Sunday, June 25, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -105


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಯಜ್ಞಭೃದ್ಯಜ್ಞಕೃದ್ಯಜ್ಞೀ ಯಜ್ಞಭುಗ್ಯಜ್ಞ ಸಾಧನಃ |
ಯಜ್ಞಾಂತಕೃದ್ಯಜ್ಞಗುಹ್ಯಮನ್ನಮನ್ನಾದ ಏವ ಚ || 105 ||

೯೭೭) ಯಜ್ಞಭೃತ್

ಯಜ್ಞವನ್ನು ಹಾಗೂ ಯಜ್ಞಾಭಿಮಾನಿ ದೇವತೆಯನ್ನು ಧಾರಣೆ ಮಾಡಿದ ಭಗವಂತ ಯಜ್ಞಭೃತ್. ಭಗವಂತ ಯಜ್ಞ ಪಾಲಕ, ಇಂದ್ರ ಹಾಗು ಇಂದ್ರಪುತ್ರ (ಜಯಂತ ಅಥವಾ ಯಜ್ಞ)ನ ಪಾಲಕ.

೯೭೮) ಯಜ್ಞಕೃತ್

ಇಲ್ಲಿ  'ಕೃತ್' ಎಂದರೆ ಮಾಡಗೊಡುವವನು ಎನ್ನುವುದು ಒಂದು ಅರ್ಥವಾದರೆ ಇನ್ನೊಂದು ಅರ್ಥದಲ್ಲಿ 'ಮಾಡದಂತೆ ಮಾಡುವವನು'; ಯಜ್ಞವನ್ನು ಮಾಡಗೊಡುವವನ ಭಗವಂತ, ಯಜ್ಞ ಮಾಡದಂತೆ ಮಾಡುವವನೂ ಅವನೇ!

೯೭೯) ಯಜ್ಞೀ

ಯಜ್ಞಉಳ್ಳವನು, ಯಜ್ಞಗಳ ಒಡೆಯ. ಯಜ್ಞದ ಎಲ್ಲಾ ಹೊಣೆಗಾರಿಕೆ, ಅದರ ಸ್ವಾತಂತ್ರ್ಯ, ಫಲವನ್ನು ಕೊಡುವವನು, ಯಜ್ಞವನ್ನು ಸ್ವೀಕರಿಸುವವನು, ನಮ್ಮ ಒಳಗೆ-ಹೊರಗೆ ಇದ್ದು ಯಜ್ಞದ ಒಂದೊಂದು ಕ್ರಿಯೆಯಲ್ಲಿ ತುಂಬಿ ಯಜ್ಞವನ್ನು ನಿರ್ವಹಣೆ ಮಾಡುವ ಭಗವಂತ ಯಜ್ಞೀ.

೯೮೦) ಯಜ್ಞಭುಕ್

ಹಿಂದೆ ಹೇಳಿದಂತೆ ಯಜ್ಞದಲ್ಲಿ ಯಾವ ಆಹುತಿಯನ್ನು ಯಾವ ದೇವತೆಯ ಹೆಸರಿನಲ್ಲಿ ಅರ್ಪಿಸಿದರೂ ಅದು ಮೊದಲು ಸೇರುವುದು ಭಗವಂತನನ್ನು. ಗೀತೆಯಲ್ಲಿ ಹೇಳಿದಂತೆ :

ಅಹಂ ಹಿ ಸರ್ವಯಜ್ಞಾನಾಂ ಭೋಕ್ತಾ ಚ ಪ್ರಭುರೇವ ಚ |
ನ ತು ಮಾಮಭಿಜಾನನ್ತಿ ತತ್ತ್ವೇನಾತಶ್ಚ್ಯವನ್ತಿ ತೇ ||

ಯಜ್ಞದಲ್ಲಿ ಅರ್ಪಿಸುವ ಸರ್ವ ಹವಿಸ್ಸು ಭಗವಂತನ ಮುಖೇನವೇ ಇತರ ದೇವತೆಗಳನ್ನು ಸೇರುವುದು. ಆತ ಯಜ್ಞ ಪಾಲಕ; ಸರ್ವ ಯಜ್ಞ ಭೋಕ್ತಾರ.
ಕರೋಮಿ  ಯದ್ಯತ್  ಸಕಲಂ  ಪರಸ್ಮೈ  ನಾರಾಯಣಾಯೇತಿ  ಸಮರ್ಪಯಾಮಿ.
ನಾವು ಏನು ಮಾಡಿದರೂ ಅದು ನಾರಾಯಣನಿಗೆ ಅರ್ಪಿತ.

೯೮೧) ಯಜ್ಞಸಾಧನಃ

ನಿಯಮಿತವಾದ ಯಜ್ಞದಲ್ಲಿ ಒಟ್ಟು ಹದಿನೆಂಟು ಮಂದಿ ಸೇರಿ ಯಜ್ಞ ಮಾಡುತ್ತಾರೆ. ನಾಲ್ಕು ಮಂದಿ ಋಗ್ವೇದದವರು, ನಾಲ್ಕು ಮಂದಿ ಯಜುರ್ವೇದದವರು. ನಾಲ್ಕು ಮಂದಿ ಸಾಮ ವೇದದವರು, ಬ್ರಹ್ಮತ್ತ್ವಕ್ಕೆ ಒಬ್ಬ ಮುಖ್ಯಸ್ಥ ಹಾಗೂ ಆತನಿಗೆ ಮೂರು ಮಂದಿ ಸಹಾಯಕರು. ಇನ್ನು ಯಜ್ಞ ಮಾಡಿಸುವ ಯಜಮಾನ ಹಾಗೂ ಆತನ ಪತ್ನಿ. ಒಟ್ಟಿಗೆ ಹದಿನೆಂಟು ಮಂದಿ. ಇಲ್ಲಿ ಬ್ರಹ್ಮತ್ತ್ವ ವಹಿಸಿರುವವನು ಯಾವ ಮಂತ್ರವನ್ನೂ ಹೇಳುವುದಿಲ್ಲ, ಆದರೆ ಯಜ್ಞದ ವಿಧಿ-ವಿಧಾನದಲ್ಲಿ  ಯಾವುದೇ ಲೋಪವಾದರೂ ಸಹ ಆತ ಜವಾಬ್ದಾರಿ.

ಹಿಂದೆ ಪ್ರಮುಖವಾಗಿ ಎರಡು ತರಹದ ಯಾಗ ಮಾಡುತ್ತಿದ್ದರು. ಒಂದು ಶುದ್ಧ ಶಾಖಾಹಾರಿಗಳ ಯಾಗ ಹಾಗು ಇನ್ನೊಂದು ಮಾಂಸಾಹಾರಿಗಳು ಮಾಡುವ ಯಾಗ. ಆಗಿನ ಕಾಲದಲ್ಲಿ ಪ್ರಮುಖವಾಗಿ ಯಾಗ ಮಾಡುತ್ತಿದ್ದವರು ಕ್ಷತ್ರಿಯರು, ಅವರು ಮಾಂಸಹಾರಿಗಳಾಗಿದ್ದರು. ನಾವು ಏನು ತಿನ್ನುತ್ತೆವೋ ಅದನ್ನು ದೇವರಿಗೆ ಅರ್ಪಿಸಿ ಯಜ್ಞಶೇಷವೆಂದು ತಿನ್ನುವುದು ಪ್ರಾಚೀನ ಸಂಪ್ರದಾಯವಾಗಿತ್ತು. ಕ್ಷತ್ರಿಯರು ಯಾಗದಲ್ಲಿ ಹದಿನೆಂಟು ಬಗೆಯ ಪ್ರಾಣಿಗಳನ್ನು (ಒಂಬತ್ತು ಸಾಕು ಪ್ರಾಣಿ ಹಾಗೂ ಒಂಭತ್ತು ಕಾಡು ಪ್ರಾಣಿ) ಭಗವಂತನಿಗೆ ಬಲಿಯಾಗಿ ಅರ್ಪಿಸಿ ಯಾಗ ಮಾಡುತ್ತಿದ್ದರು.

ಭಗವಂತ, ಯಜ್ಞ ಮಾಡುವವರಲ್ಲಿರುವವನೂ ಅವನೇ, ಹವಿಸ್ಸಿನಲ್ಲಿರುವವನೂ ಅವನೇ, ಯಜ್ಞವನ್ನು ಸ್ವೀಕಾರ ಮಾಡುವವನೂ ಅವನೇ. ಇಂತಹ ಭಗವಂತ ಯಜ್ಞ ಸಾಧನಃ.

೯೮೨) ಯಜ್ಞಾಂತಕೃತ್

ಯಾವುದು ನಿಜವಾದ ಯಜ್ಞ, ಯಾವುದು ತಪ್ಪು, ಯಾವುದು ಸರಿ, ಯಾವುದು ಯಜ್ಞವಲ್ಲ ಎಂದು ಕೊನೆಯದಾಗಿ ನಿರ್ಧರಿಸುವವನು ಭಗವಂತ. ಆತ ಮೆಚ್ಚದ ಯಾವುದೇ ಪೂಜೆ ಯಜ್ಞವಾಗದು. ಧರ್ಮಕ್ಕೆ ಚ್ಯುತಿ ಬರುವಂತಹ, ಸ್ವಾರ್ಥದಿಂದ ಅಹಂಕಾರದಿಂದ ಮಾಡುವ ಯಜ್ಞವನ್ನು ಆತ ಸ್ವೀಕರಿಸದೇ ಧ್ವಂಸ ಮಾಡುತ್ತಾನೆ. ಇದಕ್ಕೆ ಉತ್ತಮ ಉದಾಹರಣೆ ದಕ್ಷಯಜ್ಞ. ದಕ್ಷ ನಿಯಮಿತವಾಗಿ ಯಜ್ಞ ಪ್ರಾರಂಭಿಸಿದ. ಆದರೆ ಅಹಂಕಾರದಿಂದ ಶಿವನನ್ನು ಅಪಮಾನ ಮಾಡಿದ. ಇಂತಹ ಅಹಂಕಾರಭರಿತ ಯಜ್ಞವನ್ನು ಭಗವಂತ ಸ್ವೀಕರಿಸದೇ ವೀರಭದ್ರನ ಮುಖೇನ ಸಂಪೂರ್ಣ ಯಜ್ಞವನ್ನು ಧ್ವಂಸ ಮಾಡಿದ. ಹಿಂದೆ ಹೇಳಿದಂತೆ ಶಿವಶಕ್ತಿ-ವಿಷ್ಣುಶಕ್ತಿ ಹಾಲಿನಲ್ಲಿರುವ ಬೆಣ್ಣೆಯಂತೆ, ಇಲ್ಲಿ ನಾವು ಅಪಮಾನವಾಗುವಂತೆ ವರ್ತಿಸಿದರೆ ಅದನ್ನು ಭಗವಂತ ಎಂದೂ ಮೆಚ್ಚುವುದಿಲ್ಲ. ಭಗವಂತನಿಗೆ ಅರ್ಪಿಸಿ ಮಾಡುವ ಪ್ರತಿಯೊಂದು ಕೆಲಸವೂ ಯಜ್ಞ. ಅಹಂಕಾರದಿಂದ ಮಾಡುವ ಯಾವ ಯಜ್ಞವೂ ಯಜ್ಞವಲ್ಲ. ಹೀಗೆ ಯಜ್ಞದ ಅಂತ್ಯವನ್ನು ನಿರ್ಧರಿಸುವ ಭಗವಂತ ಯಜ್ಞಾಂತಕೃತ್.

೯೮೩) ಯಜ್ಞಗುಹ್ಯಮ್

ಜಗತ್ತಿನಲ್ಲಿ ನಡೆಯುವ ಎಲ್ಲಾ ಯಜ್ಞದ ರಹಸ್ಯ ತಿಳಿದ, ಯಜ್ಞದಲ್ಲಿ ನಿಗೂಢವಾಗಿ ತುಂಬಿರುವ ಭಗವಂತ ಯಜ್ಞಗುಹ್ಯಮ್.

೯೮೪) ಅನ್ನಮ್

ಅನ್ನಮ್ ಅಂದರೆ ಭೋಜ್ಯ. ತೈತ್ತಿರೀಯ  ಉಪನಿಷತ್ತಿನಲ್ಲಿ  ಬರುವ ಈ ಶ್ಲೋಕ ಈ ನಾಮವನ್ನು ಹಾಗೂ ಮುಂದಿನ ನಾಮವನ್ನು ಸ್ಪಷ್ಟವಾಗಿ ಹೇಳುತ್ತದೆ.

ಅಹಮ್  ಅನ್ನಮ್  ಅಹಮ್  ಅನ್ನಮ್  ಅಹಮ್  ಅನ್ನಮ್ |
ಅಹಮ್ ಅನ್ನಾದೋऽಹಮ್  ಅನ್ನಾದೋऽಹಮ್ ಅನ್ನಾದಃ ||

"ನಾನೆ ಅನ್ನ ನಾನೆ ಅನ್ನಾದ"; ಭೋಜ್ಯವಾಗಿ ಈ ಪ್ರಪಂಚದಲ್ಲಿ ತುಂಬಿರುವ ಸಮಸ್ತ ವಸ್ತುಗಳ ಒಳಗೆ ಚೈತನ್ಯವಾಗಿ ತುಂಬಿರುವ ಭಗವಂತ ಅನ್ನಮ್. ಅನ್ನದ ಅಭಿಮಾನಿ ದೇವತೆಯಾದ ಚತುರ್ಮುಖನಲ್ಲಿ ಸನ್ನಿಹಿತನಾಗಿರುವ ಭಗವಂತ ಅನ್ನಮ್.

೯೮೫) ಅನ್ನಾದ

ಸರ್ವ ಭೋಜ್ಯವನ್ನು ಜೀವದೊಳಗಿದ್ದು ಭೋಗಿಸುವ, ಅನ್ನದ ಅಭಿಮಾನಿ ದೇವತೆ ಚತುರ್ಮುಖನನ್ನೂ  ಕೂಡಾ ಮಹಾ ಪ್ರಳಯದಲ್ಲಿ ಕಬಳಿಸುವ ಭಗವಂತ ಅನ್ನಾದ.
ಈ ಶ್ಲೋಕದಲ್ಲಿ ಪರಸ್ಪರ ವಿರುದ್ಧ ಅರ್ಥವನ್ನು ಕೊಡುವ 'ಏವ, ಚ' ಎನ್ನುವ ಎರಡು ಅವ್ಯಯಗಳಿವೆ. ಚ ಎಂದರೆ ಕೂಡಾ, ಏವ ಎಂದರೆ ಅವನದ್ದೇ ಎನ್ನುವ ಅರ್ಥವನ್ನು ಕೊಡುತ್ತವೆ. ಅಂದರೆ ಈ ಎಲ್ಲಾ ಹೆಸರುಗಳೂ ನಿನ್ನವೇ ಆದರೂ ಕೂಡಾ ಬೇರೆಯವರದ್ದೂ ಹೌದು. ಏಕೆಂದರೆ ಭಗವಂತನನ್ನು ಹೇಳದ ಶಬ್ಧ ಈ ಪ್ರಪಂಚದಲ್ಲಿಲ್ಲ. ಸರ್ವ ಶಬ್ಧವೂ ಕೂಡಾ ಮುಖ್ಯವಾಗಿ ಭಗವಂತನನ್ನು ಹೇಳುತ್ತವೆ-ನಂತರ ಇತರರನ್ನು ಹೇಳುತ್ತವೆ.

ಮುಂದುವರೆಯುವುದು....✍️💐

No comments:

Post a Comment