ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಸತ್ವವಾನ್ ಸಾತ್ತ್ವಿಕಃ ಸತ್ಯಃ ಸತ್ಯಧರ್ಮಪರಾಯಣಃ |
ಅಭಿಪ್ರಾಯಃ ಪ್ರಿಯಾರ್ಹೋsರ್ಹಃ ಪ್ರಿಯಕೃತ್ ಪ್ರೀತಿವರ್ಧನಃ || 93 ||
೮೭೨) ಸತ್ವವಾನ್
ಸತ್ವ ಎಂದರೆ ಎಂದರೆ ಸಾಮರ್ಥ್ಯ. ಒಂದು ದೈಹಿಕ ಸಾಮರ್ಥ್ಯವಾದ ಬಲ, ಇನ್ನೊಂದು ಬೌದ್ಧಿಕ ಸಾಮರ್ಥ್ಯವಾದ ಜ್ಞಾನ. ಪೂರ್ಣವಾದ ಜ್ಞಾನ ಹಾಗೂ ಬಲವುಳ್ಳ ಭಗವಂತ ಸತ್ವವಾನ್.
೮೭೩) ಸಾತ್ವಿಕಃ
ಯಾರಲ್ಲಿ ಜ್ಞಾನ ಭಲವಿದೆಯೋ ಅವರಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುತ್ತದೆ. ಬಲದಲ್ಲಿ ಭೀಮ, ಆಂಜನೇಯ, ಲಕ್ಷ್ಮಣ, ಅರ್ಜುನ; ಇವರೆಲ್ಲರ ಒಳಗೆ ಸನ್ನಿಹಿತನಾಗಿದ್ದ ಭಗವಂತ ಸ್ವಯಂ ವೇದವ್ಯಾಸನಾಗಿ ಜ್ಞಾನಾರ್ಜನೆ ಮಾಡಿದ ಸಾತ್ವಿಕಃ. ಸಾತ್ವಿಕರಲ್ಲಿ ನೆಲೆನಿಂತು ಅಲ್ಲಿ ಸಾತ್ವಿಕತೆಯನ್ನು ನೆಲೆಗೊಳಿಸುವ ಭಗವಂತ ಸಾತ್ವಿಕಃ.
೮೭೪) ಸತ್ಯಃ
ಸತ್ತಂ ಯಾಪಯತಿ ಇತೀ ಸತ್ಯಃ. ಸತ್ ಎಂದರೆ ಇರುವಿಕೆ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ನಾಶ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ನಿಯಮನ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ಜ್ಞಾನ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ಅಜ್ಞಾನ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ವಿಷಾದ ರೂಪದ ಸಂಸಾರ, ಅದನ್ನು ಕೊಡುವವ ಸತ್ಯಃ; ಸತ್ ಎಂದರೆ ಮೋಕ್ಷ, ಅದನ್ನು ಕೊಡುವವ ಸತ್ಯಃ. ಹೀಗೆ ಸೃಷ್ಟಿ-ಸ್ಥಿತಿ-ಸಂಹಾರ-ನಿಯಮನ-ಜ್ಞಾನ-ಅಜ್ಞಾನ-ಬಂಧ-ಮೋಕ್ಷಗಳನ್ನು ಕೊಡತಕ್ಕ ಭಗವಂತ ಸತ್ಯಃ.
೮೭೫) ಸತ್ಯಧರ್ಮಪರಾಯಣಃ
ಪರಂ ಅಯನಂ-ಪರಾಯಣಂ; ಅಂದರೆ ಪೂರ್ಣ ಪ್ರಮಾಣದ ರಕ್ಷಣೆ. ಭಗವಂತ ಸತ್ಯ ಮತ್ತು ಧರ್ಮದ ದಾರಿಯಲ್ಲಿ ನಡೆಯುವವರಿಗೆ ಪೂರ್ಣ ಪ್ರಮಾಣದ ರಕ್ಷಕ.
೮೭೬) ಅಭಿಪ್ರಾಯಃ
ಸಮಸ್ತ ವೇದಗಳ ಅಭಿಪ್ರಾಯ ಭಗವಂತ. ಒಂದು ಸೂಕ್ತದಲ್ಲಿ ಅಗ್ನಿ, ಒಂದು ಸೂಕ್ತದಲ್ಲಿ ಕರ್ಮ, ಒಂದು ಸೂಕ್ತದಲ್ಲಿ ಇಂದ್ರ, ಆದರೆ ಎಲ್ಲಾ ವೇದಗಳ ಏಕ ಅಭಿಪ್ರಾಯ ಭಗವಂತನೊಬ್ಬನೆ.
ಭಾಗವತದ ೧೧ನೇ ಸ್ಕಂದದಲ್ಲಿ ಬರುವ 'ಉದ್ಧವ ಗೀತೆಯಲ್ಲಿ ಶ್ರೀ ಕೃಷ್ಣ ಈ ರೀತಿ ಹೇಳಿದ್ದಾನೆ:
ಮಾಂ ವಿಧತ್ತೇ ಅಭಿಧತ್ತೇ ಮಾಂ ವಿಕಲ್ಪ್ಯ ಅಪೋಹ್ಯೈತ್ಯಹಂ |
ಇತ್ಯಸ್ಯ ಹೃದಯಂ ಸಾಕ್ಷಾತ್ ನಾನ್ಯೋ ಮದ್ವೇದ ಕಸ್ಚನಃ ||
ಅಂದರೆ "ಸಮಸ್ತ ವೇದವೂ ನನಗೋಸ್ಕರ ಇದೆ. ಅದು ನನ್ನನ್ನು ಹೇಳುತ್ತದೆ. ಇನ್ಯಾವುದನ್ನೋ ಹೇಳಿದರೆ ಅದು ನನ್ನ ಹಿರಿಮೆಯನ್ನು ಸಾರುವುದಕ್ಕೊಸ್ಕರ ಹೇಳುತ್ತದೆ".
ವೇದವ್ಯಾಸರು ಇದನ್ನು ಹೀಗೆ ಹೇಳಿದ್ದಾರೆ:
“ವೇದೇ ರಾಮಾಯಣಂಚೈವ ಪುರಾಣೇ ಭಾರತೇ ತಥಾ, ಆದೌ ಅಂತೇ ಚ ಮಧ್ಯೆ ಚ, ವಿಷ್ಣುಃ ಸರ್ವತ್ರಗೀಯತೆ ”
ಸರ್ವ ವೇದದ ಅಭಿಪ್ರಾಯ ಭಗವಂತ, ಆತ ಅಭಿಪ್ರಾಯಃ.
೮೭೭) ಪ್ರಿಯಾರ್ಹಃ
ಎಲ್ಲರ ಪ್ರೀತಿಗೆ ಅರ್ಹವಾದ, ಎಲ್ಲರೂ ಪ್ರೀತಿಸುವ ಅತ್ಯಂತ ಯೋಗ್ಯವಾದ ವಸ್ತು ಭಗವಂತ ಪ್ರಿಯಾರ್ಹಃ.
೮೭೮) ಅರ್ಹಪ್ರಿಯಕೃತ್
ಅತ್ಯಂತ ಪ್ರೀಯಾರ್ಹವಾದ, ಎಲ್ಲರಿಂದ ಪೂಜಿಸಲ್ಪಡುವ,ಎಲ್ಲರ ಪ್ರೀತಿಗೆ ಯೋಗ್ಯವಾದ, ಎಲ್ಲರಿಗೂ ಪ್ರಿಯವಾದುದ್ದನ್ನು ಮಾಡುವ ಭಗವಂತ ಅರ್ಹಪ್ರಿಯಕೃತ್.
೮೭೯) ಪ್ರೀತಿವರ್ಧನಃ
ಪ್ರೀತಿ ಹುಟ್ಟಿಸುವ ಹಾಗು ಅದಕ್ಕೆ ವ್ಯತಿರಿಕ್ತವಾಗಿ ಪ್ರೀತಿ ಕುಗ್ಗಿಸುವ ಭಗವಂತ ಪ್ರೀತಿವರ್ಧನಃ. ನಮಗೆ ಕೆಲವರನ್ನು ನೋಡಿದಾಗ ಪ್ರೀತಿಸಬೇಕು ಎನ್ನಿಸುತ್ತದೆ. ಆದರೆ ಇನ್ನು ಕೆಲವರನ್ನು ನೋಡಿದರೆ ಅಸಹ್ಯವೆನಿಸುತ್ತದೆ. ಪ್ರೀತಿಯನ್ನು ಸೆಳೆಯುವ ವ್ಯಕ್ತಿತ್ವವನ್ನು ಕೊಡುವ ಅಥವಾ ಕಸಿದುಕೊಳ್ಳುವ ಭಗವಂತ ಪ್ರೀತಿವರ್ಧನಃ.
ಮುಂದುವರೆಯುವುದು...✍️💐
No comments:
Post a Comment