೆ ಮದ್ದು ನೀಡುವ ವೈದ್ಯರ  ವೈದ್ಯ.

೫೮೬) ಸಂನ್ಯಾಸಕೃತ್

ಸನತ್ ಕುಮಾರನಾಗಿ, ನರ-ನಾರಾಯಣ ರೂಪಿಯಾಗಿ ನಮಗೆ ನಿಜವಾದ ಸನ್ಯಾಸಿಯ ಬದುಕನ್ನು ಬದುಕಿ ತೋರಿಸಿದ ಭಗವಂತ ಸಂನ್ಯಾಸಕೃತ್. ನಿಜವಾದ ಸನ್ಯಾಸ ಎಂದರೆ ಕಾಮವನ್ನು ಹಾಗೂ ಕ್ರೋಧವನ್ನು ಸಂಪೂರ್ಣ ಬಿಡುವುದು. ಕಾಮವೇ ಕ್ರೋಧಕ್ಕೆ ಕಾರಣ. ಈಡೇರದ ಆಸೆಯಿಂದ ಮನಸ್ಸಿನಲ್ಲಿ ಉಂಟಾಗುವ ವಿಕಾರ 'ಕೋಪ'. ಪ್ರಪಂಚ ನಾವು ಬಯಸಿದಂತೆ ಎಂದೂ ಇರುವುದಿಲ್ಲ, ಹೀಗಿರುವಾಗ ಹೀಗೇ ಆಗಬೇಕು ಎಂದು ಬಯಸುವುದು ಮೂರ್ಖತನ. ಜಗತ್ತಿನಲ್ಲಿ ಏನು ನಡೆಯುತ್ತಿದೆಯೋ ಅದನ್ನು ಹಾಗೇ ಸ್ವೀಕರಿಸುವುದು ಧರ್ಮ. ಸಮುದ್ರದಲ್ಲಿ ಅಲೆಗಳು, ತರಂಗಗಳು ನಿರಂತರ ಹಾಗೂ ಅನಿವಾರ್ಯ. ಆದ್ದರಿಂದ ತೆರೆಯ ಜೊತೆಗೆ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಬೇಕೇ ಹೊರತು ತೆರೆ ನಿಂತ ಮೇಲೆ ಸ್ನಾನ ಮಾಡುತ್ತೇನೆ ಎಂದರಾಗದು. ಬದುಕು ಕೂಡಾ ಅಷ್ಟೇ; ಪ್ರಪಂಚ ಸಮುದ್ರದ ಅಲೆಗಳಂತೆ, ಜೀವನದಲ್ಲಿ ಏನು ಘಟಿಸಿತೋ ಅದಕ್ಕೆ ಒಗ್ಗಿಕೊಂಡು ಬದುಕಬೇಕೇ ಹೊರತು ಜಗತ್ತನ್ನು ನಮ್ಮ ಇಚ್ಚೆಯಂತೆ ಬಯಸುವುದು ತಪ್ಪು. ಹೀಗೇ ಜಗತ್ತಿನ ಅಲೆಗಳಿಗೆ ಒಗ್ಗಿಕೊಂಡು ಬದುಕುವುದು ಒಬ್ಬ ಸಂಸಾರಿಯ ಸನ್ಯಾಸ! ಇಂಥದ್ದು ಬೇಕು ಎಂದು ಬಯಸದೇ ಇದ್ದದ್ದರಲ್ಲಿ ಖುಷಿ ಪಡುವುದು, ಏನೇ ಬಂದರೂ ಧೃತಿಗೆಡದೆ, ಬದುಕಿನ ಸಂಪೂರ್ಣ ಹೊಣೆಗಾರಿಕೆಯನ್ನು ಭಗವಂತನಿಗೆ ಬಿಟ್ಟುಬಿಡುವುದು ಸನ್ಯಾಸ. ಇಡೀ ಬದುಕನ್ನು, ಸರ್ವಸ್ವವನ್ನು, ಸರ್ವ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು ಸನ್ಯಾಸ.

೫೮೭) ಶಮಃ

ಮನಸ್ಸನ್ನು  ಸದಾ ಭಗವಂತನಲ್ಲಿಡುವುದು, ಯಾವ ಚಿಂತೆ ಇಲ್ಲದೆ ನೆಮ್ಮದಿಯಿಂದಿರುವುದು, ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಗುಣಧರ್ಮ. ಒಳ್ಳೆಯ ವ್ಯಕ್ತಿತ್ವ ಹೊಂದಿದ ಅಥವಾ ಒಳ್ಳೆಯ ಜೀವ ಸ್ವಭಾವವಿರುವವರಿಗೆ ಇಂತಹ ಗುಣಗಳನ್ನು ದಯಪಾಲಿಸುವ ಭಗವಂತ ಶಮಃ. ಇದಕ್ಕಾಗಿ ಸನ್ಯಾಸಿಯಾಗಬೇಕೆಂದಿಲ್ಲ, ಗೃಹಸ್ಥ ಕೂಡಾ ಅನುಸರಿಸಬಹುದಾದ ಗುಣವಿದು. ಇದಕ್ಕೆ ಉತ್ತಮ ಉದಾಹರಣೆ ಧರ್ಮವ್ಯಾಧ. ಮಾಂಸ ಮಾರಿ ಜೀವಿಸುತ್ತಿದ್ದ ವ್ಯಾಧನಲ್ಲಿ ಇಂತಹ ಗುಣವಿತ್ತು. ಲೋಕದಲ್ಲಿ ನಡೆಯುವ ಪ್ರತಿಯೊಂದು  ಘಟನೆಯ ಹಿಂದೆ ಒಂದು ಕಾರಣವಿರುತ್ತದೆ, ಭಗವಂತ ಎಂದೂ ಕೆಟ್ಟದ್ದನ್ನು ಕೊಡುವುದಿಲ್ಲ, ಆತ ಕೊಡುವುದೆಲ್ಲ ಪ್ರಸಾದ ಎಂದು ಸ್ವೀಕರಿಸುವ ಗುಣ ನಮ್ಮಲ್ಲಿರಬೇಕು ಅಷ್ಟೇ.

೫೮೮) ಶಾಂತಃ

'ಶಂ' ಎಂದರೆ ಆನಂದ; 'ಅಂತ' ಎಂದರೆ ತುತ್ತತುದಿ. ಆನಂದದ ಪರಾಕಾಷ್ಟೆಯಲ್ಲಿರುವ ಭಗವಂತ ಶಾಂತಃ

೫೮೯) ನಿಷ್ಠಾ
ಜಗತ್ತಿನಲ್ಲಿರುವ ಎಲ್ಲವೂ ಏಲ್ಲಿ ಕೊನೆಗೊಳ್ಳುತ್ತದೋ, ಯಾವುದು ಸರ್ವಾಧಾರವೋ ಅದು ನಿಷ್ಠಾ.

೫೯೦) ಶಾಂತಿಃ

ಜ್ಞಾನಾನಂದ ಭಲದ ಪರಿಪೂರ್ಣ ಸಮಷ್ಟಿ ಭಗವಂತ ಶಾಂತಿಃ. ಈ ಕಾರಣಕ್ಕಾಗಿ ವೇದಗಳಲ್ಲಿ ಮೊದಲಿಗೆ ಶಾಂತಿ  ಮಂತ್ರ ಪಠನೆ ಮಾಡುತ್ತೇವೆ.

೫೯೧) ಪರಾಯಣಮ್

ಪರಾಯಣಮ್ ಎಂದರೆ ಸರ್ವೋತ್ಕೃಷ್ಟವಾದ ತುತ್ತ ತುದಿ, ಕೊನೆಯ ಆಸರೆ. ಎಲ್ಲಾ ಮೆಟ್ಟಿಲುಗಳನ್ನು ಹತ್ತಿ ಕೊನೆಗೆ ತಲುಪುವ ತುತ್ತ ತುದಿ.

ಮುಂದುವರೆಯುವುದು...

Thursday, May 11, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -61


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸುಧನ್ವಾ ಖಂಡಪರಶುರ್ದಾರುಣೋ ದ್ರವೀಣಪ್ರದಃ |
ದಿವಃ ಸ್ಪ್ರಕ್ಸರ್ವದೃಗ್ವ್ಯಾಸೋ ವಾಚಸ್ಪತಿರಯೋನಿಜಃ || 61 ||

೫೭೨) ಸುಧನ್ವಾ

ಸೊಗಸಾದ ಸುಂದರವಾದ ಬಲಿಷ್ಠವಾದ ಧನುಸ್ಸನ್ನು ಶತ್ರುಗಳ ದಮನಕ್ಕೋಸ್ಕರ ಹಿಡಿದವ. ಆತ ನಮಗೆಲ್ಲರಿಗೂ ಓಂಕಾರವೆಂಬ ಧನುಸ್ಸನ್ನು ಕೊಟ್ಟಿದ್ದಾನೆ. ಅದನ್ನು ಉಪಯೋಗಿಸಿ ನಮ್ಮ ಆತ್ಮವನ್ನು ಬಾಣವಾಗಿ ಉಪಯೋಗಿಸಿ ಭಗವಂತನತ್ತ ಗುರಿಮಾಡಿ ಹೊಡೆದಾಗ ಆತನನ್ನು ತಲುಪಬಹುದು. ಓಂ ಅಂದರೆ ಎಲ್ಲಾ ವೇದಗಳ ಮೂಲಾಕ್ಷರ, ಸಮಸ್ತ ವೇದಗಳ ಜ್ಞಾನದಿಂದ(ಬಿಲ್ಲಿನಿಂದ) ನಮ್ಮ ಆತ್ಮಸ್ವರೂಪ(ಬಾಣ) ಭಗವಂತನನ್ನು ತಲುಪುವ ಸಾಧನ.
ವಿದ್ಯಾಮಾನಿನಿಯಾದ ಶ್ರೀತತ್ವವನ್ನು ಕೈಯಲ್ಲಿ ಹಿಡಿದವ; ರಮೆಯನ್ನು ಬಿಲ್ಲಾಗಿ,ಪ್ರಾಣನನ್ನು ಬಾಣವಾಗಿ ಹಿಡಿದ ಭಗವಂತ ಸುಧನ್ವಾ. ಅವತಾರ ರೂಪಿಯಾಗಿ ವಿಶೇಷ ಬಿಲ್ಲಿನಿಂದ ಶತ್ರು ಸಂಹಾರ ಮಾಡಿದ ಭಗವಂತ ಸುಧನ್ವಾ.

೫೭೩) ಖಂಡಪರಶುಃ

ಶತ್ರುಗಳನ್ನು ತರಿವ ಕೊಡಲಿ ಹೊತ್ತವನು ಖಂಡಪರಶುಃ. ಪರಶುರಾಮನಾಗಿ, ವಿಶೇಷ ಕೊಡಲಿಯಿಂದ ದುಷ್ಟ ಕ್ಷತ್ರಿಯರ ದಮನ ಮಾಡಿದ ಭಗವಂತ ಖಂಡಪರಶುಃ.

೫೭೪) ದಾರುಣಃ

ದುಷ್ಟರಿಗೆ, ಲೋಕ ಕಂಟಕರಿಗೆ ಭಗವಂತ ಭಯಾನಕ (ದಾರುಣ). ೨೧ ಬಾರಿ ಕ್ಷತ್ರಿಯರ ನಾಶಮಾಡಿ ಭಯಂಕರನಾಗಿ ಕಾಣಿಸಿಕೊಂಡವನು.

೫೭೫) ದ್ರವಿಣಪ್ರದಃ

ಇಡೀ ಪ್ರಪಂಚದ ಸಂಪತ್ತನ್ನು ಸಮಾಜಕ್ಕೆ ಕೊಡುವವ. ಸಮಾಜದ ಸಂಪತ್ತನ್ನು ತಮ್ಮ ಸ್ವಾರ್ಥಕ್ಕಾಗಿ  ನುಂಗುವ ಭ್ರಷ್ಟರನ್ನು ನಿಗ್ರಹ ಮಾಡಿ ಅದನ್ನು ಸಮಾಜಕ್ಕೆ ಮರಳಿ ಕೊಡುವವ. ಈ ಕಾರಣದಿಂದ ಮೋಸ ವಂಚನೆ ಮಾಡಿ ಗಳಿಸಿದ ಸಂಪತ್ತು ಎಂದೂ ಶಾಶ್ವತವಲ್ಲ. ಅದು ಎಂದೆಂದೂ ಕ್ಷಣಿಕ. ಏಕೆಂದರೆ ಭಗವಂತ ಅಂಥಹ ಭ್ರಷ್ಟರಿಗೆ ದಾರುಣನಾಗಿ ಸಮಾಜಕ್ಕೆ ದ್ರವಿಣಪ್ರದಃ.

೫೭೬) ದಿವಸ್ಪೃಕ್

ಮುಗಿಲನ್ನು ಮುತ್ತಿ ನಿಂತವನು ದಿವಸ್ಪೃಕ್; ಭಗವಂತ ಭೂ ಆಕಾಶದಲ್ಲಿ ತುಂಬಿ ನಿಂತಿದ್ದಾನೆ. ಅವನಿಗೆ ತಿಳಿಯದ ವಿಷಯ ಈ ಪ್ರಪಂಚದಲ್ಲಿಲ್ಲ. ಆತ ಎಲ್ಲವನ್ನೂ ಕಾಣಬಲ್ಲ.

೫೭೭) ಸರ್ವದೃಗ್ ವ್ಯಾಸಃ

ಇಲ್ಲಿ ವ್ಯಾಸ ಎನ್ನುವುದು 'ವಿಸ್ತಾರ, ವಿಭಾಗ' ಎನ್ನುವ ಅರ್ಥವನ್ನೂ ಕೊಡುತ್ತದೆ. ವೇದಗಳನ್ನು ವಿಭಾಗ ಮಾಡಿ ಜ್ಞಾನಿಗಳ ಅರಿವನ್ನು ವಿಸ್ತಾರ ಮಾಡಿದ ಭಗವಂತ  ಸರ್ವದೃಗ್ ವ್ಯಾಸಃ.
ಭಗವಂತ ವೇದವನ್ನು ೧೧೩೭ ಸಂಹಿತೆಯಾಗಿ ವಿಭಾಗ ಮಾಡಿ ಜ್ಞಾನಿಗಳ ಮುಖೇನ ನಮಗೆ ಕೊಟ್ಟಿದ್ದಾನೆ. ಪ್ರಧಾನವಾಗಿ ವೇದಗಳು ನಾಲ್ಕು. ಪದ್ಯ ಸಂಕಲನ ಋಗ್ವೇದ, ಗದ್ಯ ಸಂಕಲನ ಯಜುರ್ವೇದ, ಗಾನಕ್ಕೋಸ್ಕರ ಸಾಮವೇದ, ಅಥರ್ವ ಮುನಿ ಬ್ರಹ್ಮನಿಂದ ಉಪದೇಶ ಪಡೆದು ಬರೆದ ಅಥರ್ವಣ ವೇದ. ಮೂಲಭೂತವಾಗಿ ವೇದಗಳು ಮೂರು ಆದರೆ ಋಷಿ ಸಂಪ್ರದಾಯದಿಂದ ನಾಲ್ಕು ವೇದಗಳ ಸೃಷ್ಟಿಯಾಯಿತು. ಇದನ್ನೇ ವೇದವ್ಯಾಸರು ನಾಲ್ಕು ಜನ ಮುನಿಗಳಿಗೆ (ಬೈಲ, ವೈಶಂಪಾಯನ, ಸುಮಂತು ಮತ್ತು ಜೈಮಿನಿ) ಹೇಳಿದರು. ಈ ನಾಲ್ಕು ಮುನಿಗಳು ಮತ್ತೆ ವೇದವನ್ನು ಅನೇಕ ಶಾಖೆಗಳಾಗಿ(ಸಂಹಿತೆ) ವಿಂಗಡಿಸಿದರು. ಋಗ್ವೇದದಲ್ಲಿ ೨೪ ಸಂಹಿತೆಗಳಿವೆ; ಯಜುರ್ವೇದದಲ್ಲಿ ಪ್ರಮುಖವಾಗಿ ಎರಡು ಶಾಖೆ. ಒಂದು ಶುಕ್ಲ ಯಜುರ್ವೇದ ಹಾಗು ಇನ್ನೊಂದು ಕೃಷ್ಣ ಯಜುರ್ವೇದ. ಶುಕ್ಲ ಯಜುರ್ವೇದದಲ್ಲಿ ೧೫ ಸಂಹಿತೆ, ಹಾಗೂ ಕೃಷ್ಣ ಯಜುರ್ವೇದದಲ್ಲಿ ೮೬ ಸಂಹಿತೆ, ಒಟ್ಟು ೧೦೧ ಸಂಹಿತೆ. ಸಾಮವೇದದಲ್ಲಿ ೧೦೦೦ ಶಾಖೆಗಳು, ಒಂದು ಸಾವಿರ ಬಗೆಯ ಗಾನ ಪದ್ಧತಿ! ಆದರೆ ಇಂದು ಕೇವಲ ಮೂರು (ಜೈಮಿನಿಯ, ರಣಾಯನಿಯ  ಹಾಗು ಕೌತುಮನ) ಗಾನಪದ್ಧತಿ ಮಾತ್ರ ಪ್ರಚಲಿತದಲ್ಲಿದೆ. ಅಥರ್ವ ವೇದದಲ್ಲಿ  ಒಟ್ಟು ೧೨ ಶಾಖೆಗಳು. ಹೀಗೆ ವೇದವನ್ನು  ೧೧೩೭ (೨೪+೧೦೧+೧೨+೧೦೦೦) ಸಂಹಿತೆಗಳಾಗಿ ವಿಂಗಡಿಸಿ ವಿಸ್ತಾರ ಮಾಡಿದ ಭಗವಂತ, ಮನುಷ್ಯ ಸ್ವಭಾವದ ಬುದ್ಧಿ ವೈಚಿತ್ರ್ಯದ ಜ್ಞಾನ ಸಾಗರವನ್ನು ನಮ್ಮ ಮುಂದೆ ತೆರೆದಿಟ್ಟ ಸರ್ವದೃಗ್ ವ್ಯಾಸಃ.

೫೭೭) ವಾಚಸ್ಪತಿಃ

ಭಗವಂತ ವಾಗ್ದೇವತೆಯ ಒಡೆಯ. ಮೂಲತಃ ವಾಗ್ದೇವತೆ ಸಮಸ್ತ ವೇದ ಮಾನಿನಿಯಾದ ಲಕ್ಷ್ಮಿ. ಇಂತಹ ವಾಗ್ದೇವತೆಯ ಒಡೆಯ ಭಗವಂತ ವಾಚಸ್ಪತಿಃ

ಸಮಸ್ತ ವೇದದ ಸಾರವನ್ನು ಭಗವದ್ಗೀತೆಯ ಮುಖೇನ ಉಪದೇಶ ಮಾಡಿದ ಹಾಗು , ಅದನ್ನೇ ಶಬ್ದರೂಪದಲ್ಲಿ ಸೆರೆ ಹಿಡಿದ ವ್ಯಾಸ ರೂಪಿ ಭಗವಂತ ವಾಚಸ್ಪತಿಃ

೫೭೯) ಅಯೋನಿಜಃ

ತಾಯ ಬಸಿರಿನಿಂದ ಹುಟ್ಟದವನು ಅಯೋನಿಜಃ. ಕೃಷ್ಣ ದೇವಕಿಯಿಂದ, ರಾಮ ಕೌಸಲ್ಯಳಿಂದ, ವಾಮನ ಅದಿತಿಯಿಂದ, ವೇದವ್ಯಾಸ ಸತ್ಯವತಿಯಲ್ಲಿ ಹುಟ್ಟಿದರು. ಆದರೆ ವಾಸ್ತವಿಕವಾಗಿ ಭಗವಂತ ಅಯೋನಿಜಃ. ಇದನ್ನು ಸ್ಪಷ್ಟವಾಗಿ ಆತನ ನರಸಿಂಹ, ಕೂರ್ಮ, ಮತ್ಸ್ಯ, ವರಾಹ ಇತ್ಯಾದಿ ಅವತಾರದಲ್ಲಿ ಕಾಣಬಹುದು. ಆತ ತಾಯ ಬಸಿರಿನಿಂದ ಹುಟ್ಟುವುದಿಲ್ಲ, ಆದರೆ ನಮಗೆ ಹಾಗೆ ಕಾಣಿಸಿಕೊಳ್ಳುತ್ತಾನೆ. ಆತನಿಗೆ ಜನನವೆಂಬುದೊಂದಿಲ್ಲ. ಆತ ನಮಗೆ ಕಾಣಿಸಿಕೊಳ್ಳುವುದನ್ನು ನಾವು ಆತನ ಜನನ ಎಂದು ತಿಳಿಯುತ್ತೇವೆ ಅಷ್ಟೇ.

ಮುಂದುವರೆಯುವುದು...

Wednesday, May 10, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -60


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಭಗವಾನ್ ಭಗಹಾನಂದೀ ವನಮಾಲೀ ಹಲಾಯುಧಃ |
ಆದಿತ್ಯೋ ಜ್ಯೋತಿರಾದಿತ್ಯಃ ಸಹಿಷ್ಣುರ್ಗತಿಸತ್ತಮಃ || 60 ||

೫೬೨) ಭಗವಾನ್

ಈ ನಾಮ ಬಹಳ ಪ್ರಸಿದ್ಧವಾದ, ಎಲ್ಲಾ ಭಾಷೆಯಲ್ಲಿ, ಎಲ್ಲಾ ಜಾತಿ-ಧರ್ಮಗಳಲ್ಲಿ ಇರುವ ನಾಮ. ಸಾಮಾನ್ಯವಾಗಿ ಭಗವಂತನಿಗೆ ಬ್ರಹ್ಮ, ಪರಬ್ರಹ್ಮ, ಆತ್ಮ, ಪರಮಾತ್ಮ ಹಾಗೂ ಭಗವಾನ್ - ಈ ನಾಮಗಳು ವಿಶಿಷ್ಟ ನಾಮಗಳು. ಇಲ್ಲಿ 'ಭಗ' ಎಂದರೆ ಭಾಗ್ಯ, ಭಗವಾನ್ ಎಂದರೆ ಭಾಗ್ಯಸ್ವರೂಪ.
ಮಹಾಭಾರತದಲ್ಲಿ ಹೇಳಿದಂತೆ: "ಐಶ್ವರ್ಯಸ್ಯ ಸಮಗ್ರಸ್ಯ ವೀರ್ಯಸ್ಯ ಯಶಸಶ್ರೀಹ ಜ್ಞಾನ ವೈರಾಗ್ಯ ಯೋಗಸ್ಚೈವ ಶನ್ನುಂ ಭಗಃ". ಆರು ಗುಣಗಳನ್ನು 'ಭಗ' ಶಬ್ದ ಹೇಳುತ್ತದೆ. ಐಶ್ವರ್ಯ, ವೀರ್ಯ, ಯಶಸ್ಸು, ಶ್ರೀ, ಜ್ಞಾನ ಮತ್ತು ವೈರಾಗ್ಯ.

೧) ಐಶ್ವರ್ಯ: ಪೂರ್ಣ ಐಶ್ವರ್ಯ ಅಂದರೆ ಸರ್ವ ಸಮರ್ಥ.

೨) ವೀರ್ಯ: ಶತ್ರುಗಳನ್ನು, ದೋಷವನ್ನು ನಿರ್ನಾಮ ಮಾಡುವ ಶಕ್ತಿ.

೩) ಯಶಸ್ಸು: ಯಶಸ್ಸು ಎಂದರೆ ಕೀರ್ತಿ. ಭಗವಂತನ ಸರ್ವ ನಿಯಾಮಕತ್ವವನ್ನು ಎಲ್ಲರೂ ಕೀರ್ತನೆ ಮಾಡುತ್ತಾರೆ, ಅದರಿಂದ ಯಶಸ್ಸು.

೪) ಶ್ರೀ: ಶ್ರೀ ಎಂದರೆ ಸಂಪತ್ತು. ಇಡೀ ಜಗತ್ತಿನ ಸಮಸ್ತ ವಸ್ತುವು ಯಾರಿಗೆ ಸೇರಿದ್ದೋ ಅವನು ನಿಜವಾದ ಶ್ರೀ. ಈ ಬ್ರಹ್ಮಾಂಡವೇ ಅತೀ ದೊಡ್ಡ ಸಂಪತ್ತು.

೫) ಜ್ಞಾನ: ಜ್ಞಾನಪೂರ್ಣ, ಸರ್ವಜ್ಞ.

೬) ವೈರಾಗ್ಯ: ಯಾವುದರ ಬಗ್ಗೆಯೂ 'ನನ್ನದು' ಅನ್ನುವ ಭಾವನೆ ಇಲ್ಲದಿರುವುದು.

ಈ ಆರು ಗುಣಗಳು ಪೂರ್ಣಪ್ರಮಾಣದಲ್ಲಿರುವ, ಸತ್ವ-ರಜ-ತಮೋಗುಣಗಳ ಸ್ಪರ್ಶವೇ ಇಲ್ಲದವ ಭಗವಾನ್.

೫೬೩) ಭಗಹಾ

ದುಷ್ಟರ ಭಾಗ್ಯವನ್ನು ಕಸಿವವನು ಹಾಗು ಪುಣ್ಯಾತ್ಮರಿಗೆ ಭಾಗ್ಯಪ್ರದನಾಗಿರುವ ಭಗವಂತ ಭಗಹಾ.

೫೬೫) ಆನಂದೀ

ಪೂರ್ಣಾನಂದವುಳ್ಳವನು; ಪೂರ್ಣಾನಂದ ಸ್ವರೂಪ ಭಗವಂತ ಆನಂದೀ.

೫೬೬) ವನಮಾಲೀ

ಇದು ವಿಶೇಷವಾಗಿ ಕೃಷ್ಣಾವತಾರಕ್ಕೆ ಸಂಬಂಧಪಟ್ಟ ಹೆಸರು. ಕೃಷ್ಣ ಗೋಪಾಲಕರ ಜೊತೆ ಗೋವುಗಳನ್ನು ಕಾಯುತ್ತಿದ್ದ. ಆಗ ಪ್ರಕೃತಿಯಲ್ಲಿರುವ ಹೂ, ನವಿಲುಗರಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ. ಕುತ್ತಿಗೆಯಿಂದ ಕಾಲಿನಗಂಟಿನವರೆಗೆ ಹೂ ಮಾಲೆಯನ್ನು ಮಾಡಿ ಹಾಕಿಕೊಳ್ಳುತ್ತಿದ್ದ ಭಗವಂತನನ್ನು ವನಮಾಲೀ ಎನ್ನುತ್ತಿದ್ದರು.

ಪ್ರಪಂಚ ಸೃಷ್ಟಿಯ ಮೊದಲ ಹಂತದಲ್ಲಿ ನಾನಾ ಬಗೆಯ ವನಸ್ಪತಿಗಳ ರೂಪದಲ್ಲಿ ಜೀವಸೃಷ್ಟಿ ಮಾಡಿದ ಭಗವಂತ ವನಮಾಲೀ.

೫೬೭) ಹಲಾಯುಧಃ

ನೇಗಿಲನ್ನು ಆಯುಧವಾಗಿ ಬಳಸಿದ ನರರೂಪಿ ಬಲರಾಮನೊಳಗೆ ಆವಿರ್ಭೂತಿಯಾದ ಭಗವಂತ ಹಲಾಯುಧಃ.

೫೬೮) ಆದಿತ್ಯಃ

ಭೂಮಿಯಲ್ಲಿ ಪ್ರತಿಯೊಂದು ಜೀವದೊಳಗೆ ಅಂತರ್ಯಾಮಿಯಾಗಿರುವ ಭಗವಂತನೇ ಸೂರ್ಯ ಮಂಡಲದಲ್ಲಿ ತುಂಬಿ ಸೂರ್ಯ ಕಿರಣಗಳ ಮೂಲಕ ಶಕ್ತಿಪಾತ ಮಾಡುತ್ತಿದ್ದಾನೆ. ಆದಿತ್ಯನಲ್ಲಿ ಸನ್ನಿಹಿತನಾಗಿರುವ ಭಗವಂತ ಆದಿತ್ಯಃ.

೫೬೯) ಜ್ಯೋತಿರಾದಿತ್ಯಃ.

ಜಗತ್ತಿನಲ್ಲಿ ಯಾವ ಯಾವ ಬೆಳಕುಗಳಿವೆ ಅದರ ಮೂಲ ಭಗವಂತ. ಗೀತೆಯಲ್ಲಿ ಹೇಳಿದಂತೆ:

ಯದಾದಿತ್ಯಗತಂ ತೇಜೋ ಜಗದ್ ಭಾಸಯತೇ s ಖಿಲಮ್ |
ಯಚ್ಚಂದ್ರಮಸಿ  ಯಚ್ಚಾಗ್ನೋ ತತ್ ತೇಜೋ ವಿದ್ಧಿ ಮಾಮಕಮ್ ||

ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ ಕೂಡ, ಅದು ನನ್ನ ಬೆಳಕೆಂದು ತಿಳಿ".  ಸಮಸ್ತ ಬೆಳಕಿನ ಪುಂಜಗಳನ್ನು ಬೆಳಗಿಸುವ ಮೂಲ ಜ್ಯೋತಿ, ಬೆಳಕಿನ ಮೂಲ ಕಾರಣಗಳಾದ ಸೂರ್ಯಾದಿಗಳಲ್ಲಿ ತುಂಬಿದ ಜ್ಞಾನ ಮೂರ್ತಿ ಭಗವಂತ ಜ್ಯೋತಿರಾದಿತ್ಯಃ

೫೭೦) ಸಹಿಷ್ಣುಃ

ಭಗವಂತ ಅಪರಾಧಗಳನ್ನು ಸಹಿಸುವ ಕರುಣಾಮೂರ್ತಿ. ನಾವು ಕೆಲವೊಮ್ಮೆ ದೇವರನ್ನು ತಪ್ಪಾಗಿ ತಿಳಿಯುತ್ತೇವೆ, ಬಯ್ಯುತ್ತೇವೆ, ತಪ್ಪು ಉಪಾಸನೆ ಮಾಡುತ್ತೇವೆ.ಆದರೆ ಆತ ಭಕ್ತರ ಸರ್ವಾಪರಾಧವನ್ನು ಮನ್ನಿಸುವ ಮಹಾ ಸಹಿಷ್ಣು, ಯಾರಾದರೂ ಅನನ್ಯ ಭಕ್ತಿಯಿಂದ ಕರೆದಾಗ ಅವರ ಸರ್ವಾಪರಾಧವನ್ನು ಮನ್ನಿಸುವ ಕರುಣಾಮೂರ್ತಿ. ಆದರೆ ತಪ್ಪುಮಾಡಿದವರ ತಪ್ಪನ್ನು ಭಗವಂತ ಕ್ಷಮಿಸುವುದಿಲ್ಲ. ಏಕೆಂದರೆ ಕ್ಷಮೆ ನಮ್ಮನ್ನು ಕೆಡಿಸಬಹುದು ಎನ್ನುವ ಕಾರುಣ್ಯ ಭಗವಂತನದ್ದು.

೫೭೧) ಗತಿಸತ್ತಮಃ

ನಮ್ಮ ಜೀವದ ಗತಿಯನ್ನರಿತ, ಎಲ್ಲರಿಗಿಂತ ಎತ್ತರದಲ್ಲಿರುವ ಕಾರುಣ್ಯಮೂರ್ತಿ.'ಗತಿ' ಎಂದರೆ ನಾವು ಹೋಗಿ ಸೇರಬೇಕಾದ ತಾಣ. ಗಮ್ಯವಾದ ಸ್ಥಾನದಲ್ಲಿ ಶ್ರೇಷ್ಠವಾದ ಹಿರಿಯ ತಾಣ ಭಗವಂತ ಗತಿಸತ್ತಮಃ.

ಮುಂದುವರೆಯುವುದು...

Tuesday, May 9, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -59


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ವೇದಾಃ ಸ್ವಂಗೋsಜಿತಃ ಕೃಷ್ಣೋ ದೃಢಃ ಸಂಕರ್ಷಣೋsಚ್ಯುತಃ |
ವರುಣೋ ವಾರುಣೋ ವೃಕ್ಷಃ ಪುಷ್ಕರಾಕ್ಷೋ ಮಹಾಮನಃ || 59 ||

೫೫೧) ವೇಧಾಃ

'ವಿದತ್ತೇ ಇತೀ ವೇದಾಃ'; ವಿಶಿಷ್ಟವಾದ ಧಾರಣೆ ಹಾಗೂ ಪೋಷಣೆಯನ್ನು ಜಗತ್ತಿಗೆ ಕೊಡುವವನು, ಜಗತ್ತನ್ನು ಹೊರಗಿನಿಂದ ಧಾರಣೆ ಮಾಡಿದ, ಅಂತರಂಗದೊಳಗಿದ್ದು ಅದನ್ನು ಪೋಷಣೆ ಮಾಡುವ ಜಗತ್ತಿನ ಜನಕ.

೫೫೨) ಸ್ವಾಂಗಃ

ನಮ್ಮ ದೇಹ ಪಂಚಭೂತಗಳಿಂದಾದದ್ದು, ಆದರೆ ಭಗವಂತ ಜ್ಞಾನಾನಂದ ಸ್ವರೂಪಭೂತವಾದ ಅಂಗಾಂಗಗಳುಳ್ಳವನು. ಈ ಕಾರಣದಿಂದ ನಮ್ಮ ಪಾಂಚಭೌತಿಕ ಇಂದ್ರಿಯ ಆತನನ್ನು ಗ್ರಹಿಸಲಾರದು. ಇಂತಹ ಸ್ವರೂಪಭೂತವಾದ ಅಂಗಾಂಗಗಳುಳ್ಳ ಭಗವಂತ ಸ್ವಾಂಗಃ.

೫೫೩) ಅಜಿತಃ

ಭಗವಂತನನ್ನು ಯಾರೂ ಸೋಲಿಸಲಾರರು ಅವನು ಅಜಿತಃ,  ಆದರೆ ಭಕ್ತ ಪರಾಧೀನನಾದ(ಅಹಂ ಭಕ್ತಪರಾಧೀನಃ) ಭಗವಂತ ಕೆಲವೊಮ್ಮೆ ಸೋತಂತೆ ತೋರಿಸಿಕೊಳ್ಳುತ್ತಾನೆ.

೫೫೪) ಕೃಷ್ಣಃ

'ಕರ್ಷತಿ ಇತೀ ಕೃಷ್ಣಃ' ಎಲ್ಲರನ್ನೂ ತನ್ನೆಡೆಗೆ ಸೆಳೆಯುವ ಪಾದರಸ,  ಸಂಸಾರದಿಂದ ಎತ್ತರಕ್ಕೆ ಕೊಂಡೊಯ್ಯುವ ಕರ್ಷಣಶಕ್ತಿಯಾದ ಸೌಂದರ್ಯ ಮೂರ್ತಿ ಭಗವಂತ ಕೃಷ್ಣಃ.
ಕೃಷ್ಣ ಎನ್ನುವುದು ಕೃಷಿ+ಣ ಎನ್ನುವ ಎರಡು ಶಬ್ದಗಳ ಸಂಯುಕ್ತ ರೂಪ . ಕೃಷಿ ಎಂದರೆ ಭೂಮಿ, ಕೃಷಿ ಎಂದರೆ ನಿರ್ದೊಶಿತ್ವ. ಭಗವಂತ ದೋಷರಹಿತವಾದ, ಪರಿಶುದ್ಧವಾದ ಅಸ್ಥಿತ್ವವುಳ್ಳ ಭಲಾನಂದಸ್ವರೂಪ.

೫೫೫) ದೃಢಃ

ಭಗವಂತನ ವ್ಯಕ್ತಿತ್ವವನ್ನು ಯಾರೂ ಬದಲಿಸಲಾರರು, ಆತ ದೃಢ. ಅನಾದಿ ಅನಂತಕಾಲದಲ್ಲಿ ದೃಢವಾದ, ಏಕರೂಪದ, ಎಂದೂ ಬದಲಾಗದ, ಚಪಲ-ಚಾಂಚಲ್ಯವಿಲ್ಲದ, ನಿಶ್ಚಿತವಾದ  ವ್ಯಕ್ತಿತ್ವವುಳ್ಳ ಭಗವಂತ ದೃಢ.

೫೫೬) ಸಂಕರ್ಷಣಃ

ಸಂಕರ್ಷಣ ಎಂದರೆ ಶೇಷ. ಶೇಷನಲ್ಲಿ ಅಂತರ್ಗತನಾಗಿರುವ ಭಗವಂತ, ಸರ್ವ ಗ್ರಹ-ಗೊಲಗಳನ್ನು ಸೆಳೆದು ಹಿಡಿದಿಟ್ಟ ವಿಶ್ವಧಾರಕ ಶಕ್ತಿ.

೫೫೭) ಅಚ್ಯುತಃ

ಚ್ಯುತಿ ಇಲ್ಲದೆ, ಅಖಂಡವಾಗಿ ಸೃಷ್ಟಿ-ಸ್ಥಿತಿ-ಸಂಹಾರ ಕಾಲದಲ್ಲಿ ಅನಂತನಾಗಿ ಇರುವ ಭಗವಂತ ಅಚ್ಯುತಃ. ಆತನಿಗೆ ಎಂದೂ ಅಳಿವಿಲ್ಲ.

೫೫೮) ವರುಣಃ

ಮಿತ್ರ ಹಗಲಿನ ಸೂರ್ಯನಾದರೆ ವರುಣ ರಾತ್ರಿಯ ಸೂರ್ಯ, ಇದನ್ನೇ  "ಶಂ ನೋ ಮಿತ್ರಃ ಶಂ ವರುಣಃ" ಎಂದಿದ್ದಾರೆ. ಮಿತ್ರನಾಗಿ , ವರುಣನಾಗಿ ಜಗತ್ತಿನ ಹಗಲು ರಾತ್ರಿಯನ್ನು ನಿಯಂತ್ರಿಸುವ ಭಗವಂತ 'ವರುಣಃ' ಜೀವರನ್ನು ಸಂಸಾರವೆಂಬ ಮಾಯೆಯ ಆವರಣದಲ್ಲಿಡುವ ಹಿರಿಯ ಆನಂದ ಸ್ವರೂಪ ಭಗವಂತ ವರುಣಃ.

೫೫೯) ವಾರುಣಃ

ನೀರಿನ, ಸಮುದ್ರದ, ಪಶ್ಚಿಮದಿಕ್ಕಿನ ದೇವತೆ ವರುಣ. ಇಂತಹ ವರುಣನಲ್ಲಿದ್ದು, ಸಮಸ್ಥ ಕಾರ್ಯವನ್ನು ನಿರ್ವಹಿಸುವ, ಶತ್ರುಗಳನ್ನು ತಡೆಯಬಲ್ಲ ಭಲದ ಮೂರ್ತಿ, ಕ್ಷೀರಸಾಗರವಾಸಿ ಭಗವಂತ ವಾರುಣಃ.

೫೬೦) ವೃಕ್ಷಃ

ವೃಕ್ಷ ಎಂದರೆ ಮರ, ಯಾವುದನ್ನು ಕಡಿಯುತ್ತೇವೋ(ಛೇದನೆ) ಅದು ವೃಕ್ಷ. ಸಂಸಾರವೆಂಬ ಮಹಾ ವೃಕ್ಷವನ್ನು ಕಡಿದು ಮುಕ್ತಿ ಕೊಡುವ ನಿರ್ವೀಕಾರ ಹಾಗು ನಿಶ್ಚಲ ಮೂರ್ತಿ ಭಗವಂತ ವೃಕ್ಷಃ.

೫೬೧) ಪುಷ್ಕರಾಕ್ಷಃ

ಪುಷ್ಕರಾಕ್ಷಃ ಎಂದರೆ ಪುಷ್ಕರದಂತೆ(ತಾವರೆಯಂತೆ) ಅಕ್ಷ ಉಳ್ಳವ ಅಥವಾ ತಾವರೆಗಣ್ಣಿನವ. ದೇಹದಲ್ಲಿ ಕಣ್ಣು ಆಕರ್ಷಣೆಯ ಕೇಂದ್ರ. ಭಗವಂತ ಅಗಲವಾದ ಅರಳುಗಣ್ಣಿನ ಸೌಂದರ್ಯಮೂರ್ತಿ. ಕೆಂದಾವರೆ ಬಣ್ಣ ನಸುಗೆಂಪು. ಆರೋಗ್ಯವಾಗಿರುವ ವ್ಯಕ್ತಿಯ ಕಣ್ಣು ಹಾಗಿರುತ್ತದೆ. ರಕ್ತ ಕೆಂಪಾದ ಅಥವಾ ಬಿಳಿಚಾದ ಕಣ್ಣು ಆರೋಗ್ಯದ ಲಕ್ಷಣವಲ್ಲ. ನಸುಗೆಂಪು ವಾತ್ಸಲ್ಯವನ್ನು ಬಿಂಬಿಸುತ್ತದೆ. ಭಕ್ತವಾತ್ಸಲ್ಯವನ್ನು ಬಿಂಬಿಸುವ ಕಣ್ಣುಗಳುಳ್ಳ ವಾತ್ಸಲ್ಯಮೂರ್ತಿ ಭಗವಂತ ಪುಷ್ಕರಾಕ್ಷಃ.

೫೬೨) ಮಹಾಮನಾಃ

ಮನಸ್ಸು ಎಂದರೆ 'ಮನನ'. ಒಂದು ವಸ್ತುವನ್ನು ತಳಸ್ಪರ್ಶಿಯಾಗಿ ತಿಳಿಯುವುದು 'ಅರಿವು'. ಇಂತಹ ಮಹತ್ತರವಾದ ಮನನ ಉಳ್ಳವನು ಮಹಾಮನಃ. ಭಕ್ತರು ಬಯಸಿದ್ದೆಲ್ಲವನ್ನೂ ಕೊಡುವ ಮನೋವೈಶಾಲ್ಯವುಳ್ಳ ಸರ್ವಜ್ಞ ಭಗವಂತ ಮಹಾಹಲಾಯುಧಃ.

ಮುಂದುವರೆಯುವುದು...

Monday, May 8, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -58


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಮಹಾವರಾಹೋ ಗೋವಿಂದಃ ಸುಷೇಣಃ ಕನಕಾಂಗದೀ |
ಗುಹ್ಯೋ ಗಭೀರೋ ಗಹನೋ ಗುಪ್ತಶ್ಚಕ್ರಗದಾದರಃ  || 58 ||

೫೪೨) ಮಹಾವರಾಹಃ

ವರಾಹ ಅಂದರೆ ನಮಗೆ ಗೊತ್ತಿರುವ ಅರ್ಥ 'ಹಂದಿ'; ಆದರೆ ಪ್ರಾಚೀನ ಸಂಸ್ಕೃತದಲ್ಲಿ ಬೇರೆ ಅರ್ಥವಿದೆ. ಶ್ರೇಷ್ಠನಾದವ, ಮೋಡ ಎನ್ನುವ ಅರ್ಥ ವೇದಕಾಲದಲ್ಲಿತ್ತು, ಆದರೆ ಈಗ ಪ್ರಚಲಿತದಲ್ಲಿಲ್ಲ. ವರಾಹ ಎಂದರೆ ಎಲ್ಲರೂ ವರ್ಣನೆ ಮಾಡತಕ್ಕ ಎಲ್ಲರಿಗಿಂತ ಎತ್ತರದಲ್ಲಿರುವ ವಸ್ತು, ಎಲ್ಲರೂ ಆಶ್ರಯಿಸುವ ವಸ್ತು. ಅದಕ್ಕಾಗಿ  ಎಲ್ಲರಿಗೂ ಬೇಕಾದ ಮಳೆಯನ್ನು ಕೊಡುವ ಎತ್ತರದಲ್ಲಿರುವ ಮೋಡವನ್ನು ಸಹ ವರಾಹ ಎಂದು ಕರೆಯುತ್ತಾರೆ. ಆದರೆ ನಿಜವಾಗಿ ಎತ್ತರದಲ್ಲಿರುವ ವಸ್ತು ಮೋಡವಲ್ಲ ಭಗವಂತ. ಮಹಾವರಾಹ ಎಂದರೆ ಎಲ್ಲಕ್ಕಿಂತಲೂ ಶ್ರೇಷ್ಠ ಹಾಗು ಎತ್ತರದಲ್ಲಿರುವ ಭಗವಂತ.

ಸಂಸ್ಕೃತದ ಮಂತ್ರಶಾಸ್ತ್ರದಲ್ಲಿ 'ವರಾಹಮಂತ್ರಕ್ಕೆ'  ಬಹಳ ಮಹತ್ವವಿದೆ. ಸಾಮಾನ್ಯವಾಗಿ ವರಾಹ ಮಂತ್ರವನ್ನು ಭೂ ಪ್ರಾಪ್ತಿಗಾಗಿ ಉಪಾಸನೆ ಮಾಡುತ್ತಾರೆ. ಆದರೆ ವಾಸ್ತವಿಕವಾಗಿ ನಾವು ಈ ಮಂತ್ರದಿಂದ ಪಡೆಯುವುದು ಭೂಮಿಯಲ್ಲ 'ಭೂ-ಪತಿತ್ವ', ಅಂದರೆ ಪೂರ್ಣತೆಯನ್ನು ಪಡೆಯುವುದು. ನಮ್ಮ ವ್ಯಕ್ತಿತ್ವದ ಪೂರ್ಣ ವಿಕಾಸವೇ ಭೂ-ಪತಿತ್ವ. ಇಂತಹ ಸರ್ವ ಶ್ರೇಷ್ಠವಾದ ವರಾಹ ಮಂತ್ರದಲ್ಲಿ ಸನ್ನಿಹಿತನಾಗಿರುವ ಭಗವಂತ ಮಹಾವರಾಹಃ.

೫೪೩) ಗೋವಿಂದಃ

ಈ ಹಿಂದೆ ವಿಶ್ಲೇಷಿಸಿದಂತೆ ಗೋವು ಎನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಭೂಮಿ, ನೀರು, ಕೂದಲು, ಕಿರಣ, ವೇದ, ಪ್ರಕಾಶ, ಇತ್ಯಾದಿ. ಗೋವಿಂದಃ ಎಂದರೆ ವೇದವನ್ನು ರಕ್ಷಿಸುವುದಕ್ಕೊಸ್ಕರ ಪ್ರಳಯ ಜಲದಲ್ಲಿ ಮತ್ಸ್ಯನಾಗಿ ಸಂಚರಿಸಿದವ; ಭೂಮಿ ಹಿರಣ್ಯಾಕ್ಷನಿಂದ ತನ್ನ ಕಕ್ಷೆಯನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾಗ ವರಾಹನಾಗಿ ರಕ್ಷಣೆ ಮಾಡಿದವ ಗೋವಿಂದಃ; ಗೋವುಗಳ ಜೊತೆಗೆ ಗೋಪಾಲಕನಾಗಿ ಆಟವಾಡಿದ ಭಗವಂತ, ವೇದವ್ಯಾಸನಾಗಿ ವೇದಗಳನ್ನು ಕೊಟ್ಟ ವೇದವೇದ್ಯ. ಹೀಗೆ ಗೋವಿಂದಃ ಎನ್ನುವ ನಾಮಕ್ಕೆ ಅನೇಕ ಅರ್ಥಗಳಿವೆ.

೫೪೫) ಸುಷೇಣಃ

ಸು+ಸೇನಾ; ಸೇನಾ ಎಂದರೆ  ಸೇನೆ. ಸಮರ್ಥವಾದ ಸೇನೆ ಉಳ್ಳವ ಸುಷೇಣಃ. ಸು ಅಂದರೆ ಸುಗ್ರೀವ, ಸಮರ್ಥವಾದ ಕಪಿ ಸೇನೆಯೊಂದಿಗೆ ಲಂಕೆಗೆ ಹೋದವ ಸುಷೇಣಃ. ಜಗತ್ತಿನಲ್ಲಿರುವ ಸೇನೆಗಳಿಗೆ ಧರ್ಮದ ಪರ  ಗೆಲ್ಲುವ ಶಕ್ತಿಯನ್ನು ಕೊಟ್ಟ ಭಗವಂತ ಸುಷೇಣಃ.

೫೪೫) ಕನಕಾಂಗದೀ

'ಅಂಗದ' ಎಂದರೆ 'ತೊಳ್ಭಂದಿ', ತೋಳಿನಲ್ಲಿ ತೊಡುವ ಬಳೆ, ಗಂಡಸರು ಹಾಗೂ ಹೆಂಗಸರು ತೊಡುವ ಆಭರಣ. ಚಿನ್ನದ ತೊಳ್ಭಂದಿ ತೊಟ್ಟ ಭಗವಂತ ಕನಕಾಂಗದೀ. ಇದು ಮೇಲ್ನೋಟಕ್ಕೆ ಕಾಣುವ ಅರ್ಥ. ಹಿಂದಿನವರು ತಮ್ಮ ದೇಹವನ್ನು ಭಗವಂತನ ಪ್ರತಿಮೆ, ಇದರೊಳಗೆ ಬಿಂಬರೂಪಿ ಭಗವಂತನಿದ್ದಾನೆ ಎನ್ನುವ ಭಾವನೆಯಿಂದ ಆಭರಣಗಳನ್ನು ಧರಿಸುತ್ತಿದ್ದರು. ಚಿನ್ನದ ವರ್ಣದ ಮೈಯವನು, ಉದಿಸುವ ಸೂರ್ಯನ ಬಣ್ಣದವನು, ಭಕ್ತರ ದುರಿತವನ್ನು ನಾಶಮಾಡುವವನು ಆದ ಭಗವಂತ ಕನಕಾಂಗದೀ. 'ಕನಕ' ಅಂದರೆ 'ಅಂತರಂಗದ ಆನಂದ'. ಜ್ಞಾನಾನಂದಮಯವಾದ ಶರೀರವುಳ್ಳ ಭಗವಂತ ಕನಕಾಂಗದೀ.

೫೪೬) ಗುಹ್ಯಃ

ಹೃದಯ ಗುಹೆಯೊಳಗೆ ಗುಟ್ಟಾಗಿ ನೆಲೆಸಿರುವವನು! ; ಇದರಿಂದಾಗಿ ಆತ ಹೊರಪ್ರಪಂಚದಲ್ಲಿ ಎಷ್ಟೇ ಹುಡುಕಿದರೂ ಸಿಗಲಾರ; ಆದರೆ ಒಳಪ್ರಪಂಚದಲ್ಲಿ ಆತನನ್ನು ಹುಡುಕುವ ಪ್ರಯತ್ನ ಮಾಡಿದರೆ ಹೃದಯ ಗುಹೆಯಲ್ಲಿ ನೆಲೆಸಿದ ಭಗವಂತನ ಸಾಕ್ಷಾತ್ಕಾರವಾಗುತ್ತದೆ. ಉಪನಿಷತ್ತುಗಳನ್ನು 'ಗುಹ್ಯ' ಎನ್ನುತ್ತಾರೆ. ವೇದೊಪನಿಷತ್ತುಗಳಿಂದ ವೇದ್ಯನಾಗಿ ಹೃದಯಗುಹೆಯಲ್ಲಿ ನಿಗೂಢವಾಗಿರುವ ಭಗವಂತ ಗುಹ್ಯಃ.

೫೪೭) ಗಭೀರಃ

ಎಷ್ಟೇ ಆಳಕ್ಕಿಳಿದರೂ ತುದಿ ಸಿಗದ, ಅಳೆಯಲಾಗದ ಆಳದವನು ಗಭೀರಃ. ಎಷ್ಟೇ ಚಿಂತನೆ ಮಾಡಿದರೂ ಆಳ ತಿಳಿಯಲು ಅಸಾಧ್ಯವಾದ, ಅಳತೆಗೆ ಸಿಗದಷ್ಟು ಅಗಾಧವಾದ, ಸೀಮೆ ಇಲ್ಲದ ಭಗವಂತ ಗಭೀರಃ.

೫೪೮) ಗಹನಃ

ಭಗವಂತನ ಹುಡುಕಾಟ 'ಕಣ್ಣು ಕಟ್ಟಿ ಕಾಡಿನಲ್ಲಿ ಬಿಟ್ಟಂತೆ'.  ಆತ ತಿಳಿಯಲಾಗದ ತಿಟ್ಟಿನವನು, ಆತನನ್ನು ಏನು ಎತ್ತ ಎಂದು ಪತ್ತೆ ಹಚ್ಚುವುದು ಅಸಾಧ್ಯ. ಹೀಗೆ ಎಷ್ಟೇ ಅಲೆದಾಡಿದರೂ ಸಿಗದ ಭಗವಂತ ಗಹನಃ.

೫೪೯) ಗುಪ್ತಃ

ಭಗವಂತ ಎಂದೂ ತನ್ನನ್ನು ತಾನು ತೆರೆದು ತೋರಿಸುವುದಿಲ್ಲ ಆತ ಗುಪ್ತಃ. ಮೊದಲು ನಾವು ಆತನ ಮುಂದೆ ಬತ್ತಲಾಗಬೇಕು, ಆಗ ಆತ ನಮ್ಮ ಮುಂದೆ ತೆರೆದುಕೊಳ್ಳುತ್ತಾನೆ. ಯಾರು ತಮ್ಮನ್ನು ತಾವು ಆತನಲ್ಲಿ ಅರ್ಪಿಸಿಕೊಳ್ಳುತ್ತಾರೋ ಅವರಿಗೆ ಭಗವಂತ ತೆರೆದುಕೊಳ್ಳುತ್ತಾನೆ.

೫೫೦) ಚಕ್ರಗದಾಧರಃ

ಭಗವಂತ ಚಕ್ರ ಗದೆಗಳನ್ನು ತೊಟ್ಟವನು. ಚಕ್ರ-ದುರ್ಗಾರೂಪ, ಗದೆ ವಾಯು ರೂಪ. ಶ್ರಿತತ್ವ ಹಾಗೂ ವಾಯು ತತ್ವ ಸದಾ ಭಗವಂತನೊಂದಿಗಿರುತ್ತಾರೆ. ಚಕ್ರ ಸಂಹಾರ ಶಕ್ತಿಯ ಪ್ರತಿರೂಪವಾದರೆ, ಗದಾ ಕಾಮನಿಗ್ರಹದ ಸಂಕೇತ. ಚಕ್ರದಿಂದ ಧರ್ಮದ ನಿರಂತರ ಚಲನೆ, ಹಾಗೂ ಮನುಷ್ಯನ ಸ್ವಚ್ಛಂದತೆಗೆ ಕಡಿವಾಣವಾಗಿದ್ದು, ಧರ್ಮ ಸಂರಕ್ಷಣೆ ಮಾಡುವ ಭಗವಂತ ಚಕ್ರಗದಾಧರಃ.

ಮುಂದುವರೆಯುವುದು...

Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 1


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

|| ಓಂ ನಮೋ ಭಗವತೇ ವಾಸುದೇವಾಯ ||

ಓಂ ವಿಶ್ವಂ ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ  |
ಭೂತಕೃದ್ಭೂತಭೃದ್ಭಾವೋ ಭೂತಾತ್ಮಾ ಭೂತಭಾವನಃ    ||1||

1) ವಿಶ್ವಮ್

ವಿಷ್ಣು ಸಹಸ್ರನಾಮದ ಮೊದಲ ನಾಮ ವಿಶ್ವಂ. ಈ ಹಿಂದೆ ಹೇಳಿದಂತೆ ವಿಷ್ಣು ಸಹಸ್ರನಾಮ ಸರ್ವ ವೇದಗಳ ಸಾರ. ಇಲ್ಲಿ 'ವಿ ' ಎಂದರೆ ಪಕ್ಷಿ ಅನ್ನುವ ಅರ್ಥವನ್ನೂ, ಶ್ವ ಎಂದರೆ ಚಲಿಸುವವನು  ಎನ್ನುವ  ಅರ್ಥವನ್ನು ಕೊಡುತ್ತದೆ .  ಆದ್ದರಿಂದ ವೇದಗಳ ಅಭಿಮಾನಿ ದೇವತೆಯಾದ ಗರುಡನನ್ನು ತನ್ನ ವಾಹನವಾಗಿರಿಸಿಕೊಂಡಿರುವ  ಭಗವಂತ ವಿಶ್ವ .

ಮೇಲೆ ಹೇಳಿದ ಅರ್ಥವಲ್ಲದೆ ಇನ್ನೂ ಹತ್ತು ಹಲವು ಅರ್ಥಗಳನ್ನು ವಿಶ್ವ ಅನ್ನುವ ನಾಮದಲ್ಲಿ ನಾವು ನೋಡಬಹುದು. ಚತುರ್ಮುಖ ಬ್ರಹ್ಮನನ್ನು ವಿಶ್ವ ಎಂದು ಕರೆಯುತ್ತಾರೆ. ಸೃಷ್ಟಿಕರ್ತನಾದ ಬ್ರಹ್ಮನನ್ನು ತನ್ನ ನಾಭಿಯಲ್ಲಿ  ಧರಿಸಿರುವ ಭಗವಂತ, ಆತನ ಮೂಲಕ ಈ ಸೃಷ್ಟಿಗೆ ಕಾರಣಕರ್ತನಾಗಿದ್ದಾನೆ .  ಆದ್ದರಿಂದ  ಆತ  ವಿಶ್ವಂ.

ಆಂಜನೇಯ ರೂಪಿ ಮುಖ್ಯಪ್ರಾಣನನ್ನು  ಕೂಡ ವಿಶ್ವ ಎಂದು ಕರೆಯುತ್ತಾರೆ. ನಮ್ಮ ದೇಹಕ್ಕೆ ಚಲನೆಯನ್ನು   ಕೊಡುವಂತಹ  ಪ್ರಾಣಶಕ್ತಿಯಾದ  ಮುಖ್ಯಪ್ರಾಣನಲ್ಲಿ  ತುಂಬಿದ್ದು, ನಮ್ಮ ದೇಹದಲ್ಲಿ ಬಿಂಬರೂಪದಲ್ಲಿ ಪ್ರವೇಶಿಸಿ (ವಿಶತಿ),  ಅಂತರ್ಯಾಮಿಯಾಗಿ  ದೇಹದ  ಒಳಗೂ ಹೊರಗೂ ತುಂಬಿರುವ ಪರಿಪೂರ್ಣ ಜ್ಞಾನಾನಂದಮಯನಾದ  ಭಗವಂತ  ವಿಶ್ವಂ.

2) ವಿಷ್ಣುಃ

ಸಾಮಾನ್ಯವಾಗಿ ವಿಷ್ಣು ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ ಅದರ ಸಂಸ್ಕೃತ ಪದ ವಿಷ್ಣು. ವಿಷ್ಣು ಎಂದರೆ ಸರ್ವಶಬ್ದವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ. ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತಹ ಅರ್ಥ.

ಇನ್ನು ಈ ಪದವನ್ನು  ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು ಎಂದರೆ-ವಿಶಿಷ್ಟವಾದ ಜ್ಞಾನ (ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ . ಎಲ್ಲರನ್ನು ರಕ್ಷಿಸುವ ಬಲ ಇರುವ (ಣ) ಸರ್ವಶಕ್ತ ಭಗವಂತ ವಿಷ್ಣು.

3) ವಷಟ್ಕಾರಃ

ಭಗವಂತನನ್ನು ವಷಟ್ಕಾರ ಎಂದು ಕರೆಯುತ್ತಾರೆ ಎನ್ನುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ  ವೈದಿಕ ಸಂಪ್ರದಾಯವಿರುವ ಪ್ರತಿಯೊಂದು ಮನೆಗಳಲ್ಲಿ ಅಗ್ನಿಹೋತ್ರ ಮಾಡುವುದು ನಿತ್ಯ ಕರ್ಮವಾಗಿತ್ತು. ಅಗ್ನಿಹೋತ್ರದಲ್ಲಿ ಭಗವಂತನಿಗೆ ಐದು ಮಂತ್ರಗಳಿಂದ (ಯಜ್ಞ ನಾಮಕ , ಯಜ್ಞ ಪುರುಷ , ಯಜ್ಞೇಶ್ವರ , ಯಜ್ಞ ಭಾವನ , ಯಜ್ಞ ಭೋಕ್ತ ) ಆಹುತಿಯನ್ನು ಕೊಡುತ್ತಿದ್ದರು. ಈ ಮಂತ್ರದಲ್ಲಿ ಬರುವ ಐದನೇ ಹೆಸರು ಭಗವಂತನ ವಷಟ್ಕಾರ ಅನ್ನುವ ಹೆಸರು.

ಏಕೆ ಅವನು ವಷಟ್ಕಾರ?  ತಾನು ಇಚ್ಚಿಸಿದಂತೆ ಜಗತ್ತನ್ನು ಸೃಷ್ಟಿ ಮಾಡಿ  ಈ ಕೆಳಗಿನ  ಆರು ಮುಖದಲ್ಲಿ ಜಗತ್ತಿನಾದ್ಯಂತ  ತುಂಬಿರುವವನು ವಷಟ್ಕಾರ.
೧. ಜ್ಞಾನ- ಒಂದು ವಸ್ತುವನ್ನು ಸೃಷ್ಟಿ ಮಾಡುವ ಸರ್ವಜ್ಞ  ಜ್ಞಾನಶಕ್ತಿ ಇರುವವನು.
೨. ಶಕ್ತಿ- ಕರ್ತೃತ್ವ ಶಕ್ತಿ ಉಳ್ಳವನು.
೩. ಬಲ-ರಕ್ಷಣೆ ಮಾಡುವ ತಾಕತ್ತು ( ಧಾರಣ ಶಕ್ತಿ ) ಇರುವವನು
೪. ಐಶ್ವರ್ಯ- ಒಡೆತನ
೫. ವೀರ್ಯ- ಪರಾಕ್ರಮ-ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಶಕ್ತಿ ಉಳ್ಳವನು
೬. ತೇಜಸ್ಸು - ಜಗತ್ತನ್ನು ಬೆಳಗಿಸುವ ಬೆಳಕು.

ಈ ಮೇಲಿನ ಆರು ಗುಣಗಳಿಂದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾದ ಪರಬ್ರಹ್ಮ -ವಷಟ್ಕಾರ.  

4) ಭೂತಭವ್ಯಭವತ್ಪ್ರಭುಃ 

ಭಗವಂತ ಎಲ್ಲಾ ಕಾಲದಲ್ಲೂ ಈ ಲೋಕವನ್ನು ರಕ್ಷಿಸುತ್ತಿರುತ್ತಾನೆ.   ಹಿಂದೆ ಅನಂತವಾಗಿ ಇದ್ದದ್ದು (ಭೂತಕಾಲದಲ್ಲಿ),  ಮುಂದೆ ಬರುವ ಅನಂತ ಭವಿಷ್ಯತ್ ಕಾಲ ಹಾಗೂ ವರ್ತಮಾನ ಕಾಲದಲ್ಲಿ ಈ ಲೋಕವನ್ನು ರಕ್ಷಿಸುವವನು. ಈ ನಾಮವನ್ನು  ನಾವು ಒಡೆದು ನೋಡಿದಾಗ, ಭೂತ+ಭವಿ+ಭವಂತಿ+ಪ್ರಭು ಎನ್ನುವ ನಾಲ್ಕು ಪದಗಳನ್ನು  ನೋಡಬಹುದು. ಭೂತಿಯನ್ನು ಪಡೆದವರು ಭೂತಗಳು. ಅಂದರೆ ಮುಕ್ತಿಗೆ ಯೋಗ್ಯರಾದ ಸಾತ್ವಿಕರು, ಭವಿಗಳು ಎಂದರೆ  ಸಂಸಾರಿಗಳು ಅಥವಾ ರಾಜಸರು, ಭವಂತಿ ಎಂದರೆ ಜೀವನದಲ್ಲಿ  ಎತ್ತರಕ್ಕೆ ಏರದ ತಾಮಸರು. ಆದ್ದರಿಂದ ಭೂತಭವ್ಯಭವತ್ಪ್ರಭುಃ ಎಂದರೆ ಸಾತ್ವಿಕರಿಗೂ , ರಾಜಸರಿಗೂ  ಹಾಗೂ ತಾಮಸರಿಗೂ ಪ್ರಭು ಎಂದರ್ಥ.

ಈ ರೀತಿ ಹಿಂದೆ ಇದ್ದವನು,  ಈಗಲೂ ಇರುವವನು, ಮುಂದೆ ಎಂದೆಂದೂ ಎಲ್ಲರ ಪ್ರಭುವಾಗಿ ಸರ್ವ ಜೀವ ರಕ್ಷಕನಾಗಿರುವ ಭಗವಂತ  ಭೂತಭವ್ಯಭವತ್ಪ್ರಭುಃ

5) ಭೂತಕೃತ್

ಸಂಸ್ಕೃತದಲ್ಲಿ ಕೃತ್ ಅನ್ನುವ ಪದಕ್ಕೆ ಎರಡು ಅರ್ಥವಿದೆ.
೧. ಸೃಷ್ಟಿ
೨. ಸಂಹಾರ

ಅದೇ  ರೀತಿ  ಭೂತಗಳಲ್ಲಿ ಎರಡು ವಿಧ
೧. ಅಚೇತನ ಭೂತ  ಅಂದರೆ ಪಂಚಭೂತಗಳು  (ಮಣ್ಣು ,ಬೆಂಕಿ, ನೀರು, ಗಾಳಿ ಮತ್ತು ಆಕಾಶ) 
೨. ಚೇತನ ಭೂತ ಅಂದರೆ  ಪಂಚಭೂತಗಳಿಂದ ಆದ ಜೀವಗಳು.

ಭೂತಕೃತ್ (ಸೃಷ್ಟಿ) ಅಂದರೆ ಪಂಚಭೂತಗಳ ಸೃಷ್ಟಿಕರ್ತ, ಪಂಚಭೂತಾತ್ಮಕವಾದ ಬ್ರಹ್ಮಾಂಡದ ಸೃಷ್ಟಿಕರ್ತ.  ಬ್ರಹ್ಮಾಂಡದಲ್ಲಿ ಪಂಚಭೂತಗಳಿಂದಾದ ಪಿಂಡಾಂಡ ಸೃಷ್ಟಿ ಮಾಡಿದವ , ಪಿಂಡಾಂಡದಲ್ಲಿ ಜೀವವನ್ನು ಇರಿಸಿ ದೇಹ ಸೃಷ್ಟಿ ಮಾಡಿದವ, ಮತ್ತು ಸಾಧನೆ ಮೂಲಕ ಜೀವರಿಗೆ ಮುಕ್ತಿಯನ್ನು ಕರುಣಿಸುವವ.

ಭೂತಕೃತ್ (ಸಂಹಾರ) ಅಂದರೆ ದೇಹ ನಾಶದ ಮೂಲಕ ಜೀವರನ್ನು ನಾಶ ಮಾಡುವವ, ಅಭಿವೃದ್ಧಿ ಹೊಂದದ ತಾಮಸ ಜೀವರನ್ನು ನಾಶ ಮಾಡುವವ, ಪಂಚಭೂತಾತ್ಮಕವಾದ ಶರೀರ ನಾಶ ಮಾಡುವವ, ಪಂಚಭೂತಾತ್ಮಕವಾದ ಬ್ರಹ್ಮಾಂಡ ನಾಶ ಮಾಡಿದವ , ಪ್ರಳಯ ಕಾಲದಲ್ಲಿ ಪಂಚಭೂತಗಳನ್ನೂ ನಾಶ ಮಾಡುವವ.

6) ಭೂತಭೃತ್

ಸೃಷ್ಟಿ-ಸ್ಥಿತಿ-ಲಯದಲ್ಲಿ ಪಂಚಭೂತಗಳ ಧಾರಣೆ ಮಾಡುವವ,ಪಂಚಭೂತಾತ್ಮಕವಾದ ಬ್ರಹ್ಮಾಂಡ ಧಾರಣೆ ಮಾಡುವವ, ಪಂಚಭೂತಗಳಿಂದಾದ ಪಿಂಡಾಂಡ ಧಾರಣೆ ಮಾಡುವವ, ಪಿಂಡಾಂಡದಲ್ಲಿರುವ ಜೀವವನ್ನು ಧಾರಣೆ ಮಾಡುವವ ಮತ್ತು ಮುಕ್ತಿಯನ್ನು ಪಡೆದ ಜೀವವನ್ನು ಧಾರಣೆ ಮಾಡುವವ.

7) ಭಾವಃ

ಸೃಷ್ಟಿ-ಸ್ಥಿತಿ-ಲಯ ಇದು ಭಗವಂತನ ಗುಣ. ಆತ ಸಚ್ಚಿದಾನ೦ದ. ಹುಟ್ಟು-ಸಾವು ನೈಸರ್ಗಿಕ ಕ್ರಿಯೆ. ಸಾವು ಹುಟ್ಟಿನ ಮೂಲ, ಹುಟ್ಟು ಸಾವಿನ ಮೂಲ. ಭಗವಂತ ಎಂದೆಂದಿಗೂ ಶಾಶ್ವತವಾಗಿ ಇರುವವನು.  ಭಾವ ಅಂದರೆ ಸಚ್ಚಿದಾನ೦ದ ಸ್ವರೂಪ.  

8) ಭೂತಾತ್ಮಾ

ಪಂಚಭೂತಗಳಲ್ಲಿ ವ್ಯಾಪಿಸಿದವ, ಬ್ರಹ್ಮಾಂಡದಲ್ಲಿ ವ್ಯಾಪಿಸಿದವ, ಪಿಂಡಾಂಡದಲ್ಲಿ ತುಂಬಿರುವವ,ಎಲ್ಲಾ ಜೀವದಲ್ಲಿ ಅಂತರ್ಯಾಮಿ ಆಗಿ ತುಂಬಿರುವವ. ಭೂತಿಯನ್ನು( ಉನ್ನತಿ) ಹೊಂದಿದ ಜೀವಿಗಳಿಗೆ ಮುಕ್ತಿಯನ್ನು ಕರುಣಿಸುವ  ಭಗವಂತ ಭೂತಾತ್ಮ.

9) ಭೂತಭಾವನಃ  

ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣವಾದವ, ಜೀವಿಗಳಿಗೆ ಸುಖ-ದುಃಖ ಕೊಡುವವ-ಭೂತಭಾವನಃ

ಮುಂದುವರೆಯುದು....

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 2


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಪೂತಾತ್ಮಾ ಪರಮಾತ್ಮಾ ಚ ಮುಕ್ತಾನಾಂ ಪರಮಾ ಗತಿಃ |
ಅವ್ಯಯಃ ಪುರುಷಃ ಸಾಕ್ಷೀ ಕ್ಷೇತ್ರಜ್ಞೋsಕ್ಷರ ಏವ ಚ   || 2 || 

10) ಪೂತಾತ್ಮಾ

ದ್ವೇಷಗಳ, ತ್ರಿಗುಣಗಳ ಸ್ಪರ್ಶವಿಲ್ಲದ ಪವಿತ್ರ ಸ್ವರೂಪನಾದ ಭಗವಂತ ಪೂತಾತ್ಮಾ.

11) ಪರಮಾತ್ಮಾ

ಆತ್ಮ  ಅಂದರೆ - ದೇಹ? ಅಲ್ಲ !  ಭಾವನೆಗಳ ಗೂಡಾದ ಮನಸ್ಸು? ಅದೂ ಅಲ್ಲ !! ಏಕೆಂದರೆ ಮನಸ್ಸಿನಿಂದ ಯೋಚಿಸುವುದರಿಂದ ಮನಸ್ಸನ್ನು ನಿಯಂತ್ರಿಸುವವ ಯಾರು? ಅದೇ ಜೀವ. ಆದರೆ ಈ ಜೀವವನ್ನು ನಿಯಂತ್ರಿಸುವ  ಶಕ್ತಿ  ಯಾವುದು? ಆತನೇ-ಪರಮಾತ್ಮ. ಎಲ್ಲಾ ಆತ್ಮಗಳಿಗೂ ಪರಮವಾದ ಆತ್ಮ, ಬ್ರಹ್ಮಾದಿ ಸಕಲ ಚೇತನಗಳಿಗೂ ಹಿರಿಯನಾದ ಸ್ವಾಮಿ.

12) ಮುಕ್ತಾನಾಂ ಪರಮಾ ಗತಿಃ

ಚತುರ್ಮುಖನ ಆಯಸ್ಸು ನೂರು ಕಲ್ಪ. ಒಂದು ಕಲ್ಪ (kalpa) ಅಂದರೆ 31,104 ಸಾವಿರ ಕೋಟಿ  ವರ್ಷ. ಮಾನವನ ಸಾಧನೆ ಒಂದು ಕಲ್ಪ. ಮುಕ್ತಿ ಸ್ಥಿತಿಯಲ್ಲಿ ಮಾನವನ ಜೊತೆಗೆ ಚತುರ್ಮುಖ ಬ್ರಹ್ಮರು (ಮುಕ್ತಿಯಲ್ಲಿರುವ ಚತುರ್ಮುಖರು) ಮಾರ್ಗದರ್ಶಕರಾಗಿ ಇರುತ್ತಾರೆ. ಮುಕ್ತಾನಾಂ ಪರಮಾ  ಗತಿಃ  ಅಂದರೆ ಮುಕ್ತಿ ಪಡೆದವರಿಗೆ ಮುಕ್ತಿಯಲ್ಲೂ ಚತುರ್ಮುಖ ಬ್ರಹ್ಮರೊಂದಿಗೆ - ಶ್ರೇಷ್ಠ ಮಾರ್ಗದರ್ಶನ ಮಾಡುವವನು ಹಾಗೂ ಚತುರ್ಮುಖ ಬ್ರಹ್ಮರಿಗೂ -ಶ್ರೇಷ್ಠ ಮಾರ್ಗದರ್ಶನ ಮಾಡುವವನು, ಮತ್ತು ಮುಕ್ತಿ ಪಡೆದ ಎಲ್ಲಾ ಆತ್ಮರಿಗೆ ತಾಯಿಯಾಗಿರುವ ಶ್ರೀ  ತತ್ವ ಲಕ್ಷ್ಮಿಗೂ  ಆಶ್ರಯದಾತನಾಗಿರುವವನು.

13) ಅವ್ಯಯಃ  

ಎಲ್ಲಾ ವಸ್ತುವಿನ ಒಳಗಿದ್ದೂ (ಆಯ) ಏಕರೂಪನಾಗಿ ಇರುವವನು. ಆನೆ ಮತ್ತು ಇರುವೆ ಒಳಗೆ ಇರುವ ಭಗವಂತ ಒಬ್ಬನೇ, ಬೇರೆ ಬೇರೆ ಅಲ್ಲ. ಇಲ್ಲಿ  ವ್ಯಯ ಅಂದರೆ ಕಮ್ಮಿ ಆಗುವುದು, ಖರ್ಚು, ನಾಶ ಇತ್ಯಾದಿ. ಯಾವ ಕಾಲದಲ್ಲೂ ಕಡಿಮೆ ಆಗದೆ, ನಾಶವಾಗದೆ, ಅನಾದಿ-ಅನಂತ ಕಾಲದಲ್ಲಿ, ಏಕರೂಪವಾಗಿ ಇರುವ ಶಾಶ್ವತ ತತ್ವ ಅವ್ಯಯಃ

14) ಪುರುಷಃ

ಇದು ತುಂಬಾ ಪ್ರಮುಖವಾದ ನಾಮ. ವೇದದ ಸಾರಭೂತವಾದ ಪುರುಷ-ಸೂಕ್ತದಲ್ಲಿ ಬರುವಂತಹ ಸೂಕ್ತಗಳ  ಪ್ರತಿಫಲದ ರೂಪವೇ ಭಗವಂತನ ಪುರುಷ ನಾಮಕವಾದ ರೂಪ. ಪುರು ಅಂದರೆ ಎಲ್ಲಕ್ಕಿಂತ ದೊಡ್ಡದು ಅಥವಾ ಅನಂತ. ಬ್ರಹ್ಮಾಂಡ ರಚನೆ ಆಗುವ ಮುಂಚೆ, ಬ್ರಹ್ಮಾಂಡ ಸೃಷ್ಟಿ ಆದ ಮೇಲೂ, ಬ್ರಹ್ಮಾಂಡ  ಮತ್ತು ಪಿಂಡಾಂಡದಲ್ಲಿ ಅನಂತವಾಗಿ ತುಂಬಿರುವವನು ಪುರುಷಃ .

ಈ ಶಬ್ದವನ್ನು ಪುರು+ಷಃ ಎಂದು  ಒಡೆದು ಅರ್ಥೈಸಬಹುದು. ಇಲ್ಲಿ ಪುರು ಅಂದರೆ ಪೂರ್ಣತೆ ಹೊಂದಿದ ದೇಹ (Perfect body), ಷಃ ಅಂದರೆ ನೆಲೆಸಿರುವವನು. ಆದ್ದರಿಂದ ಪುರುಷ ಅಂದರೆ ಪುರದಲ್ಲಿ ಇದ್ದು, ಅದರ ಒಡೆತನವನ್ನು  ಹೊಂದಿರುವ ಹಾಗೂ ಇತರ ಎಲ್ಲಾ ಪುರದ ಒಡೆಯ. ಪುರದ ಒಳಗೆ, ಪುರದ ಹೊರಗೆ ತುಂಬಿ ಅನಂತವಾಗಿರುವ ಪರಮ ಪುರುಷ. ಜ್ಞಾನ, ಶಕ್ತಿ, ಬಲ, ಐಶ್ವರ್ಯ, ವೀರ್ಯ ಮತ್ತು ತೇಜಸ್ಸು ಈ ಷಡ್ಗುಣಗಳಿಂದ   ಪೂರ್ಣನಾಗಿ ಜಗತ್ತನ್ನು ನಿಯಂತ್ರಿಸುವವ ಪುರುಷಃ. ಇನ್ನು ಪು+ರು+ಷ ಅನ್ನುವ ಏಕಾಕ್ಷರಗಳಿಗೆ ವಿಶಿಷ್ಟವಾದ ಅರ್ಥವಿದೆ. ‘ಪು’ ಅಂದರೆ ಎಲ್ಲವನ್ನು ಪಾವನ ಗೊಳಿಸುವವನು. ‘ರು’ ಅಂದರೆ ತಾನು ಒಳಗಿದ್ದು, ಶತ್ತ್ರು, ಅಜ್ಞಾನ ಮತ್ತು  ದುಃಖ ತಡೆದು, ಜೀವನನ್ನು ಉದ್ಧಾರ ಮಾಡುವವನು. ‘ಷಃ’ ಎಂದರೆ ಎಲ್ಲೆಡೆ ಮಲಗಿದವ! ಮಲಗಿದವ ಅಂದರೆ ಅನಾಯಾಸವಾಗಿ ಎಲ್ಲಾ ಕಾರ್ಯ ಮಾಡುವವ. ಈ ರೀತಿ ಭಗವಂತನ ಪುರುಷಃ ನಾಮ ಅನೇಕ ಅರ್ಥಗಳನ್ನು ಕೊಡುತ್ತದೆ.

15) ಸಾಕ್ಷೀ

ಸಾಕ್ಷೀ ಎಂದರೆ ಎಲ್ಲವನ್ನು ಕಣ್ಣಾರೆ ಕಾಣಬಲ್ಲವ ಎಂದರ್ಥ. ಭಗವಂತನ ಮುಂದೆ ನಾವು ಮುಚ್ಚಿಕೊಳ್ಳುವುದು ಏನೂ ಇಲ್ಲ. ಭಗವಂತನ ಮುಂದೆ ನಾವೆಲ್ಲರೂ ಬೆತ್ತಲು, ಆತನ ಮುಂದೆ ಮುಚ್ಚಿಟ್ಟುಕೊಂಡು ಮಾಡುವ ಯಾವ ಕೆಲಸವೂ ಇಲ್ಲ. ಭಗವಂತನ ಮುಂದೆ ನಾವು ಬೆತ್ತಲಾಗದೆ ಭಗವಂತ ನಮಗೆ ಎಂದೂ ಬಿಚ್ಚಿಕೊಳ್ಳುವುದಿಲ್ಲ. ಆದುದರಿಂದ ಭಗವಂತ ಎಲ್ಲವನ್ನು ಕಾಣಬಲ್ಲ ಸಾಕ್ಷಿ. ಇಲ್ಲಿ ಅಕ್ಷಿಗಳು  ಎಂದರೆ ಇಂದ್ರಿಯ ಉಳ್ಳವರು, ಅಂದರೆ ನಾವು-ನೀವು ; ಅಕ್ಷಿಗಳ ಸಖನಾಗಿ ನಮ್ಮನ್ನು ಉದ್ಧಾರ ಮಾಡುವವನು ಸಾಕ್ಷಿ.

16) ಕ್ಷೇತ್ರಜ್ಞಃ

ಕ್ಷೇತ್ರಜ್ಞಃ ಎಂದರೆ ಕ್ಷೇತ್ರವನ್ನು ತಿಳಿದವನು  ಎಂದರ್ಥ. ಕ್ಷೇತ್ರ ಅಂದರೆ ನಾವು ವಾಸ ಮಾಡುವ ನೆಲೆ . ನಾವು ವಾಸ ಮಾಡುವುದು ಚತುರ್ಮುಖನ ಕ್ಷೇತ್ರವಾದ ಈ ಬ್ರಹ್ಮಾಂಡದಲ್ಲಿ ಮತ್ತು ಜೀವದ ನೆಲೆಯಾದ  ಶರೀರ ನಮ್ಮ ಕ್ಷೇತ್ರ. ಅದ್ದರಿಂದ ಕ್ಷೇತ್ರಜ್ಞಃ ಎಂದರೆ ಈ ಬ್ರಹ್ಮಾಂಡವನ್ನು, ಈ ಶರೀರವನ್ನು ಮತ್ತು ಈ  ಪ್ರಪಂಚದ ರಹಸ್ಯವನ್ನು  ಸಂಪೂರ್ಣ  ತಿಳಿದವನು.

17) ಅಕ್ಷರಃ

ಅಕ್ಷರ ಅಂದರೆ ನಾಶವಿಲ್ಲದ್ದು. ಲಿಪಿ ಅಕ್ಷರ ಅಲ್ಲ. ಲಿಪಿ ಕೇವಲ ಅಕ್ಷರದ ಪ್ರತೀಕ. ಲಿಪಿ ನಾಶವಾಗಬಹುದು ಆದರೆ ಅಕ್ಷರಗಳಿಗೆ ನಾಶವಿಲ್ಲ. ನಮ್ಮಿಂದ ಹೊರಹೊಮ್ಮುವ ಎಲ್ಲಾ ನುಡಿ ಈ ಆಕಾಶದಲ್ಲಿ ಶಾಶ್ವತವಾಗಿ ಧ್ವನಿಮುದ್ರಿತವಾಗಿರುತ್ತದೆ.

ಈ ಮೇಲಿನ ಅರ್ಥವಲ್ಲದೆ ಇನ್ನೂ ಅನೇಕ ಅರ್ಥಗಳನ್ನು ಅಕ್ಷರ ನಾಮದಲ್ಲಿ ಕಾಣಬಹುದು. ಯಾವುದು ಎಲ್ಲಾ ಕಡೆ ವ್ಯಾಪಿಸಿದೆಯೋ ಅದು ಅಕ್ಷರ (Omnipresence). 'ಕ್ಷರ' ಎಂದರೆ ನಾಶ, ನಾಶವಿಲ್ಲದ್ದು ಅಕ್ಷರ. 'ಕ್ಷರಣ' ಅಂದರೆ ಸುರಿಸುವವನು, ಯುಗ ಯುಗಾಂತರದಲ್ಲಿ  ನಮ್ಮ ಮೇಲೆ ಕರುಣೆಯ ಮಳೆ ಸುರಿಸುವವನು ಅಕ್ಷರ.

ಇನ್ನು ಅಕ್ಷ+ರ ಅಕ್ಷರ. ಇಲ್ಲಿ 'ಅಕ್ಷ'  ಎಂದರೆ ಇಂದ್ರಿಯ, 'ರ' ಎಂದರೆ ರಮಣ ಅಥವಾ ರಮಿಸುವವನು. ಆದ್ದರಿಂದ ಅಕ್ಷರ ಎಂದರೆ  ಆನಂದಮಯನಾಗಿ ಇಂದ್ರಿಯದಲ್ಲಿ ನೆಲೆಸಿರುವವನು ಎಂದರ್ಥ. ಇಲ್ಲಿ 'ಅ' ಎಂದರೆ ಅಲ್ಲ ಅಥವಾ ಇಲ್ಲ . ಭಗವಂತ ಅಲ್ಲ, ಭಗವಂತ ಇಲ್ಲ! ಅಂದರೆ ಭಗವಂತ ನಮಗೆ ಕಾಣುವ ಯಾವುದೇ ವಸ್ತು ಅಲ್ಲ ಅವನಲ್ಲಿ ದೋಷವಿಲ್ಲ.

ಮುಂದುವರೆಯುವುದು...

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 3


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ   |
ನಾರಸಿಂಹವಪುಃ ಶ್ರೀಮಾನ್ ಕೇಶವಃ ಪುರುಷೋತ್ತಮಃ   || 3 || 

18) ಯೋಗಃ  

ಜೀವದ ಜೊತೆಗೆ ನಿರಂತರವಾಗಿ ಇರುವ ಆಪ್ತ ಬಂಧು. ನೆನೆದಾಗ ಮನದಲ್ಲಿ ಬಂದು ನೆಲೆಸುವವನು. ಭಕ್ತರು   ಬಯಸಿದ್ದನ್ನು ಈಡೇರಿಸುವವನು.

19) ಯೋಗವಿದಾಂನೇತಾ 

ಸರ್ವ ವೇದ ಮಂತ್ರಗಳನ್ನು ಬಲ್ಲವರ ನಾಯಕ. ಅಧ್ಯಾತ್ಮದ ಬಗೆಯನ್ನು, ಜೀವನ ಯೋಗವನ್ನು ಬಲ್ಲ  ಜ್ಞಾನಿಗಳ ನೇತಾರ.

20) ಪ್ರಧಾನಪುರುಷೇಶ್ವರಃ

ಪ್ರಧಾನ ಅಂದರೆ "ಶ್ರೀ" ಅಂದರೆ ಲಕ್ಷ್ಮಿ, ಲಕ್ಷ್ಮಿಗೂ ಈಶ್ವರ, ಬ್ರಹ್ಮ ವಾಯುರಿಗೂ ಈಶ್ವರ.

21) ನಾರಸಿಂಹವಪುಃ  

ನರ ಮತ್ತು ಸಿಂಹ ರೂಪದಲ್ಲಿ ಕಂಬದಿಂದ ಉದ್ಭವಿಸಿ ಹಿರಣ್ಯಕಶಿಪುವಿನ ಸಂಹಾರ ಮಾಡಿದ ಭಗವಂತನ ರೂಪ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ, ಆದರೆ ನಾರಸಿಂಹವಪುಃ ಎನ್ನುವುದಕ್ಕೆ ವಿಶಿಷ್ಟವಾದ ಇತರ ಅರ್ಥವಿದೆ. ಈ ನಾಮವನ್ನು ಒಡೆದು ವಿಶ್ಲೇಷಿಸಿದರೆ ವಿಶಿಷ್ಟ ಅರ್ಥಗಳನ್ನು ಕಾಣುತ್ತೇವೆ. ಇಲ್ಲಿ 'ನಾರ' ಎಂದರೆ ನರರಲ್ಲಿ ತುಂಬಿರುವ ಅಜ್ಞಾನ, 'ಸಿಂಹ' ಎಂದರೆ ಸಿಮ್ಮತಿ ಅಥವಾ ನಿವಾರಿಸುವವನು, 'ವ' ಎಂದರೆ  ಜ್ಞಾನ, ಪುಃ ಎಂದರೆ ಕರುಣಿಸುವವನು.ಆದ್ದರಿಂದ ನಾರಸಿಂಹವಪುಃ ಎಂದರೆ ನರರಲ್ಲಿ ತುಂಬಿರುವ ಅಜ್ಞಾನವನ್ನು ಅಳಿಸಿ, ಜ್ಞಾನದ ಬೀಜ ಬಿತ್ತುವವನು ಎಂದರ್ಥ.

ಇಷ್ಟೇ  ಅಲ್ಲದೆ ಇನ್ನೂ ಮುಂದಕ್ಕೆ ವಿಶ್ಲೇಷಿಸಿದಾಗ,  ನಾರ(ನಾ+ಅರ) ಎಂದರೆ ದೋಷವಿಲ್ಲದವನು; ಸಿಂಹ ಎಂದರೆ ಭಯಂಕರವಾಗಿ ಸರ್ವ ದೋಷವನ್ನು ನಾಶಮಾಡುವವನು. ಆದ್ದರಿಂದ  ನಾರಸಿಂಹವಪುಃ ಎಂದರೆ ಸರ್ವ ದೋಷವನ್ನು ಭಯಂಕರವಾಗಿ ನಾಶಮಾಡಿಯೂ ಕೂಡ, ಯಾವುದೇ ದೋಷವಿಲ್ಲದಿರುವವನು. ಪ್ರಳಯ ಕಾಲದಲ್ಲಿ ನರವಂಶವನ್ನು ನಾಶಮಾಡಿ, ಸೃಷ್ಟಿಕಾಲದಲ್ಲಿ ಪುನಃ ಬೀಜ ಬಿತ್ತಿ ಸೃಷ್ಟಿಮಾಡುವವನು. ಹೀಗೆ ಮನುಕುಲದ ಸೃಷ್ಟಿ-ಸಂಹಾರಕ್ಕೆ ಕಾರಣನಾದ ಭಗವಂತ  ನಾರಸಿಂಹವಪುಃ

22) ಶ್ರೀಮಾನ್

ಇಡೀ ವಿಶ್ವದ ಒಡೆತನ ಇರುವ ಭಗವಂತ ಶ್ರೀಮಂತ, ಅದ್ದರಿಂದ ಆತ ಶ್ರೀಮಾನ್.ಇಲ್ಲಿ ಶ್ರೀಹಿ ಎಂದರೆ  ವೇದ ವಾಙ್ಮಯ, ಶ್ರೀಮಾನ್ ಎಂದರೆ ಸಮಸ್ತ ವೇದದಿಂದ ಪ್ರತಿಪಾದ್ಯನಾದವನು ಎಂದರ್ಥ. 'ಶ್ರೀ' ಎಂದರೆ ಚಿತ್-ಪ್ರಕೃತಿ "ಲಕ್ಷ್ಮಿ"  ಲಕ್ಷ್ಮೀ ಪತಿಯಾದ ಭಗವಂತ ಶ್ರೀಮಾನ್. ಐತರೇಯ ಉಪನಿಷತ್ತು ಹೇಳುವಂತೆ "ಕಣ್ಣು ಒಂದು ಶ್ರೀ, ಮನಸ್ಸು ಒಂದು ಶ್ರೀ, ಕಿವಿ ಒಂದು ಶ್ರೀ, ಮಾತು ಒಂದು ಶ್ರೀ ಮತ್ತು ಉಸಿರು ಒಂದು ಶ್ರೀ " ಏಕೆಂದರೆ ಈ ಪಂಚೇಂದ್ರಿಯಗಳು ಶಿರಸ್ಸನ್ನು ಆಶ್ರಯಿಸಿಕೊಂಡಿರುವ ಇಂದ್ರಿಯಗಳು. ಮನುಷ್ಯ ಅರಿವಿನ ಸಂಪತ್ತನ್ನು ಗಳಿಸುವುದೇ ಕಣ್ಣು- ಕಿವಿಯಿಂದ ; ಕಣ್ಣು-ಕಿವಿ ದೇಹದ ಸೂರ್ಯ-ಚಂದ್ರರಿದ್ದಂತೆ. ಅಗ್ನಿ ಸ್ವರೂಪವಾಗಿರುವ ಬಾಯಿ (ಮಾತು)- ಮನುಷ್ಯನಿಗೆ ಭಗವಂತ ಕೊಟ್ಟಿರುವ ಅಪೂರ್ವವಾದ ಸಂಪತ್ತು. ಮಾತು ಹೊರಡಬೇಕಿದ್ದರೆ, ನೋಡಿದ್ದನ್ನ ಅನುಭವಿಸಲಿಕ್ಕೆ , ಕೇಳಿದ್ದನ್ನ ಗ್ರಹಿಸಲು ಅತ್ಯಂತ ಮುಖ್ಯವಾಗಿ ಮನಸ್ಸು  ಬೇಕು. ಈ ಎಲ್ಲಾ ಇಂದ್ರಿಯಗಳನ್ನೂ ಚಾಲನೆಯಲ್ಲಿಡಲು ಪ್ರಾಣಶಕ್ತಿ ಬೇಕು. ಅದ್ದರಿಂದ ಈ ಪಂಚೇಂದ್ರಿಯಗಳು ಮನುಷ್ಯನಲ್ಲಿರುವ ಅತ್ಯಂತ ಶ್ರೀಮಂತ ಅಂಗ. ಈ ಪಂಚೇಂದ್ರಿಯಗಳನ್ನು ನಮಗೆ ದಯಪಾಲಿಸಿದ ಆ ಕರುಣಾಮಯೀ ಭಗವಂತ ಶ್ರೀಮಾನ್.

23) ಕೇಶವಃ

ಕೇಶವ ಎಂದರೆ ಅತ್ಯಂತ ಸುಂದರವಾದ ಕೂದಲು ಉಳ್ಳವನು ಎಂದರ್ಥ.ಇದು  ಭಗವಂತನ ಕೃಷ್ಣಾವತಾರದಲ್ಲಿ ಬಂದ ಹೆಸರು. ಕೃಷ್ಣಾವತಾರದಲ್ಲಿ ಕೃಷ್ಣ ತನ್ನ ಸುಂದರವಾದ ಗುಂಗುರು ಕೂದಲಿನ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುತ್ತಿದ್ದ. ಗಂಡಸರು , ಹೆಂಗಸರು , ಗೋವುಗಳು ಎಲ್ಲರೂ ಕೃಷ್ಣನಿಂದ ಆಕರ್ಷಣೆಗೆ ಒಳಗಾಗುತ್ತಿದ್ದರು. ಈ ರೀತಿ ಸುಂದರನಾದ  ಭಗವಂತ ಕೇಶವ.
ಇನ್ನು ಕೃಷ್ಣಾವತಾರದಲ್ಲಿ ಕಂಸನ ಧೂತನಾದ ಕೇಶಿ ಎಂಬ ರಾಕ್ಷಸನನ್ನು ಕೊಂದ ಭಗವಂತನನ್ನು ಕೇಶವ ಎನ್ನುತ್ತಾರೆ. ಕೃಷ್ಣನನ್ನು ಕೊಲ್ಲಲು ಕಂಸ ಕೇಶಿಯನ್ನು, ಕುದುರೆ ರೂಪದಲ್ಲಿ  ಬೃಂದಾವನಕ್ಕೆ  ಕಳುಹಿಸಿಕೊಟ್ಟಿದ್ದ. ಆತನನ್ನು ಕೃಷ್ಣ ಸಂಹಾರ ಮಾಡಿದ್ದ.

ಈ ನಾಮವನ್ನು ಕಾ+ಈಶ+ವ ಎಂದು ಒಡೆದು ಅರ್ಥೈಸಬಹುದು. ಇಲ್ಲಿ 'ಕಾ' ಎಂದರೆ ಸೃಷ್ಟಿಗೆ ಕಾರಣವಾಗಿರುವ   ಚತುರ್ಮುಖ ಬ್ರಹ್ಮ; 'ಈಶ' ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ; ಕೇಶವ ಎಂದರೆ  ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಪರಶಕ್ತಿ.

ಇನ್ನು ಕೇಶ ಎಂದರೆ ಸೂರ್ಯಮಂಡಲದಿಂದ ಭೂಮಿಗೆ ಹರಿದುಬರುವ ಕಿರಣ;  ಸೌರ ಮಂಡಲದಲ್ಲಿ ನಿಂತು, ಸೌರ ಶಕ್ತಿಯಿಂದ ಈ ಜಗತ್ತನ್ನು ಬೆಳಗಿಸುವ ಗಾಯತ್ರಿ ಸ್ವರೂಪ ಭಗವಂತ-ಕೇಶವ.

24) ಪುರುಷೋತ್ತಮಃ

ಪುರುಷೋತ್ತಮ ಎನ್ನುವ ನಾಮದ ಸಂಪೂರ್ಣ ಅರ್ಥವನ್ನು ಭಗವದ್ಗೀತೆಯಲ್ಲಿ ಕಾಣಬಹುದು.

ದ್ವಾವಿಮೌ  ಪುರುಷೌ ಲೋಕೇ ಕ್ಷರಸ್ಚಾಕ್ಷರ ಏವ ಚ |
ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋऽಕ್ಷರ  ಉಚ್ಚ್ಯತೇ  || (ಅ-೧೫, ಶ್ಲೋ-೧೬)
ಉತ್ತಮಃ ಪುರುಷಸ್ತ್ವನ್ಯಃ  ಪರಮಾತ್ಮೇತ್ಯುದಾಹೃತಃ |
ಯೋ ಲೋಕತ್ರಯಮಾವಿಶ್ಯ ಬಿಭರ್ತ್ಯವ್ಯಯ ಈಶ್ವರಃ  || (ಅ-೧೫, ಶ್ಲೋ-೧೭)
ಯಸ್ಮಾತ್ ಕ್ಷರಮತೀತೋऽಹಮಕ್ಷರಾದಪಿ ಚೋತ್ತಮಃ |
ಅತೋऽಸ್ಮಿ ಲೊಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ || (ಅ-೧೫, ಶ್ಲೋ-೧೮)

ಅಂದರೆ ಲೋಕದಲ್ಲಿ ಎರಡು ಬಗೆಯ ಪುರುಷರಿರುತ್ತಾರೆ. ಕ್ಷರಪುರುಷ ಮತ್ತು ಅಕ್ಷರಪುರುಷ. ಬ್ರಹ್ಮಾದಿ ಸಮಸ್ತ  ಜೀವರೂ ಕ್ಷರಪುರುಷರು. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೇ ಅಕ್ಷರ ಪುರುಷಳೆನಿಸಿದ್ದಾಳೆ-(ಅ-೧೫, ಶ್ಲೋ-೧೭); ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ  ಮೂರು ಲೋಕದೊಳಗಿದ್ದು ಸಲಹುತ್ತಾನೆ (ಅ-೧೫, ಶ್ಲೋ-೧೭).ನಾನು ಕ್ಷರವನ್ನು ಮೀರಿ ನಿಂತವನು. ಅಕ್ಷರಕ್ಕಿಂತಲೂ ಹಿರಿಯನು, ಅದಕ್ಕೆಂದೇ ಲೋಕದಲ್ಲೂ, ವೇದದಲ್ಲೂ 'ಪುರುಷೋತ್ತಮ' ಎಂದು ಹೆಸರಾಗಿದ್ದೇನೆ  (ಅ-೧೫, ಶ್ಲೋ-೧೮).

ಪುರುಷೋತ್ತಮ ಎನ್ನುವ ನಾಮವನ್ನು ಮೂರು-ನಾಲ್ಕು ಬಗೆಯಿಂದ ಪ್ರಯೋಗಿಸುತ್ತಾರೆ. ಉತ್ತಮಪುರುಷ ; ಮಹಾಪುರುಷ ; ಪರಮಪುರುಷ  ಮತ್ತು  ಪುರುಷೋತ್ತಮ. ಎಲ್ಲವೂ  ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತವೆ. ಉತ್ತಮಪುರುಷ ಎಂದರೆ  ಪುರುಷರಲ್ಲಿ ಉತ್ತಮ. ಕ್ಷರಪುರುಷ ಎಂದರೆ ಕ್ಷರವಾದ ಪುರದಲ್ಲಿ ಇರುವ ಎಲ್ಲಾ ಜೀವರು. ನಾಶವಾಗುವ ಹದಿನೈದು ಬೇಲಿಯಿಂದ ಬದ್ಧನಾದ  ಶರೀರದಲ್ಲಿರುವ ಜೀವ ಕ್ಷರಪುರುಷ. ಈಗ ಜೀವರನ್ನು ಬಂದಿಸಿರುವ ಹದಿನೈದು ಬೇಲಿಗಳನ್ನು ನೋಡೋಣ.

೧) ಶ್ರದ್ಧೆಯ ಬೇಲಿ: ಇದರಲ್ಲಿ ಎರಡು ವಿಧ. ಜೀವ ಸ್ವರೂಪಭೂತವಾದ ಬೇಲಿ (ಕಿತ್ತೆಸೆಯಲು ಆಗದ ಬೇಲಿ) ಹಾಗೂ ಜೀವ ಸ್ವಭಾವದ ಬೇಲಿ(ಕಿತ್ತೆಸೆಯಬೇಕಾದ ಬೇಲಿ). ಮನೆತನ , ಕುಟುಂಬ , ಬೆಳೆದ ವಾತಾವರಣದ ಪ್ರಭಾವದಿಂದ ಬಂದ ಶ್ರದ್ಧೆ, ಪರಿಸರದ ಪ್ರಭಾವ, ಮನೆತನದ ಅನುವಂಷಿಕ(ಜೀನ್ಸ್)ಪ್ರಭಾವದಿಂದ ಬಂದ ಶ್ರದ್ಧೆ, ಇತ್ಯಾದಿಯನ್ನು ಮೀರಿನಿಂತು  ನೋಡಿದಾಗ ಮಾತ್ರ ನಿಜವಾದ ಶ್ರದ್ಧೆ ಎಂದರೆ ಏನು ಎಂದು ಅರ್ಥವಾಗುತ್ತದೆ.

೨-೬)ಪಂಚಭೂತಗಳ ಬೇಲಿ: ಮಣ್ಣು-ನೀರು(ಅನ್ನಮಯ ಕೋಶ), ಬೆಂಕಿ-ಗಾಳಿ-ಆಕಾಶ (ಪ್ರಾಣಮಯ ಕೋಶ).

೭)ಇಂದ್ರಿಯಗಳ ಬೇಲಿ:ಕೆಟ್ಟದ್ದನ್ನು ಮಾಡುವ ಐದು  ಜ್ಞಾನೇಂದ್ರಿಯಗಳು(ಕಿವಿ, ಮೂಗು, ಕಣ್ಣು, ನಾಲಗೆ ಮತ್ತು ಚರ್ಮ) ಮತ್ತು  ಐದು ಕರ್ಮೇಂದ್ರಿಯಗಳು(ಕೈ, ಕಾಲು, ಮುಖ, ಉಪಸ್ಥ ಮತ್ತು ಗುದ).

೮)ಅಂತಃಕರಣದ ಬೇಲಿ: ಕೆಟ್ಟದ್ದನ್ನು ಯೋಚಿಸುವ ಮನಸ್ಸು

೯)ಅನ್ನದ ಬೇಲಿ: ಆಹಾರ.

೧೦)ವೀರ್ಯದ ಬೇಲಿ: ಶಕ್ತಿ .

೧೧-೧೩) ತಪಃ-ಮಂತ್ರಃ-ಕರ್ಮಃ.ಹಾಗಾಗಬೇಕು ಹೀಗಾಗಬೇಕು ಅನ್ನುವ ಆಲೋಚನೆ (ತಿರುಕನ ಕನಸಿನಂತೆ)-ತಪಃ. ತನ್ನ ಕನಸನ್ನು ನನಸು ಮಾಡಲು ಆಡುವ  ಮಾತುಗಾರಿಕೆ ಮಂತ್ರಃ.ಮತ್ತು ಅದನ್ನು ಸಾಧಿಸಲು ಮಾಡುವ ಕರ್ಮ.

೧೪)ಲೋಕಗಳು: ಸ್ತಿರ-ಚರ ಸೊತ್ತುಗಳು (ನಾನು ಮಾಡಿದ್ದು, ನನ್ನದು ಅನ್ನುವ ಸೊತ್ತುಗಳು).

೧೫)ನಾಮದ ಬೇಲಿ: Name and fame, ಕೀರ್ತಿ. ಈ ಮೇಲಿನ  ನಾಶವಾಗತಕ್ಕಂತಹ  ಹದಿನೈದು ಬೇಲಿ ಒಳಗೆ ಸಿಕ್ಕಿ ಹಾಕಿಕೊಂಡಿರುವುದೇ ಹದಿನಾರನೇ ಜೀವ.  ಜೀವಿಗೆ ಈ ಮೇಲಿನ ಬೇಲಿ ಎನ್ನುವ ಅಂಗಿ ಹಾಕಿ ಈ ಪ್ರಪಂಚಕ್ಕೆ ಶಿಕ್ಷಣಕ್ಕಾಗಿ ಕಳಿಸಿರುವ ಚಿತ್ತ್ ಪ್ರಕೃತಿ ಲಕ್ಷ್ಮಿ ಹದಿನೇಳನೇ ಅಕ್ಷರಪುರುಷಳು. ಈ ಮೇಲಿನ ಕ್ಷರ-ಅಕ್ಷರಗಳಿಗಿಂತ ಅತೀತನಾದ ಹದಿನೆಂಟನೆಯ ಭಗವಂತ ಪುರುಷೋತ್ತಮ. ಮೇಲಿನ ಬೇಲಿಯಿಂದ ಜೀವಿಯನ್ನು ಬಿಡಿಸಿ ಮುಕ್ತಿಯನ್ನು ಕರುಣಿಸುವವನು ಪುರುಷೋತ್ತಮ! 

ಮುಂದುವರೆಯುವುದು....

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 4


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿರ್ನಿಧಿರವ್ಯಯಃ |
ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ || 4 || 

25) ಸರ್ವಃ  

ವಿಶ್ವಂ ಮತ್ತು ಸರ್ವ ಎರಡು ಸಮಾನಾರ್ಥಕವಾದ ನಾಮಗಳು. ಭಗವಂತ ಸರ್ವ ಅಂದರೆ ಸರ್ವಸಮರ್ಥ, ಸರ್ವಗತ ಮತ್ತು  ಸರ್ವಗುಣ ಪೂರ್ಣ. ಸರ್ವ ಅಂದರೆ ಎಲ್ಲವನ್ನು ತಿಳಿದವನು, ಎಲ್ಲೆಡೆ  ತುಂಬಿರುವವನು, ಎಲ್ಲಾ ಕಾಲದಲ್ಲೂ ಇರುವವನು, ಎಲ್ಲಕ್ಕೂ ಕಾರಣನಾದವನು ಮತ್ತು  ಪರಿಪೂರ್ಣನಾದವನು.

26) ಶರ್ವಃ  

ಶರ್ವ ಎಂದರೆ ಶಿವನೊಳಗೆ ನೆಲೆಸಿ ಸಮಸ್ತ ಜಗತ್ತನ್ನು ಸಂಹಾರ ಮಾಡುವವನು. ದುರ್ಜನರಿಗೆ, ಪಾಪಿಗಳಿಗೆ ದುಃಖವನ್ನು ಕೊಡುವವನು ಶರ್ವ.

27) ಶಿವಃ 

‘ಶ’ ಅಂದರೆ ಸುಖ; ಶಿವ ಎಂದರೆ ಜ್ಞಾನಾನಂದ ಹಾಗೂ ಪರಮ ಮಂಗಳ ಸ್ವರೂಪ.

28) ಸ್ಥಾಣುಃ

ಸ್ಥಾಣು ಎಂದರೆ ‘ಚಲಿಸದ’ ಎನ್ನುವ  ಅರ್ಥವನ್ನು ಕೊಡುತ್ತದೆ. ಭಗವಂತ ಸರ್ವಗತ  ಅದ್ದರಿಂದ ಆತ  ಸ್ಥಾಣು. ಆತ ಚಲಿಸದೆ ಮಲಗಿದ್ದರೂ, ಎಲ್ಲಾ ಕಡೆ ತಲುಪಬಲ್ಲ. ಏಕೆಂದರೆ ಬಿಂಬ ರೂಪವಾಗಿ ಪ್ರತಿಯೊಂದರಲ್ಲೂ  ಭಗವಂತ ಇದ್ದಾನೆ. ಆತ  ಆಕಾಶಕ್ಕಿಂತ  ದೊಡ್ಡವ , ಪರಮಾಣುಗಿಂತ ಚಿಕ್ಕವ!  It moves and it moves not! ಚಲಿಸಿದಂತೆ ಕಾಣುವ ಚಲಿಸದೇ ಇರುವ ಭಗವಂತ ಸ್ಥಾಣು.   

29) ಭೂತಾದಿಃ

ಭೂತಾದಿ ಎಂದರೆ ಎಲ್ಲಾ ಭೂತಗಳ ಆದಿ. ಎಲ್ಲಾ ಜೀವಗಳ, ಎಲ್ಲಾ ಜಡಗಳ, ಎಲ್ಲಾ ಚರಾಚರಾತ್ಮಕವಾದ ಹಾಗೂ ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ಆದಿ ಕಾರಣನಾದವ ಭೂತಾದಿ. ಅಷ್ಟೇ ಅಲ್ಲ, ಈ ಎಲ್ಲಾ ಭೂತಗಳನ್ನ ತನ್ನಲ್ಲಿರಿಸಿಕೊಂಡು ಪಾಲನೆ ಮಾಡುವವನು, ಕೊನೆಗೆ ಸಂಹಾರ ಮಾಡುವವನೂ ಅವನೇ.
ಆದ್ದರಿಂದ ಸಮಸ್ತ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ, ಪ್ರಪಂಚದ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದವನು ಭೂತಾದಿ. ಇಷ್ಟೇ ಅಲ್ಲದೆ  ಭೂತರು ಎಂದರೆ ಮುಕ್ತರು ಕೂಡ ಹೌದು. ಮುಕ್ತರಿಗೆ ಮುಕ್ತಿಯನ್ನು ಕರುಣಿಸಿವನು ಭೂತಾದಿ.

30) ನಿಧಿರವ್ಯಯಃ

ನಿಧಿಃ+ಅವ್ಯಯಃ =ನಿಧಿರವ್ಯಯ. ನಿಧಿ ಅಂದರೆ ಕೊಪ್ಪರಿಗೆ (ಹೂತಿಟ್ಟ ಸಂಪತ್ತು). ಭಗವಂತನ ಅರಿವೇ  ಅತೀ ದೊಡ್ಡ ಕರಗದ ಅಥವಾ ಅಳಿಯದ (ಅವ್ಯಯ)  ಸಂಪತ್ತು. ನಿಗೂಢವಾದ ಹೃದಯ ಗುಹೆಯೊಳಗೆ  ಅಡಗಿರುವ ಹೃತ್ಕಮಲ ಮಧ್ಯ ನಿವಾಸಿಯಾದ ಭಗವಂತ ಅಪೂರ್ವ ಹಾಗೂ ಅಮೂಲ್ಯವಾದ ನಿಧಿ. ಅವನು ಅವಿ  ಅಂದರೆ ಅವತಿ ಅಥವಾ ರಕ್ಷಕ. ಹೃದಯ ಗುಹೆಯಲ್ಲಿ ಅಡಗಿದ್ದು, ನಮ್ಮ ನಿರಂತರ ರಕ್ಷಣೆ ಮಾಡುವವನು. ಅಯಃ  ಎಂದರೆ  ಎಲ್ಲಾ ಕಡೆ ಇರುವವನು. ನಮ್ಮ ಕ್ಷೇಮಕ್ಕೋಸ್ಕರ, ನಮ್ಮ ರಕ್ಷಣೆಗೋಸ್ಕರ, ನಮ್ಮಲ್ಲಿ ಅಡಗಿ ಕುಳಿತಿರುವ, ಹಾಗೂ  ಎಲ್ಲಾ ಕಡೆ ಇರುವ ಅಪೂರ್ವ ನಿಧಿ- ನಿಧಿರವ್ಯಯಃ.

31) ಸಂಭವಃ

ಸಂಭವಃ  ಅಂದರೆ ಭಕ್ತರು ಕರೆದಾಗ ತಾನೇ ತಾನಾಗಿ ಸಂಭವಿಸುವವನು (ಭೂಮಿಗೆ ಇಳಿದು ಬರುವವನು). ಜಗತ್ತಿನ ಸೃಷ್ಟಿಗೆ ಕಾರಣನಾದವನು ಹಾಗೂ ಜಗತ್ತಿನ ಪಾಲನೆಗೋಸ್ಕರ  ತಾನೇ ತಾನಾಗಿ ಅವತರಿಸುವವನು.
ಸಮೀಚೀನಃ ಭವಃ  - ಶ್ರೇಷ್ಠವಾದ ಉನ್ನತಿ ಅಥವಾ ಮುಕ್ತಿ  ಯಾರಿಂದ  ಸಿಗುತ್ತದೋ ಅವನು ಸಂಭವಃ

32) ಭಾವನಃ

ಒಬ್ಬೊಬ್ಬರೊಳಗಿದ್ದು  ಅವರ ಭಾವನೆಗಳನ್ನು  ನಿಯಂತ್ರಿಸುವ ಶಕ್ತಿಯಾದ ಭಗವಂತ  ಭಾವನಃ .
ಭಾವಂ+ನಯತಿ=ಭಾವನಃ  ಅಂದರೆ ನಮಗೆ ಆನಂದವನ್ನು ಕೊಡುವವನು; ಭಾವಂ+ಅಪನಯತಿ=ಭಾವನಃ ಅಂದರೆ ನಾವು ಕೆಟ್ಟ ದಾರಿಯಲ್ಲಿ ನಡೆದಾಗ ನಮ್ಮನ್ನು ಸರಿ ದಾರಿಗೆ ತರಲು ನಮಗೆ ದುಃಖವನ್ನು ಕೊಡುವವನು. ಹೀಗೆ ನಮ್ಮ ಸುಖ-ದುಃಖಕ್ಕೆ ಕಾರಣನಾದವನು ಭಾವನಃ .

33) ಭರ್ತಾ

ಭರ್ತಾ ಎಂದರೆ ಎಲ್ಲವನ್ನೂ ಹೊತ್ತವನು, ಇಡೀ ವಿಶ್ವವನ್ನು ಧರಿಸಿದವನು. ವಿಶ್ವದ ಮೂಲಾಧಾರನಾದ ಭಗವಂತ ಭರ್ತಾ.

34) ಪ್ರಭವಃ

ಎಲ್ಲಕ್ಕಿಂತ ಪ್ರಕೃಷ್ಟನಾಗಿರುವ, ಎಲ್ಲಕ್ಕಿಂತ ವಿಶಿಷ್ಟನಾಗಿರುವ, ಜ್ಞಾನ ಸ್ವರೂಪನಾದ ಭಗವಂತ.
ಯಾರು ಎಲ್ಲರಿಗಿಂತ ದೊಡ್ಡವನೋ, ಯಾರಿಂದ ಎಲ್ಲರೂ ಎತ್ತರಕ್ಕೆ  ಏರಲು  ಸಾಧ್ಯವೋ, ಅವನು ಪ್ರಭವಃ.

35) ಪ್ರಭುಃ

ಭಗವಂತ ಸರ್ವಸಮರ್ಥ ಆದ್ದರಿಂದ ಆತ ಎಲ್ಲರ ಪ್ರಭು.

36) ಈಶ್ವರಃ

ಈಶರು ಎಂದರೆ ನಮ್ಮ ದೇಹ ಹಾಗೂ ಪ್ರಪಂಚಕ್ಕೆ ಸಂಬಂಧಪಟ್ಟ ಅಭಿಮಾನಿ ದೇವತೆಗಳು.
ಉದಾಹರಣೆಗೆ ಶನಿ- ಪೃಥ್ವಿಯ  ಅಭಿಮಾನಿ ದೇವತೆ; ಬುಧ- ನೀರಿನ ಅಭಿಮಾನಿ ದೇವತೆ; ಗಣಪತಿ- ಆಕಾಶದ ಅಭಿಮಾನಿ ದೇವತೆ; ಸೂರ್ಯ- ಕಣ್ಣಿನ ಅಭಿಮಾನಿ ದೇವತೆ; ಚಂದ್ರ- ಕಿವಿಯ ಅಭಿಮಾನಿ ದೇವತೆ; ವರುಣ- ನಾಲಿಗೆಯ ಅಭಿಮಾನಿ ದೇವತೆ; ಅಗ್ನಿ- ಮಾತಿನ ಅಭಿಮಾನಿ ದೇವತೆ; ಇಂದ್ರ- ಕೈಯ ಅಭಿಮಾನಿ ದೇವತೆ; ಯಜ್ಞ- ಕಾಲಿನ ಅಭಿಮಾನಿ ದೇವತೆ; ಅನಿರುದ್ಧ , ಬೃಹಸ್ಪತಿ , ವರುಣ , ಮಿತ್ರ , ಇಂದ್ರ ,  ಕಾಮ , ಗರುಡ , ಶೇಷ, ರುದ್ರ , ವಾಯು - ಇವರೆಲ್ಲರೂ ಮನಸ್ಸಿನ ಅಭಿಮಾನಿ ದೇವತೆಗಳು . ಶ್ರದ್ಧೆಯ ದೇವತೆ- ಸರಸ್ವತಿ. ಹೀಗೆ ಬೇರೆ ಬೇರೆ ದೇವತೆಗಳ ಸಮುದಾಯವಿದೆ. ಈ ದೇವತೆಗಳ ಸಮೂಹ ನಮ್ಮ ದೇಹದಲ್ಲಿರುವ ಹದಿನೈದು  ಬೇಲಿಗಳನ್ನು ನಿಯಂತ್ರಿಸುವ ಈಶರು. ಈ ಎಲ್ಲಾ ದೇವತೆಗಳು ಅಖಂಡವಾದ ಭಗವಂತನ ನೀತಿಗೆ ಬದ್ಧರಾಗಿ ಕೆಲಸ ಮಾಡುತ್ತಿರುತ್ತಾರೆ. ಈ ಎಲ್ಲಾ ಈಶರಿಗೂ ವರನಾದವ, ಶ್ರೇಷ್ಠನಾದವ , ಈ ದೇಹದಲ್ಲಿರುವ ಸರ್ವ-ನಿಯಾಮಕನಾದ ಭಗವಂತ ಈಶ್ವರ-ಪ್ರಭುರೀಶ್ವರ.

ಮುಂದುವರೆಯುವುದು.....

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 5


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ |
ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ || 5 || 

37) ಸ್ವಯಂಭೂಃ 

ಸ್ವಯಂಭೂಃ ಅಂದರೆ ತಾನೇ ತಾನಾಗಿ ಪೂರ್ಣವಾಗಿರುವವನು, ತನ್ನಿಂದ ತಾನೆ ಆವಿರ್ಭೂತನಾಗುವವನು.
ನಮ್ಮ ಪೂರ್ಣತೆ ಇನ್ನೊಬ್ಬರು ಕೊಟ್ಟರೆ ಮಾತ್ರ, ಆದರೆ ಭಗವಂತ ಸ್ವಯಂಪೂರ್ಣ. ಭಗವಂತ ಅವತರಿಸಲು ಯಾರು ಕಾರಣ? ಅವನು ಹುಟ್ಟಿಬರುವುದಕ್ಕೆ  ಯಾರೂ ಕಾರಣರಲ್ಲ , ಆತನು  ಸ್ವಯಂಭೂಃ , ಅಂದರೆ  ತಾನೇ ತಾನಾಗಿ ಹುಟ್ಟಿ ಬರುವವನು. ಭಕ್ತರ  ಬಯಕೆ  ಈಡೇರಿಸಲು ಸ್ವಯಂಇಚ್ಛೆಯಿಂದ  ಅವತರಿಸಿ ಬರುತ್ತಾನೆ.
ಭಗವಂತ  ಜ್ಞಾನದಿಂದ-ಜ್ಞಾನದಂತೆ, ದೀಪದಿಂದ-ದೀಪದಂತೆ. ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದರೆ ಮೂಲ ದೀಪದ ಪ್ರಕಾಶ ಕಡಿಮೆ ಆಗುವುದಿಲ್ಲ .ಭಗವಂತ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅಭಿವ್ಯಕ್ತ  ಆಗುತ್ತಾ ಹೋಗುತ್ತಾನೆ . ಆದರೆ  ಮೂಲವೂ ಪೂರ್ಣ , ಮೂಲದಿಂದ ಬಂದ ಅವತಾರವೂ ಪೂರ್ಣ.
ಈ ರೀತಿ ಅವತಾರಕ್ಕೆ ಮೊದಲೂ ಪೂರ್ಣತೆಯಲ್ಲಿದ್ದು, ಅವತಾರದಲ್ಲೂ ಪೂರ್ಣವಾಗಿ, ಅವತಾರದ ನಂತರ ಮತ್ತೆ ಹೋಗಿ  ಪೂರ್ಣತೆಯಲ್ಲೇ  ಉಳಿಯುವ ಭಗವಂತ ಸ್ವಯಂಭೂಃ .

38) ಶಂಭುಃ

ಶಂ-ಭವತಿ' ಎಂದರೆ ಆನಂದ ರೂಪ,'ಶಂ-ಭವತಿ ಅನೇನ' ಎಂದರೆ ಆನಂದ ಕೊಡುವವನು ಎಂದರ್ಥ.ಇಲ್ಲಿ 'ಶಂ' ಎಂದರೆ ಆನಂದ. ಉದಾಹರಣೆಗೆ  "ಹರಿಃ ಓಮ್, ಶಂ ನೋ ಮಿತ್ರಃ, ಶಂ ವರುಣಃ, ಶಂ ನೋ ಭವತ್ವರ್ಯಮಾ,  ಶಂ ನೋ ಇಂದ್ರೋ ಬೃಹಸ್ಪತಿಃ, ಶಂ ನೋ ವಿಷ್ಣುರುರುಕ್ರಮಃ" ಇಲ್ಲಿ ಶಂ ಎನ್ನುವ ಪದವನ್ನು  ಆನಂದಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಎಲ್ಲಾ ಶಾಸ್ತ್ರಗಳೂ  ಭಗವಂತನನ್ನು ಆನಂದಮಯನೆಂದು ಹೇಳುತ್ತವೆ.ಯಾರು ಸ್ವಯಂ ಆನಂದಮಯನೋ , ಯಾರು ಎಲ್ಲರಿಗೂ ಆನಂದವನ್ನು ಕೊಡಬಲ್ಲನೂ ಅವನು ಶಂಭು.

39) ಆದಿತ್ಯಃ 

ಆದಿತ್ಯ ಅಂದರೆ ಅದಿತಿಯ ಮಗ ಎಂಬುದು ಒಂದು ಅರ್ಥ. ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ ಹಾಗೂ ದೇವತೆಗಳ ತಾಯಿ. ಅದಿತಿಗೆ ಹನ್ನೆರಡು ಮಂದಿ ಮಕ್ಕಳು. ಅವರನ್ನು ದ್ವಾದಶಾದಿತ್ಯರು ಎಂದು ಕರೆಯುತ್ತಾರೆ. ವಿವಸ್ವಾನ್ , ಆರ್ಯಮಾನ್, ಪೂಷನ್, ತ್ವಷ್ಟೃ, ಸವಿತೃ, ಭಗ, ದಾತ, ವಿಧಾತ, ವರುಣ, ಮಿತ್ರ , ಶಕ್ರ, ಉರುಕ್ರಮ -ಇವರೇ ಆ ಹನ್ನೆರಡು ಮಂದಿ ಆದಿತ್ಯರು. ಈ ಹನ್ನೆರಡು ದೇವತೆಗಳೇ ವರ್ಷದ ಹನ್ನೆರಡು ಮಾಸದ ದೇವತೆಗಳು. ಇವರಲ್ಲಿ ಒಬ್ಬ  ಸೂರ್ಯ ,ಒಬ್ಬ ವರುಣ , ಮತ್ತೊಬ್ಬ ಮಿತ್ರ ,ಮತ್ತೊಬ್ಬ ಇಂದ್ರ , ಹಾಗೇ ಕೊನೇ ಮಗನೇ  ವಾಮನ ರೂಪಿ ವಿಷ್ಣು . ಅವನು ಎಲ್ಲರಿಗಿಂತ ಕೊನೆಗೆ ಹುಟ್ಟಿದರೂ, ಆತ ಆದಿಯಲ್ಲಿ ಇದ್ದವನು ಆದ್ದರಿಂದ ಆತ ಆದಿತ್ಯಃ. ಅವನು  ಆದಿ+ತಿ+ಯ ಅಂದರೆ ಆದಿಯಲ್ಲಿ ಜ್ಞಾನಾನಂದ ಸ್ವರೂಪನಾಗಿದ್ದವ, ಎಲ್ಲಕ್ಕೂ ಕಾರಣಕರ್ತ. ಇಷ್ಟೇ ಅಲ್ಲದೆ ಸೂರ್ಯ ಮಂಡಲದಲ್ಲಿ  (ಆದಿತ್ಯನಲ್ಲಿ) ಸನ್ನಿಹಿತನಾಗಿರುವ  ಭಗವಂತನನ್ನು ಆದಿತ್ಯಃ  ಎನ್ನುತ್ತಾರೆ.

40) ಪುಷ್ಕರಾಕ್ಷಃ

ಪುಷ್ಕರ ಎಂದರೆ ಕಮಲ, ಅಕ್ಷ ಎಂದರೆ ಕಣ್ಣು . ಪುಷ್ಕರಾಕ್ಷ ಎಂದರೆ ನೀರನ್ನು ಹೀರುವ ಬಳ್ಳಿಯಲ್ಲಿ ಈಗಷ್ಟೇ  ಅರಳಿದ ಕಮಲದಂತೆ ಅರಳುಗಣ್ಣು ಉಳ್ಳವನು. 'ಅರಳುಗಣ್ಣು' ಎಂದರೆ ಆನಂದಮಯ ವ್ಯಕ್ತಿತ್ವ, ಭಗವಂತ ಅನಂದಮಯಪೂರ್ಣ. ಕಣ್ಣು ಅರಳುವುದು ಆನಂದದ ಜೊತೆಗೆ  ಕಾರುಣ್ಯದ ಸಂಕೇತ ಕೂಡ ಹೌದು. ಪುಷ್ಟಿಕರ ನೋಟ ಉಳ್ಳವನು ಹಾಗೂ ನಮ್ಮನ್ನು ಸದಾ ರಕ್ಷಿಸುವ ಕಾರುಣ್ಯಮೂರ್ತಿ  ಭಗವಂತ ಪುಷ್ಕರಾಕ್ಷಃ.  ವೇದಗಳಲ್ಲಿ  ಹೇಳುವಂತೆ ಯಾವುದರಲ್ಲಿ ಇಡೀ ಪ್ರಪಂಚ ಹುದುಗಿದೆಯೋ ಅದು  “ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿತು".  ಹೊಕ್ಕುಳಲ್ಲಿ ಹುಟ್ಟಿದ್ದು ತಾವರೆರೂಪದ ಬ್ರಹ್ಮಾಂಡ (ಬ್ರಹ್ಮನ ಮೊಟ್ಟೆ). 14 ಎಸಳುಗಳುಳ್ಳ ತಾವರೆ ಅಂದರೆ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ. ಆದ್ದರಿಂದ ಭಗವಂತ ಪುಷ್ಕರದಲ್ಲಿ ತುಂಬಿರುವ ಅಕ್ಷ -ಪುಷ್ಕರಾಕ್ಷ.

41) ಮಹಾಸ್ವನಃ

ಮಹಾ ಎಂದರೆ ಮಹತ್ತಾದ , ಸ್ವನ ಎಂದರೆ ನಾದ. ಎಲ್ಲಕ್ಕಿಂತ ಮಹತ್ತಾದ ನಾದವಾದ ವೇದವನ್ನು ಸೃಷ್ಟಿ ಮಾಡಿದವನು ಮಹಾಸ್ವನ. ಮಹಾ+ಅಸು+ಅನ=ಮಹಾಸ್ವನ.ಇಲ್ಲಿ ಅಸು ಎಂದರೆ 'ಇಂದ್ರಿಯ', ಮಹಾಅಸು ಎಂದರೆ  'ಅತ್ಯಂತ ಮುಖ್ಯ ಇಂದ್ರಿಯ. ಅನ ಎಂದರೆ 'ಚಲನೆ'. ದೇಹದಲ್ಲಿ ಇರುವ ಎಲ್ಲಾ ಇಂದ್ರಿಯಗಳಲ್ಲಿ ಉಸಿರು(ಪ್ರಾಣ) ಅತ್ಯಂತ ಮುಖ್ಯ ಇಂದ್ರಿಯ. ಅದ್ದರಿಂದ ಅಸುಗಳಲ್ಲಿ ಮಹಾ ಅಸು ಉಸಿರು(ಮುಖ್ಯಪ್ರಾಣ). ಈ ಮುಖ್ಯಪ್ರಾಣನಿಗೂ ಕೂಡ ಚಲನೆ ಕೊಟ್ಟ ಭಗವಂತ ಮಹಾಸ್ವನಃ.

42) ಅನಾದಿನಿಧನಃ

ಭಗವಂತನಿಗೆ ಆದಿ-ಅಂತ, ಹುಟ್ಟು-ಸಾವು ಎನ್ನುವುದಿಲ್ಲ. ಪ್ರಾಣ(ಅನ)ನಲ್ಲಿ ಇದ್ದು, ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣನಾದ ಭಗವಂತ  ಅನಾದಿನಿಧನಃ

43) ಧಾತಾ

ಧಾತಾ ಅನ್ನುವ ಭಗವಂತನ ನಾಮ ಅನೇಕ ಅರ್ಥವನ್ನು  ಕೊಡುತ್ತದೆ. ಇಡೀ ಜಗತ್ತನ್ನು ಧಾರಣೆ ಮಾಡುವ ಮತ್ತು ಪೋಷಣೆ ಮಾಡುವ ಶಕ್ತಿ ಉಳ್ಳವನು,ಎಲ್ಲರಿಗೂ ಏನು  ಬೇಕೋ ಅದನ್ನು ಕೊಟ್ಟವನು, ಎಲ್ಲಾ ನಾಮವನ್ನು ಧರಿಸಿದವನು ಇತ್ಯಾದಿ. ಇಂತಹ   ಭಗವಂತ ಧಾತಾ.

44) ವಿಧಾತಾ

ಸಂಸಾರ ಅವಸ್ಥೆಯಲ್ಲಿ ಮಾತ್ರ ಅಲ್ಲ, ವಿಶಿಷ್ಟ ಅವಸ್ಥೆಯಲ್ಲಿಯೂ ಭಗವಂತ ಧಾತಾ ಅದ್ದರಿಂದ ಆತ ವಿಧಾತಾ.

45) ಧಾತುರುತ್ತಮಃ

ಧಾತುಃ ಎಂದರೆ  ಚತುರ್ಮುಖ ಬ್ರಹ್ಮನಿಗೂ ಉತ್ತಮನಾಗಿರುವವನು ಎಂದರ್ಥ. ಆತ ತ್ರಿಧಾತು ಅಂದರೆ ಮೂರನ್ನು ಧರಿಸಿರುವವನು. ಮೂರು ವೇದಗಳನ್ನು, ಮೂರು ಕಾಲ ಮತ್ತು ಮೂರು ಲೋಕವನ್ನು ಧರಿಸಿರುವ, ಎಲ್ಲರಿಗಿಂತ  ಶ್ರೇಷ್ಠನಾಗಿರುವ ಸರ್ವಾಧಾರನಾದ  ಭಗವಂತ ಧಾತುರುತ್ತಮಃ.

ಮುಂದುವರೆಯುವುದು.....

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ 6


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅಪ್ರಮೇಯೋ ಹೃಷೀಕೇಶಃ ಪದ್ಮನಾಭೋsಮರಪ್ರಭುಃ |
ವಿಶ್ವಕರ್ಮಾ ಮನುಸ್ವ್ತಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ || 6 ||

46) ಅಪ್ರಮೇಯಃ

ಅಪ್ರಮೇಯ ಎಂದರೆ ಕೈಗೆಟುಕದ, ನಮ್ಮ ಬುದ್ಧಿಯಿಂದ ಅಳೆಯಲು ಅಸಾಧ್ಯವಾದ, ಆದರೂ ತಿಳಿಯಲು ಸಾಧ್ಯವಾದವ ಎಂದರ್ಥ!  ಉದಾಹರಣೆಗೆ - ಸಮುದ್ರದ ನೀರು ಸಂಪೂರ್ಣ ನಮ್ಮ ಕೈಗೆಟಕದು. ಆದರೆ ನಮ್ಮಿಂದಾದಷ್ಟು ನಾವು ತಂದು ಮನೆಯಲ್ಲಿ ಶೇಖರಿಸಿಡಬಹುದು ಮತ್ತು ತಿಳಿಯಬಹುದು. ಒಂದು  ಚಮಚ ಸಮುದ್ರದ ನೀರಿನ ರುಚಿ ಉಳಿದ ನೀರಿನ ರುಚಿಗಿಂತ ಭಿನ್ನ ಅಲ್ಲ. ಭಗವಂತ ಕೂಡ ಸಮುದ್ರದ ನೀರಿನಂತೆ ಅದ್ದರಿಂದ ಆತ ಅಪ್ರಮೇಯ.

47) ಹೃಷೀಕೇಶಃ

ಭಗವಂತನನ್ನು ಹುಡುಕುತ್ತಾ ಹೋದರೆ, ಆತ  ಕ್ಷಿತಿಜದಂತೆ ದೂರ ದೂರ ಹೋಗುತ್ತಾನೆ. ಅದ್ದರಿಂದ ಅವನನ್ನು ಎಲ್ಲೆಲ್ಲೋ  ಹುಡುಕುವ ಬದಲು  ನಿಂತಲ್ಲೇ ನಿಂತು ನಿನ್ನೊಳಗೆ ಹುಡುಕು. ನಿನ್ನ ಹೃತ್ಕಮಲದಲ್ಲೇ ಅವನಿದ್ದಾನೆ!
ಹೃಷೀಕಗಳಿಗೆ ಈಶ ಹೃಷೀಕೇಶ. ಇಲ್ಲಿ  ಹೃಷೀಕ ಎಂದರೆ ಇಂದ್ರಿಯಗಳು. ಆತ ಇಂದ್ರಿಯಗಳ ಸ್ವಾಮಿ. ಆತನನ್ನು  ಇಂದ್ರಿಯದಿಂದ ನೋಡದೆ, ಇಂದ್ರಿಯದಲ್ಲಿ ನೋಡಬೇಕು. ಉಪನಿಷತ್ತಿನಲ್ಲಿ ಹೇಳುವಂತೆ- ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ , ಅದರಲ್ಲಿ ನಿಂತು ನೆಡೆಸುವವನು  ಹೃಷೀಕಗಳ  ಈಶನಾದ  ಹೃಷೀಕೇಶ.
ಕೇಶ ಅನ್ನುವ ಶಬ್ದಕ್ಕೆ ಸೂರ್ಯಕಿರಣ ಎಂಬ ಅರ್ಥವನ್ನು "ಕೇಶವ"  ಎಂಬಲ್ಲಿ ವಿಶ್ಲೇಷಿಸಿದ್ದೇವೆ.

ಸೂರ್ಯನ  ಕಿರಣದಲ್ಲಿ ಏಳು ಬಣ್ಣವಿದೆ, ನಮ್ಮ ದೇಹದಲ್ಲಿ ಏಳು ಶಕ್ತಿ ಚಕ್ರಗಳಿವೆ (ಸಹಸ್ರಾರ, ಆಜ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಸ್ಟಾನ ಮತ್ತು ಮೂಲಾಧಾರ - Pineal Gland, Pituitary Gland,Thyroid
and parathyroid, Adrenal Glands,Pancreas & Gonads). ಅದೇ ರೀತಿ ಅಗ್ನಿಯಲ್ಲಿ ಕೂಡ ಏಳು ಬಣ್ಣವಿದೆ. ನಮ್ಮ ದೇಹದಲ್ಲಿರುವ ಏಳು ಶಕ್ತಿ ಕೇಂದ್ರಗಳಿಂದ ಹೊರಹೊಮ್ಮುವ ಏಳು ಭಾವನೆಗಳನ್ನು ಅಗ್ನಿಯ ಏಳು ಬಣ್ಣಗಳ ಮೂಲಕ ಸೂರ್ಯಕಿರಣದ ಜೊತೆಗೆ ಸಮ್ಮಿಲನ ಮಾಡುವ ಕ್ರಿಯೆಯನ್ನು "ಹೋಮ" ಎನ್ನುತ್ತಾರೆ (ಅದ್ದರಿಂದ ಭಗವಂತನಿಗೆ ಸಲ್ಲಬೇಕಾದ ಯಾವುದೇ ಹೋಮವನ್ನು ರಾತ್ರಿ ಮಾಡುವುದಿಲ್ಲ). ಈ ಎಲ್ಲಾ ಏಳು ವರ್ಣದಲ್ಲಿ ತುಂಬಿ ಬದುಕಿಗೆ ಹರ್ಷವನ್ನು ಕೊಡತಕ್ಕಂತಹ ಭಗವಂತ ಹೃಷೀಕೇಶಃ.

48) ಪದ್ಮನಾಭಃ

ತಾವರೆರೂಪದ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ ಯಾರ ನಾಭಿಯಿಂದ ಸೃಷ್ಟಿಯಾಗಿದೆಯೋ,  ಅವನು ಪದ್ಮನಾಭ.  ಈ ಸೃಷ್ಟಿಯ ಕಾರಣಪುರುಷ.

49) ಅಮರಪ್ರಭುಃ

"ಮರರು" ಅಂದರೆ ಮರಣ ಹೊಂದುವವರು. "ಅಮರರು" ಅಂದರೆ ಮರಣವಿಲ್ಲದವರು ಎಂದರ್ಥ.
ಮರಣ ಕೇವಲ ಬೌದ್ಧಿಕ  ಶರೀರಕ್ಕೆ ಹೊರತು  ಸೂಕ್ಷ್ಮ ಶರೀರಕ್ಕಲ್ಲ. ಮುಕ್ತಿ ಪಡೆದ ಎಲ್ಲಾ ಜೀವರು ಅಮರರು.
ಬ್ರಹ್ಮಾದಿ-ದೇವತೆಗಳು ಅಮೃತಪಾನದಿಂದ  ಅಮರರೆನಿಸಿದ್ಧರೂ  ಕೂಡ ,  ಅವರಿಗೂ  ಹಲವು  ಕಲ್ಪಗಳ  ನಂತರ  ಮರಣ ಮತ್ತು ಮೋಕ್ಷವಿದೆ. ಆದರೆ ಬ್ರಹ್ಮಾದಿ-ದೇವತೆಗಳ ಆಯಸ್ಸು ಧೀರ್ಘವಾದ್ದರಿಂದ ಅವರನ್ನು ಅಮರರು ಎನ್ನುತ್ತಾರೆ. ಇಲ್ಲಿ ಅಮರಪ್ರಭು ಎಂದರೆ ಮುಕ್ತಿ ಪಡೆದ ಜೀವ ಹಾಗೂ ಬ್ರಹ್ಮಾದಿ-ದೇವತೆಗಳ ಒಡೆಯ(ಪ್ರಭು) ಎಂದರ್ಥ.

50) ವಿಶ್ವಕರ್ಮಾ

ವಿಶ್ವಕರ್ಮ ಎಂದರೆ ಈ ವಿಶ್ವದ ವಿನ್ಯಾಸಕಾರ (Architect). ಪ್ರಾಚೀನ ಗ್ರಂಥಗಳಲ್ಲಿ ಈ ವಿಶ್ವವನ್ನು ಐವತ್ತೈದು  ಅವಯವಗಳಿರುವ  ಪ್ರವೃತ್ತಿ  ಮತ್ತು ನಿವೃತ್ತಿ ಎಂಬ ಎರಡು ಹಣ್ಣುಗಳಿರುವ ಒಂದು ಮರವನ್ನಾಗಿ  ವರ್ಣಿಸಿದ್ದಾರೆ. ಇಲ್ಲಿ ಪ್ರವೃತ್ತಿ ಎಂದರೆ ಬೌದ್ಧಿಕ ಸುಖದ ಬೆನ್ನು ಹತ್ತುವ ಕರ್ಮ ಜೀವಿ,  ಹಾಗೂ  ನಿವೃತ್ತಿ ಎಂದರೆ ಬೌದ್ಧಿಕ ಸುಖಕ್ಕೆ ಬೆನ್ನು ಹಾಕಿ ಮೋಕ್ಷದತ್ತ ಪ್ರಯಾಣಿಸುತ್ತಿರುವವ ಎಂದರ್ಥ. ಭಗವಂತನ ಈ ಅಪೂರ್ವ ವಿನ್ಯಾಸದ ಹಿಂದಿರುವ ಐವತ್ತೈದು ಪ್ರಮುಖ ಅಂಗಗಳನ್ನು ಮರದ ಉದಾಹರಣೆಯೊಂದಿಗೆ ವರ್ಣಿಸಿದ್ದಾರೆ.
ಬನ್ನಿ, ಈ  ಅಪೂರ್ವ ವಿನ್ಯಾಸವನ್ನು ಸಂಕ್ಷಿಪ್ತವಾಗಿ  ನೋಡೋಣ.

1) ಏಕಾಯನಹಃ - ಈ  ವಿಶ್ವಕ್ಕೆ ಮೂಲ-ಪ್ರಕೃತಿ. ಇದನ್ನೇ ಇಲ್ಲಿ ಮರವೆಂದು ಕರೆದಿರುವುದು.
2-3 ) ವಿಫಲಹಃ -ಮೇಲೆ  ಹೇಳಿರುವ  ಪ್ರವೃತ್ತಿ  ಮತ್ತು ನಿವೃತ್ತಿ ಈ ಮರದಲ್ಲಿರುವ ಎರಡು ಹಣ್ಣುಗಳು.
4 -6 ) ತ್ರಿಮೂಲಹಃ -ಸತ್ವ , ರಜಸ್ಸು ಮತ್ತು ತಮಸ್ಸು ಎಂಬ ಮೂರು ಮೂಲಗಳು.
7-10 ) ಚತುರಸಹಃ -ಧರ್ಮ , ಅರ್ಥ , ಕಾಮ , ಮತ್ತು ಮೋಕ್ಷವೆಂಬ ನಾಲ್ಕು ರಸಗಳು.
11-15 ) ಪಂಚಶಿಖಃ -ಮಣ್ಣು , ನೀರು , ಬೆಂಕಿ , ಗಾಳಿ ಮತ್ತು ಆಕಾಶವೆಂಬ ಪಂಚಭೂತಗಳು. (ಅಥವಾ-ಶಬ್ದ , ಸ್ಪರ್ಶ ,ರೂಪ , ರಸ  ಮತ್ತು ಗಂಧ)
16-21 ) ಷಡಾತ್ಮ - ಆರು ಸ್ವಭಾವಗಳಾದ ಮೋಹ , ಶೋಕ ,ಕ್ಷುತ್ (ಹಸಿವು), ಪಿಪಾಸು(ಬಾಯಾರಿಕೆ) , ಜರ(ಅಜ್ಞಾನ)  ಮತ್ತು ವ್ಯಾಧಿ, ಹಾಗೂ ಆರು ಬೆಳವಣಿಗೆಯ ಹಂತಗಳಾದ-ಅಸ್ತಿ(ಗರ್ಭ ಪ್ರವೇಶಿಸುವ ಹಂತ ), ಜಾಯತೆ (ಹುಟ್ಟುವ ಹಂತ), ವರ್ಧತೆ (ಬೆಳವಣಿಗೆಯ ಹಂತ), ವಿಪರಿಣಮತೆ( ದೇಹದ ಬದಲಾವಣೆಯ ಹಂತ)  ಅಪಕ್ಷೀಯತೆ (ಮುದಿತನ) ಮತ್ತು ಕೊನೆಯದಾಗಿ ನಷ್ಯತೆ .
22-28) ಸಪ್ತತ್ವಕ್ -ಏಳು ತೊಗಟೆಗಳಾದ  ತ್ವಕ್ (ಚರ್ಮದ ಹೊರ ಪದರು), ಚರ್ಮ(ಒಳಚರ್ಮ), ಮಾಂಸ , ರಕ್ತ , ಮೇದಸ್ಸು ,ಮಜ್ಜ  ಮತ್ತು ಅಸ್ತಿ.
29-36) ಅಷ್ಟವಿಟಪಹಃ -ಎಂಟು ಬಗೆಯ ಜೀವಜಾತಗಳು (ಉದಾಹರಣೆಗೆ- ದೇವತೆಗಳು, ರಾಕ್ಷಸರು,ಮನುಷ್ಯರು, ಧಾನವರು.. ಇತ್ಯಾದಿ).
37-45 ) ನವಾಕ್ಷಹಃ -ಒಂಬತ್ತು ಪೊಟರೆಗಳಾದ ನವದ್ವಾರಗಳು (ಕಣ್ಣು, ಕಿವಿ , ಮೂಗು , ಬಾಯಿ ,ಮಲ-ಮೂತ್ರ ದ್ವಾರ) 
45-55) ದಶಸ್ಚದಹಃ -ಹತ್ತು ಎಲೆಗಳು- ಐದು ಜ್ಞಾನೇಂದ್ರಿಯ ಮತ್ತು ಐದು ಕರ್ಮೇಂದ್ರಿಯಗಳು.
ಇಂತಹ  ವಾಸ್ತುಶಿಲ್ಪದ ಈ  ವಿಶಿಷ್ಟವಾದ ವಿಶ್ವವನ್ನು ವಿನ್ಯಾಸಗೊಳಿಸಿರುವ ಭಗವಂತ ವಿಶ್ವಕರ್ಮ.
ಈ ಪ್ರಪಂಚದಲ್ಲಿ ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿಲ್ಲ. ಭಗವಂತನ ಅದ್ವಿತೀಯ ಅಖಂಡ ವಿನ್ಯಾಸಕ್ಕೆ ಉತ್ತಮ ಉದಾಹರಣೆ ಮನುಷ್ಯನ ಬೆರಳಚ್ಚು (Finger print) ಒಬ್ಬನ ಬೆರಳಚ್ಚು ಇನ್ನೊಬ್ಬನಿಗಿಂತ  ಭಿನ್ನ ! ಇದು ಸಾಮಾನ್ಯ ವಿನ್ಯಾಸವಲ್ಲ.

ಮೇಲಿನ ಅರ್ಥವಲ್ಲದೆ ಇನ್ನೂ ಅನೇಕ ಅರ್ಥಗಳನ್ನು ಈ ನಾಮದಲ್ಲಿ ನೋಡಬಹುದು. ವಿಶ್ವ ಅನ್ನುವ ಶಬ್ದಕ್ಕೆ 'ಎಲ್ಲಾ' ಎನ್ನುವ ಅರ್ಥವಿದೆ, ಅದ್ದರಿಂದ ವಿಶ್ವಕರ್ಮ ಎಂದರೆ ಸರ್ವ-ಕರ್ಮಗಳ ನಿಯಾಮಕ ಭಗವಂತ.
ಪುರಾಣದಲ್ಲಿ ಕಾಣುವ ದೇವ ಶಿಲ್ಪಿ-ವಿಶ್ವಕರ್ಮ. ದೇವಸ್ಥಾನ ಮತ್ತು ಮನೆಯ ವಾಸ್ತು ವಿನ್ಯಾಸವನ್ನು ದೇವಶಿಲ್ಪಿಯ ಒಳಗೆ ನಿಂತು ನಮಗೆ ಕರುಣಿಸಿದ ಭಗವಂತ ವಿಶ್ವಕರ್ಮ ಇತ್ಯಾದಿ.

51) ಮನುಃ

ಮನ್ವಂತರಗಳನ್ನು ಮನು ಎಂದೂ  ಕರೆಯುತ್ತಾರೆ. ಮನ್ವಂತರಗಳು  ಹದಿನಾಲ್ಕು. ಅವುಗಳೆಂದರೆ:
1 ) ಸ್ವಾಯಂಭುವ  ಮನು, 2) ಸ್ವರೋಚಿಶ ಮನು, 3) ಉತ್ತಮ ಮನು, 4) ತಪಾಸ ಮನು  5) ರೈವತ ಮನು, 6) ಚಕ್ಷುಶ ಮನು, 7) ವೈವಸ್ವತ ಮನು (ಈಗ ನಡೆಯುತ್ತಿರುವುದು) , 8) ಸಾವರಣಿ ಮನು, 9) ದಕ್ಷ ಸಾವರಣಿ  ಮನು, 10) ಬ್ರಹ್ಮ ಸಾವರಣಿ  ಮನು, 11) ಧರ್ಮ ಸಾವರಣಿ  ಮನು, 12)  ಮೇರು ಸಾವರಣಿ ಮನು, 13) ದೇವ ಸಾವರಣಿ  ಮನು, 14) ಇಂದ್ರ ಸಾವರಣಿ  ಮನು.

1 ಮಾನವ ವರ್ಷ = ದೇವತೆಗಳ 1 ದಿನ (ಉತ್ತರಾಯಣ ಹಗಲು ಮತ್ತು ದಕ್ಷಿಣಾಯಣ ರಾತ್ರಿ).
360 ಮಾನವ ವರ್ಷ = ದೇವತೆಗಳ 360 ದಿನ = 1 ದೇವ ವರ್ಷ.
1200 ದೇವ ವರ್ಷ = 4,32,000 ಮಾನವ ವರ್ಷ = 1 ಕಲಿಯುಗದ ಅವಧಿ.
2400 ದೇವ ವರ್ಷ = 8,64,000 ಮಾನವ ವರ್ಷ = 1 ದ್ವಾಪರ ಯುಗದ ಅವಧಿ.
3600 ದೇವ ವರ್ಷ = 12,96,000 ಮಾನವ  ವರ್ಷ = 1 ತ್ರೇತಾ ಯುಗದ ಅವಧಿ.
4800 ದೇವ ವರ್ಷ = 17,28,000 ಮಾನವ  ವರ್ಷ = 1 ಕೃತ ಯುಗದ ಅವಧಿ.
12,000 ದೇವ ವರ್ಷ = 43,20,000 ಮಾನವ  ವರ್ಷ = 1 ಮಹಾಯುಗ.
ಸುಮಾರು 71 ಮಹಾಯುಗ = 1 `ಮನ್ವಂತರ', ಒಂದು  ಮನುವಿನ ವರ್ಷ.
1000 ಮಹಾಯುಗ = 1 ದಿನ ಕಲ್ಪ = ಒಂದು ಬ್ರಹ್ಮ ದಿನ (ಹಗಲು)
720 ದಿನ ಕಲ್ಪ = 1  ಬ್ರಹ್ಮ ವರ್ಷ
ಒಂದು ಬ್ರಹ್ಮನ ಅವಧಿ 100 ಬ್ರಹ್ಮ ವರ್ಷ = 43,20,000 x 1000 x 720 x 100 =
31,104,000,00,00,000 (31,104 ಸಾವಿರ ಕೋಟಿ) ಮಾನವ  ವರ್ಷ !! 

ಯಾವುದರ ಮೂಲಕ ಮನನ ಮಾಡುತ್ತೇವೋ ಅವನು ಮನು (ಮನನ ಮಾಡುವುದು ಮಂತ್ರಗಳ ಮೂಲಕ )
ಅದ್ದರಿಂದ ಮನು ಅಂದರೆ ಮನುವಿನೊಳಗಿದ್ದು (ಮಂತ್ರಗಳಲ್ಲಿ  ಮತ್ತು  ಮನ್ವಂತರಗಳಲ್ಲಿ ಇದ್ದು) , ಮನುವಾಗಿ ಎಲ್ಲವನ್ನೂ ಬಲ್ಲ  ಭಗವಂತ !

52) ತ್ವಷ್ಟಾ

ತ್ವಷ್ಟೃ ಅಂದರೆ ಉಳಿಯಿಂದ ಮರವನ್ನು ಕೆತ್ತುವ ಶಿಲ್ಪಿ ಎನ್ನುವ ಅರ್ಥವನ್ನು ಕೊಡುತ್ತದೆ. ಈ ಹಿಂದೆ ವಿಶ್ವಕರ್ಮ ನಾಮಕನಾಗಿ ಭಗವಂತನನ್ನು ಶ್ರೇಷ್ಠ ವಿನ್ಯಾಸಕಾರನಾಗಿ ನೋಡಿದ್ದೇವೆ. ಇಲ್ಲಿ ತ್ವಷ್ಟೃ ಅಂದರೆ ಮಣ್ಣು , ನೀರು ಮತ್ತು  ಬೆಂಕಿಯೆಂಬ ಉಳಿಯಿಂದ, ಅದ್ಭುತ ಸೌಂದರ್ಯದಿಂದ ಕೂಡಿದ ಈ ವಿಶ್ವವನ್ನು ಕೆತ್ತಿದ ಅಪೂರ್ವ ಶಿಲ್ಪಿ ಎಂದರ್ಥ. ಪ್ರಳಯ ಕಾಲದಲ್ಲಿ ಎಲ್ಲವನ್ನೂ ಸಂಹರಿಸುವ ಭಗವಂತ ತ್ವಷ್ಟಾ.

53) ಸ್ಥವಿಷ್ಠಃ

ಸ್ಥವಿಷ್ಠ ಅಂದರೆ ಸ್ಥೂಲಕಾಯ ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ವಿವಿಧತೆಯಾತ್-ವಿಷ್ಟಥಿ.  ಅಂದರೆ ಆಕಾಶದಂತೆ ಸ್ಥೂಲನಾಗಿರುವವ ಆದರೆ  ಅನಂತ ರೂಪದಲ್ಲಿ ಅನಂತ ವಸ್ತುವಿನಲ್ಲಿ ಅದ್ವಿತೀಯ, ಅನನ್ಯ, ಅನುಪಮ  ರೂಪಕನಾಗಿ ತುಂಬಿರುವವನು. ಈ ರೀತಿ ಅಖಂಡವಾಗಿ  ಉಹಿಸಲೂ  ಅಸಾಧ್ಯವಾದ   ಅದ್ಭುತ  ಕಾಯನಾದ ಭಗವಂತ  ಸ್ಥವಿಷ್ಠ.

54) ಸ್ಥವಿರೋ ಧ್ರುವಃ

ಸ್ಥವಿರೋ  ಧ್ರುವ ಅಂದರೆ- ಮೇಲೆ ಹೇಳಿರುವ ಇಷ್ಟೊಂದು ವೈವಿಧ್ಯತೆಗಳಿಂದ ಎಲ್ಲಾ ಆಕಾರದಲ್ಲೂ ಇದ್ದು ನಿರ್ವಿಕಾರನಾಗಿರುವ ಭಗವಂತ. ಎಲ್ಲಕ್ಕಿಂತ ಮೊದಲಿದ್ದ ಅಚಲ ತತ್ವ.

ಮುಂದುವರೆಯುವುದು....