Saturday, June 10, 2023

ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ -90


ಶ್ರೀ ವಿಷ್ಣುಸಹಸ್ರನಾಮ ಸ್ತೋತ್ರಂ - ಅರ್ಥಸಹಿತ
ವಿದ್ಯಾವಾಚಸ್ಪತಿ ಬನ್ನಂಜೆ ಶ್ರೀ ಗೋವಿಂದಾಚಾರ್ಯರ ಪ್ರವಚನ.
ಸರಣಿ ಮಾಲೆ:
ಶ್ರೀ ಗುರುಭ್ಯೋ ನಮಃ | ಹರಿಃ ಓಂ |

ಅಣುರ್ಬೃಹತ್ ಕೃಶಃ ಸ್ಥೂಲೋ ಗುಣಭೃನ್ನಿರ್ಗುಣೋ ಮಹಾನ್ |
ಅಧೃತಃ ಸ್ವಧೃತಃ ಸ್ವಾಸ್ಯಃ ಪ್ರಾಗ್ವಂಶೋ ವಂಶವರ್ಧನಃ || 90 ||

೮೪೦) ಅಣುಃ

ಅಣುವಿನಲ್ಲಿ ಅಣುವಾಗಿರುವ ಭಗವಂತ ಅಣುಃ. ಇದನ್ನು ಭಗವದ್ ಗೀತೆಯಲ್ಲಿ ಹೀಗೆ ಹೇಳಿದ್ದಾರೆ:

ಕವಿಂ ಪುರಾಣಮನುಶಾಸಿತಾರಮಣೋರಣೀಯಾಂಸಮನುಸ್ಮರೇದ್ ಯಃ ।
ಸರ್ವಸ್ಯ ಧಾತಾರಮಚಿಂತ್ಯರೂಪಮಾದಿತ್ಯವರ್ಣಂ ತಮಸಃ ಪರಸ್ತಾತ್ ||

"ಎಲ್ಲವನ್ನು ಬಲ್ಲವನು, ಎಲ್ಲಕ್ಕಿಂತ ಮೊದಲಿದ್ದವನು, ಎಲ್ಲರ ಒಡೆಯ. ಅಣುವಿಗಿಂತ ಅಣು"

೮೪೧) ಬೃಹತ್

ಭಗವಂತ ಎಲ್ಲಾ ದೊಡ್ದವಸ್ತುವಿಗಿಂತ ದೊಡ್ಡವನು. ಮಹತ್ತಿಗಿಂತ ಮಹತ್ತಾದವನು. ಅವನು ಬೃಹತ್.

೮೪೨) ಕೃಶಃ

ಭಗವಂತ ತೆಳುಮೈಯವನು! ಕೃಶನಲ್ಲಿ ಕೃಶನಾಗಿ, ಅವರಿಗೆ ಕಾಶ್ಯವನ್ನು ಕೊಟ್ಟ ಭಗವಂತ ಕೃಶಃ.

೮೪೩) ಸ್ಥೂಲಃ

ಎಲ್ಲೆಡೆ ತುಂಬಿರುವ ಹಿರಿ ಮೈಯವನು! ಸ್ಥೂಲ ದೇಹಿಯಲ್ಲಿ ಸ್ಥೂಲನಾಗಿ ನಿಂತು ಸ್ಥೂಲನಾದ ಭಗವಂತ ಸ್ಥೂಲಃ.

೮೪೪) ಗುಣಭೃತ್

ಜ್ಞಾನಾನಂದದಿಂದ ಗುಣಪೂರ್ಣನಾದ ಭಗವಂತ ಗುಣಭೃತ್.

೮೪೫) ನಿರ್ಗುಣಃ

ತ್ರಿಗುಣಾತೀತ ಭಗವಂತನಿಗೆ ಬಂಧಕಕಾರಿ ಗುಣಗಳಿಲ್ಲ. ಅವನು ಗುಣರಹಿತ-ನಿರ್ಗುಣಃ.

೮೪೬) ಮಹಾನ್

ನಮ್ಮೆಲ್ಲಾ ಚಿಂತನೆಗೆ ಎಟುಕದಷ್ಟು ದೊಡ್ಡವನು. ಎಲ್ಲಕ್ಕಿಂತ ಎತ್ತರದಲ್ಲಿರುವ ಭಗವಂತ  ಮಹಾನ್.

೮೪೭) ಅಧೃತಃ

ಭಗವಂತನಿಗೆ ಇನ್ನೊಬ್ಬರು ಧಾರಕರಿಲ್ಲ ಆತ ಎಲ್ಲರನ್ನೂ ರಕ್ಷಿಸುವ ವಿಶ್ವಶಕ್ತಿ.

೮೪೮) ಸ್ವಧೃತಃ

ತನ್ನನ್ನು ತಾನೇ ಧರಿಸಿದವನು. ತನ್ನ ಮಹಿಮೆಯಲ್ಲಿ ನೆಲೆಗೊಂಡವನು.

೮೪೯) ಸ್ವಾಸ್ಯಃ

ಚೆಲು ಮೊರೆಯವನು! ಆತ ಭೂಮಿಯಲ್ಲಿ ರೂಪ ತೊಟ್ಟು ಬಂದಾಗ, ವಿಶೇಷವಾಗಿ ರಾಮ ಹಾಗು ಕೃಷ್ಣಾವತಾರದಲ್ಲಿ ಎಲ್ಲರೂ ಆತನನ್ನು ನೋಡಿ ಆಕರ್ಶಿತರಾಗುತ್ತಿದ್ದರು. ಆತ ಚಲುವರ ಚಲುವ-ಸ್ವಾಸ್ಯಃ.

೮೫೦) ಪ್ರಾಗ್ವಂಶಃ

ಮೊದಲು ತನ್ನ ಪ್ರಪಂಚದ ವಂಶವನ್ನು ಬೆಳೆಸಿದವನು ಪ್ರಾಗ್ವಂಶಃ. ನಾವೆಲ್ಲರೂ ಭಗವಂತನ ವಂಶದಿಂದ ಬಂದವರು. ಇಲ್ಲಿ ನನ್ನ ವಂಶ ದೊಡ್ಡದು, ನಿನ್ನ ವಂಶ ಚಿಕ್ಕದು ಎಂದಿಲ್ಲ. ಎಲ್ಲರೂ ಭಗವಂತನ ವಂಶದಿಂದ ಬಂದವರು. ಎಲ್ಲರಿಗೂ ಭಗವಂತ ಒಬ್ಬನೆ.

೮೫೧) ವಂಶವರ್ಧನಃ
ತನ್ನ ವಂಶವಾದ ವಿಶ್ವವನ್ನು ಬೆಳೆಸುವವನು. ಹಾಗು ಪ್ರಳಯ ಕಾಲದಲ್ಲಿ ಸಂಹಾರ ಮಾಡುವವನು.

ಮುಂದುವರೆಯುವುದು...✍️💐

No comments:

Post a Comment