Sunday, May 7, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -25


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಆವರ್ತನೋ ನಿವೃತ್ತಾತ್ಮಾ ಸಂವೃತಃ ಸಂಪ್ರಮರ್ದನಃ |
ಅಹಃ ಸಂವರ್ತಕೋ ವಹ್ನಿ ಅನಿಲೋ ಧರಣೀಧರಃ || 25 ||

229) ಆವರ್ತನಃ

ಆವರ್ತನ ಎಂದರೆ ಸೃಷ್ಟಿ ಚಕ್ರವನ್ನು ನಿರಂತರ ತಿರುಗಿಸುತ್ತಿರುವವನು ಎಂದರ್ಥ. ಈ ವಿಶ್ವ ಎಂದೋ ಒಮ್ಮೆ ಸೃಷ್ಟಿಯಾಯಿತು, ಇನ್ನು ಎಷ್ಟೋ ಕೋಟಿ ವರ್ಷಗಳ ನಂತರ ಪ್ರಳಯವಾಗಿ ನಾಶವಾಗುತ್ತದೆ. ಯಾವುದಕ್ಕೆ ಆದಿ ಇದೆಯೋ ಅದಕ್ಕೆ ಅಂತ್ಯ ಕೂಡಾ ಇದೆ. ೩೧,೧೦೪ ಸಾವಿರ ಕೋಟಿ ವರ್ಷಗಳಿಗೊಮ್ಮೆ ಮಹಾ ಪ್ರಳಯವಾಗುತ್ತದೆ. ಆಗ ಈ ಕಣ್ಣಿಗೆ ಕಾಣುವ ಸೃಷ್ಟಿ ನಾಶವಾಗುತ್ತದೆ. ಪುನಃ ೩೧,೧೦೪ ಸಾವಿರ ಕೋಟಿ ವರ್ಷಗಳ ನಂತರ ಮರು ಸೃಷ್ಟಿಯಾಗುತ್ತದೆ. ಈ ಸೃಷ್ಟಿ-ಪ್ರಳಯ ಎನ್ನುವ ಕ್ರಿಯೆ ನಿರಂತರ. ಈ ಮಹಾ ಪ್ರಳಯವಲ್ಲದೆ ೪೩೨ ಕೋಟಿ ವರ್ಷಕ್ಕೊಮ್ಮೆ ಮಧ್ಯಮ ಪ್ರಳಯ ಹಾಗು ಸುಮಾರು ೩೧ ಕೋಟಿ ವರ್ಷಕ್ಕೊಮ್ಮೆ ಚಿಕ್ಕ ಪ್ರಳಯ. ಈ ರೀತಿ ಸೃಷ್ಟಿ-ಪ್ರಳಯಗಳು ಆವರ್ತನಗೊಳ್ಳುತ್ತವೆ. ಸೃಷ್ಟಿ ಚಕ್ರವನ್ನು ನಿರಂತರ ತಿರುಗಿಸುವ ಭಗವಂತ ಆವರ್ತನಃ.

 ಈ ಕಾರಣಕ್ಕಾಗಿ ಭಗವಂತನನ್ನು “ಅನಂತ ಕೋಟಿ ಬ್ರಹ್ಮಾಂಡ ನಾಯಕ” ಎನ್ನುತ್ತಾರೆ. ಈ ಸೃಷ್ಟಿಯ ನಿಯಾಮಕ ಶಕ್ತಿಗಳು ನಿವೃತ್ತಿಯಾದ ಮೇಲೆ ನಿರಂತರವಾಗಿ ಅನಾದಿ ಅನಂತಕಾಲದವರೆಗೆ ಆವೃತ್ತಿಯಾಗುತ್ತಿರುತ್ತಾರೆ. ಪ್ರತಿಯೊಂದು ಶಕ್ತಿಯೊಳಗೆ ಭಗವಂತ ನಿಯಾಮಕನಾಗಿ ಆವರ್ತನಾಗುತ್ತಿರುತ್ತಾನೆ. ಆವರ್ತ ಎಂದರೆ "ಸುಳಿ" ಎನ್ನುವ ಇನ್ನೊಂದು ಅರ್ಥವಿದೆ. ಬದುಕಿನಲ್ಲಿ ಆಗಾಗ ನಾವು ಆಪತ್ತಿನ ಸುಳಿಗೆ ಸಿಕ್ಕಿಹಾಕಿಕೊಂಡಾಗ, ಮುಂದಾಳಾಗಿ ನಮ್ಮನ್ನು ಪಾರುಮಾಡುವ ("ಆವರ್ತ-ನಯತಿ") ಭಗವಂತ ಆವರ್ತನಃ. ಪ್ರತಿಯೊಬ್ಬರಿಗೂ ಜೀವನದಲ್ಲಿ ಸಮಸ್ಯೆಯ ಸುಳಿ ಇದ್ದೇ ಇರುತ್ತದೆ. ದೇವಾದಿ ದೇವತೆಗಳಿಗೂ ಇದು ತಪ್ಪಿದ್ದಲ್ಲ. ಇದಕ್ಕೆ ಉತ್ತಮ ಉದಾಹರಣೆ ಯುದಿಷ್ಠಿರ ಹಾಗೂ ದ್ರೌಪದಿ. ಸ್ವತಃ ಧರ್ಮರಾಯನ ಅವತಾರಿಯಾದ ಯುದಿಷ್ಠಿರ, ಭಾರತಿಯ ಅವತಾರಿಣಿ ದ್ರೌಪದಿ ಪಟ್ಟ ಕಷ್ಟ ನಮಗೆಲ್ಲ ಗೊತ್ತೇ ಇದೆ. ಭಗವಂತ ನಮ್ಮ ಜೀವಿತ ಕಾಲದಲ್ಲಿ ನಮಗೆ ಕೊಡುವ ಪಾತ್ರವನ್ನು ನಾವು ನಮ್ಮ ಕರ್ತವ್ಯವೆಂದು ನಿಭಾಯಿಸಬೇಕು. ಜೀವನದಲ್ಲಿ ಏನು ಬರುತ್ತದೋ ಅದನ್ನು ಆಸ್ವಾದಿಸಬೇಕು. ಅದನ್ನು ಹೊಂದಿಸಿಕೊಂಡು ನೆಡೆಯುವುದೇ ಜೀವನ. ಆವರ್ತನನಾದ ಭಗವಂತ ಸದಾ ನಮ್ಮ ರಕ್ಷಣೆ ಮಾಡುತ್ತಿರುತ್ತಾನೆ ಎನ್ನುವ ನಂಬಿಕೆ ‘ಭಗವಂತನ ಶ್ರೀರಕ್ಷೆ’

೨೩೧) (ಅ)ನಿವೃತ್ತಾತ್ಮಾ

ಈ ನಾಮವನ್ನು ನಿವೃತ್ತಾತ್ಮಾ ಹಾಗೂ ಅನಿವೃತ್ತಾತ್ಮಾ ಎನ್ನುವ ಎರಡು ರೂಪದಲ್ಲಿ ಉಚ್ಚರಿಸಬಹುದು. ಯಾವ ನಂಟೂ ಇಲ್ಲದೆ ಯಾವುದಕ್ಕೂ ಅಂಟಿಕೊಳ್ಳದ ನಿಷ್ಪಕ್ಷಪಾತಿ ಹಾಗೂ ಯಾರಿಂದ ನಾವು ನಿವೃತ್ತಿ ಕಡೆ ತಿರುಗಬಹುದೋ ಅವನು ನಿವೃತ್ತಾತ್ಮಾ. ಇನ್ನು ಅನಿವೃತ್ತಾತ್ಮಾ ಅನ್ನುವ ನಾಮದಲ್ಲಿ 'ಅನಿ' ಎಂದರೆ 'ಜೀವಿ'. ಸರ್ವ ಜೀವಿಗಳಲ್ಲಿ ಅಂತರ್ಯಾಮಿಯಾಗಿ ಕುಳಿತಿರುವ ಭಗವಂತ ಅನಿವೃತ್ತಾತ್ಮಾ. ಪ್ರಾಣದೇವರನ್ನು 'ಅನಿ' ಎಂದು ಕರೆಯುತ್ತಾರೆ. ಯಾವಾಗಲೂ ಪ್ರಾಣದೇವರನ್ನು ತನ್ನ ಅಂತರಂಗದ ಸಚಿವನಾಗಿರಿಸಿಕೊಂಡಿರುವ ಭಗವಂತ ಅನಿವೃತ್ತಾತ್ಮಾ.

೨೩೨) ಸಂವೃತ

ಹೃದಯಗುಹೆಯೊಳಗೆ ಅಡಗಿ ಕುಳಿತವನು; ಸಮೀಚೀನವಾದ ಸದ್ಗುಣಗಳ ಸಾಗರನಾದ ಭಗವಂತ ಸಂವೃತ.

೨೩೩) ಸಂಪ್ರಮರ್ದನ.

ಸಂ+ಪ್ರ+ಮರ್ದನ-ಸಂಪ್ರಮರ್ದನ; ಏಕಾಕ್ಷರ ಕೋಶದಲ್ಲಿ ವಿಷ್ಣುವಾಚಕ ಹನ್ನೊಂದು ನಾಮಗಳಿವೆ; ಅವುಗಳೆಂದರೆ: ಅ, ಕಾ, ಯ, ಪ್ರ, ವಿ, ಸಂ, ಭೂ, ಮಾ, ಸ, ಕ ಮತ್ತು ಹ.

ಈ ಪ್ರತಿಯೊಂದು ಪದಕ್ಕೂ ವಿಶಿಷ್ಟವಾದ ಅರ್ಥವಿದೆ. ಸಾಮಾನ್ಯವಾಗಿ ಉಪಸರ್ಗ ಧಾತುವಿನೊಂದಿಗೆ ಸೇರಿದಾಗ ಧಾತುವಿನಲ್ಲಿ ನಿಗೂಢವಾಗಿ ಅಡಗಿರುವ ಅರ್ಥ ವ್ಯಂಜನವಾಗುತ್ತದೆ.

 ಉದಾಹರಣೆಗೆ "ಹಾರ" ಇದಕ್ಕೆ 'ಸಂ' ಸೇರಿದರೆ ಸಂಹಾರ, 'ಪ್ರ' ಸೇರಿದರೆ ಪ್ರಹಾರ, ವಿ ಸೇರಿದರೆ ವಿಹಾರ! ಹೀಗೆ ಇಲ್ಲಿ 'ಸಂ' ಎಂದರೆ ಸಂಪೂರ್ಣವಾದ, ಸಮಾನವಾದ ಎನ್ನುವ ಅರ್ಥವನ್ನು ಕೊಡುತ್ತದೆ. 'ಪ್ರ' ಎಂದರೆ ಪ್ರಕೃಷ್ಟವಾದ ಅರಿವು. ಆದ್ದರಿಂದ ಸಂಪ್ರಮರ್ದನಃ ಎಂದರೆ ನಮಗೆ ಯಾವುದೇ ತಾರತಮ್ಯವಿಲ್ಲದೆ, ಪರಿಪೂರ್ಣವಾದ ಅರಿವನ್ನು ಕೊಟ್ಟು, ತರಬೇತಿಗೊಳಿಸಿ ಕೊನೆಗೆ ಈ ಬೌದ್ದಿಕ ಶರೀರವನ್ನು "ಮರ್ದನ" ಮಾಡಿ ಮುಕ್ತಿಯನ್ನು ಕರುಣಿಸುವವ.

೨೩೪) ಅಹಃಸಂವರ್ತಕ

ಅಹಃ ಎನ್ನುವುದನ್ನು 'ಅಹಹ' ಹಾಗು ಅಹಂ ಎಂದು ಎರಡು ರೂಪದಲ್ಲಿ ಅರ್ಥೈಸಬಹುದು. ಬೆಳಕು ಹಾಗೂ ಬೆಳಕಿಗೆ ಕಾರಣಕರ್ತ ಸೂರ್ಯ 'ಅಹಹ' ಹಾಗೂ ನಾವು ಯಾವುದನ್ನು ಬಿಟ್ಟು ಇರಲು ಅಸಾಧ್ಯವೋ ಅದು 'ಅಹಂ'. ಗೀತೆಯಲ್ಲಿ ಹೇಳುವಂತೆ:

ನ ತದಸ್ತಿ ವಿನಾ ಯತ್ ಸ್ಯಾನ್ಮಯಾ ಭೂತಂ ಚರಾಚರಂ

ಅಂದರೆ "ನನ್ನನ್ನು ಹೊರತುಪಡಿಸಿ ಈ ಚರಾಚರದಲ್ಲಿ ಯಾವುದೂ ತಾನೆ-ತಾನಾಗಿ ಇಲ್ಲ".
ಹೀಗೆ ಪಿಂಡಾಂಡ ಹಾಗೂ ಬ್ರಹ್ಮಾಂಡದಲ್ಲಿರುವ ಪ್ರವರ್ತಕ ಭಗವಂತ ಅಹಃಸಂವರ್ತಕ.

೨೩೫) ವಹ್ನಿ

ವಹ್ನಿ ಎಂದರೆ ವಾಹನ ಅಥವಾ ಕೊಂಡೊಯ್ಯುವವ. ನಮ್ಮ ಪಾಪ ಪುಣ್ಯಕ್ಕನುಸಾರವಾಗಿ ನಾವು ಯಾವ ಎತ್ತರಕ್ಕೇರಬೇಕೋ ಅಲ್ಲಿಗೆ ಕೊಂಡೊಯ್ಯುವವ. ಮೋಕ್ಷಯೋಗ್ಯ ಜೀವರನ್ನು ಮೋಕ್ಷಕ್ಕೆ ಕೊಂಡೊಯ್ಯುವ ಹಾಗೂ ಸಮಸ್ತ ಬ್ರಹ್ಮಾದಿ ದೇವತೆಗಳ ನಿಯಾಮಕನಾದ ಭಗವಂತ ವಹ್ನಿ.

೨೩೬) ಅನಿಲ

ಅನಿಲ ಎಂದರೆ ಪಂಚಭೂತಗಳಲ್ಲಿ ಒಂದಾದ "ಗಾಳಿ" ಎನ್ನುವುದು ರೂಢಾರ್ಥ. ಆದರೆ ಇದರ ಶಬ್ದನಿಷ್ಪತ್ತಿ ತೀರಾ ಭಿನ್ನವಾದ ಅರ್ಥವನ್ನು ಕೊಡುತ್ತದೆ. "ನಿಲ" ಎಂದರೆ "ನಿಲಯನ". ಅಂದರೆ ನೆಲೆ ಅಥವಾ ಆಶ್ರಯ. ಭಗವಂತ "ಅ-ನಿಲ", ಎಂದರೆ ಸರ್ವರಿಗೂ ನೆಲೆಯಾಗಿ ಕಾಪಾಡುವ ಭಗವಂತ ಸ್ವಯಂ ಇನ್ನೊಬ್ಬರ ಆಶ್ರಯದಲ್ಲಿರುವವನಲ್ಲ. ಆತ ಅನಿಲ.

೨೩೭) ಧರಣೀಧರ.

ಧರಣೀಧರ ಎಂದರೆ ಭೂಮಿಯನ್ನು ಹೊತ್ತವನು. ಭಗವಂತ ವಾಮನಾವತಾರದಲ್ಲಿ ಕಕ್ಷೆ ತಪ್ಪಿದ್ದ ಭೂಮಿಯನ್ನು ಪುನಃ ಕಕ್ಷೆಯಲ್ಲಿಟ್ಟು ರಕ್ಷಿಸಿದ ಕರುಣಾಮಯಿ. ಸರ್ವ ಗ್ರಹ-ಗೋಲವನ್ನು ನಿರ್ದಿಷ್ಟವಾಗಿ ಹಿಡಿದಿಟ್ಟು ನಡೆಸುವ ಭಗವಂತ ಧರಣೀಧರ.

ಮುಂದುವರೆಯುವುದು...

No comments:

Post a Comment