ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಸನಾತ್ ಸನಾತನತಮಃ ಕಪಿಲಃ ಕಪಿರವ್ಯಯಃ |
ಸ್ವಸ್ತಿದಃ ಸ್ವಸ್ತಿಕೃತ್ ಸ್ವಸ್ತಿ ಸ್ವಸ್ತಿಭುಕ್ ಸ್ವಸ್ತಿದಕ್ಷಿಣಃ || 96 ||
೮೯೮) ಸನಾತ್
ಕೆಲವರು ಹೇಳುವುದಿದೆ "ದೇವರು ಎನ್ನುವುದು ಮನುಷ್ಯನ ಮಾನಸಿಕ ಕಲ್ಪನೆ" ಎಂದು. ಇಂತಹ ಪೊಳ್ಳು ವಾದಕ್ಕೆ ಭಗವಂತನ ಈ ನಾಮ ಉತ್ತರ. ಭಗವಂತ ಎನ್ನುವ ತತ್ವ ನಮ್ಮ ನಂಬಿಕೆಯನ್ನವಲಂಬಿಸಿ ಇರುವುದಲ್ಲ. ಅದು ಯಾವಾಗಲೂ ಎಂದೆಂದೂ ಇರುವ ಶಕ್ತಿ. ಆತ ಸನಾತ್.
೮೯೯) ಸನಾತನತಮಃ
ಭಗವಂತ ಸನಾತನತಮಃ, 'ಸನ' ಎಂದರೆ ಎಲ್ಲಾ ಕಾಲದಲ್ಲಿ, 'ತನ' ಎಂದರೆ ಇರುವಂತದ್ದು. 'ತಮ' ಎಂದರೆ ನಿಯಂತ್ರಿಸುವುದು. ಭಗವಂತ ಎಲ್ಲರಿಗಿಂತ ಪುರಾತನ. ಆತ ಅನಾದಿನಿತ್ಯ. ಎಲ್ಲಾ ಕಾಲದಲ್ಲಿ ಇರುವಂತಹ ಇತರ ತತ್ವಗಳೆಂದರೆ ಜೀವರು, ಪ್ರಕೃತಿ , ಆಕಾಶ, ಕಾಲ ಇತ್ಯಾದಿ. ಭಗವಂತ ಎಲ್ಲಾ ಸನಾತನವನ್ನು ನಿಯಂತ್ರಿಸುವ, ಪರಿಪೂರ್ಣವಾದ, ನಿರ್ವಿಕಾರ ಸ್ವರೂಪ.
೯೦೦) ಕಪಿಲಃ
ಕಪಿಲ ಎನ್ನುವುದು ಭಗವಂತನ ಒಂದು ಅವತಾರದ ಹೆಸರು. ಸ್ವಾಯಂಭುವ ಮನುವಿನ ಕಾಲದಲ್ಲಿ ದೇವಭೂತಿ ಹಾಗೂ ಕರ್ದಮ ಪ್ರಜಾಪತಿಯ ದಾಂಪತ್ಯ ಫಲದಲ್ಲಿ ಮೂಡಿಬಂದ ಭಗವಂತನ ಅವತಾರ ಕಪಿಲ. ಇದಲ್ಲದೆ ಜಗತ್ತಿಗೆ ಸಂಖ್ಯಾಶಾಸ್ತ್ರವನ್ನು ಕೊಟ್ಟ ಭಗವಂತ ಕಪಿಲಃ.
೯೦೧) ಕಪಿಃ
ಕಂ ಎಂದರೆ ಸುಖ, ಸದಾ ಆನಂದದ ಸ್ಥಿತಿಯಲ್ಲಿರುವ ಭಗವಂತ ಕಪಿಃ. ಕಂಪಯತೀತಿ ಇತಿ ಕಪಿಃ, ತನ್ನ ನೀತಿಗೆ ಬದ್ಧವಾಗದೆ ಇರುವ ದುಷ್ಟರನ್ನು ನಡುಗಿಸುವ ಭಗವಂತ ಕಪಿಃ.
೯೦೨) ಅಪ್ಯಯಃ
ಪ್ರಳಯ ಕಾಲದಲ್ಲಿ ಎಲ್ಲವನ್ನು ತನ್ನ ಒಡಲಲ್ಲಿ ಅಡಗಿಸಿಟ್ಟು ರಕ್ಷಿಸುವ ಭಗವಂತ ಅಪ್ಯಯಃ.
೯೦೩) ಸ್ವಸ್ತಿದಃ
ಸದಾ ಸಂಕಟ, ದುಃಖವಿಲ್ಲದ ಆನಂದಮಯವಾದ ಸ್ಥಿತಿಯನ್ನು ಸಜ್ಜನರಿಗೆ ಕೊಡುವ ಭಗವಂತ ಸ್ವಸ್ತಿದಃ, ಯಾರು ಅಧರ್ಮದ ಹಾದಿಯಲ್ಲಿರುತ್ತಾರೋ ಅವರ ಸುಖದ ಇರವನ್ನು ನಾಶಮಾಡುವ ಭಗವಂತ ಸ್ವಸ್ತಿದಃ.
೯೦೪) ಸ್ವಸ್ತಿಕೃತ್
ಬದುಕಿನಲ್ಲಿ ಆನಂದದ ಇರವನ್ನು ಸೃಷ್ಟಿಮಾಡುವ(ಕೃತ) ಭಗವಂತ, ಇದ್ದ ಆನಂದವನ್ನು ಕತ್ತರಿಸಿ ತೆಗೆಯುತ್ತಾನೆ(ಕೃನ್ತತಿ), ಇದು ಆತನ ಶಿಕ್ಷಣ ಕ್ರಮ ಹಾಗು ದುಷ್ಟ ನಿಗ್ರಹದ ಜಾಲ.
೯೦೫) ಸ್ವಸ್ತಿ
ಸದಾ ಆನಂದಮಯ ಸ್ವರೂಪನಾಗಿರುವ ಸಚ್ಚಿಧಾನಂದ ಸ್ವರೂಪ ಭಗವಂತ ಸ್ವಸ್ತಿ. ಈ ಕಾರಣಕ್ಕಾಗಿ ಸದಾ ಮನೆಯಲ್ಲಿ ಸಂತೋಷವಿರಲಿ ಎನ್ನುವ ಉದ್ದೇಶದಿಂದ, ಮನೆ ಮುಂದೆ ಸ್ವಸ್ತಿ ಎಂದು ಬರೆಯುತ್ತಾರೆ. ಭಗವಂತ ಮಂಗಳ ಸ್ವರೂಪ ಹಾಗು ಆನಂದ ಸ್ವರೂಪ.
೯೦೬) ಸ್ವಸ್ತಿಭುಕ್
ನಿರಂತರ ಆನಂದ ಭೋಗಿಸುವ ಭಗವಂತ ಸ್ವಸ್ತಿಭುಕ್. ಆತ ಜಗತ್ತಿನ ಸಮಸ್ಥ ಆನಂದವನ್ನು ಅನುಭವಿಸುತ್ತಿರುತ್ತಾನೆ.
೯೦೭) ಸ್ವಸ್ತಿದಕ್ಷಿಣಃ
ಭಗವಂತನ ನಿರಂತರ ಆರಾಧನೆ ಮಾಡುವ ಭಕ್ತರಿಗೆ ನಿರಂತರ ಆನಂದವನ್ನುಕೊಡುವ, ಲಕ್ಷ್ಮಿಯನ್ನು ಸದಾ ತನ್ನ ಎಡಭಾಗದಲ್ಲಿ ಧರಿಸಿದ ಆನಂದ ಸ್ವರೂಪ ಭಗವಂತ ಸ್ವಸ್ತಿದಕ್ಷಿಣಃ.
ಮುಂದುವರೆಯುವುದು....✍️💐
No comments:
Post a Comment